ADVERTISEMENT

ಸಿದ್ಧಾಂತ್‌, ನೀತಿ ಮುಡಿಗೆ ಪ್ರಶಸ್ತಿ ಗರಿ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಅಥರ್ವ, ಆಯುಷಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:53 IST
Last Updated 27 ಜುಲೈ 2019, 19:53 IST
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು (ಎಡದಿಂದ) ಸಿದ್ಧಾಂತ್ ವಾಸನ್, ಅಥರ್ವ ನವರಂಗೆ, ಆಯುಷಿ ಬಾಲಕೃಷ್ಣ ಗೋಡ್ಸೆ ಮತ್ತು ನೀತಿ ಅಗರವಾಲ್
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು (ಎಡದಿಂದ) ಸಿದ್ಧಾಂತ್ ವಾಸನ್, ಅಥರ್ವ ನವರಂಗೆ, ಆಯುಷಿ ಬಾಲಕೃಷ್ಣ ಗೋಡ್ಸೆ ಮತ್ತು ನೀತಿ ಅಗರವಾಲ್   

ಬೆಂಗಳೂರು: ಸಿದ್ಧಾಂತ್ ವಾಸನ್ ಮತ್ತು ನೀತಿ ಅಗರವಾಲ್, ಇಲ್ಲಿ ನಡೆದ ಕೆನರಾ ಯೂನಿಯನ್ ಆಶ್ರಯದ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ಕೆಡೆಟ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಸಿದ್ಧಾಂತ್‌ 11–6, 11–4, 11–9ರಲ್ಲಿ ಮಾನಸ್ ಬಾಬು ಎದುರು ಗೆಲುವು ಸಾಧಿಸಿದರು. ಬಾಲಕಿಯರ ಫೈನಲ್‌ನಲ್ಲಿ ನೀತಿಗೆ ವೃಶಾಲಿ ಕಿಣಿ ಅವರಿಂದ ಪ್ರಬಲ ಪ್ರತಿಸ್ಪರ್ಧೆ ಎದುರಾಯಿತು. ರೋಚಕ ಹೋರಾಟದಲ್ಲಿ ನೀತಿ 4–11, 11–9, 11–7, 11–7ರಲ್ಲಿ ಜಯ ಗಳಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಮಿನಿ ಕೆಡೆಟ್ ವಿಭಾಗದಲ್ಲಿ ಅಥರ್ವ ನವರಂಗೆ 11–7, 11–6, 7–11, 11–8ರಲ್ಲಿ ಸಿದ್ಧಾಂತ್‌ ಧಾರಿವಾಲ ಎದುರು ಗೆದ್ದು ಪ್ರಶಸ್ತಿ ಗಳಿಸಿದರು. ಇದೇ ವಯೋಮಾನದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಆಯುಷಿ ಬಾಲಕೃಷ್ಣ ಗೋಡ್ಸೆ 11–7, 11–1, 11–7ರಲ್ಲಿ ಸ್ಮೃತಿ ಸುದರ್ಶನ್‌ ಅವರನ್ನು ಮಣಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.