ಬೆಂಗಳೂರು: ಕರ್ನಾಟಕದ ಆಟಗಾರರಾದ ಬಿ.ಆರ್. ನಿಕ್ಷೇಪ್ ಮತ್ತು ತಥಾಗತ್ ಚರಂತಿಮಠ ಅವರು ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಆಯೋಜಿಸುತ್ತಿರುವ ಐಟಿಎಫ್ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ.
ಭಾನುವಾರಅರ್ಹತಾ ಸುತ್ತಿನ ಪಂದ್ಯಗಳೊಂದಿಗೆ ಟೂರ್ನಿಯು ಆರಂಭವಾಗಲಿದೆ. ಭಾರತದ ಮಾಜಿ ಜೂನಿಯರ್ ಅಗ್ರಕ್ರಮಾಂಕದ ಆಟಗಾರ ನಿಕ್ಷೇಪ್ ಜೊತೆಗೆ ಡೇವಿಸ್ ಕಪ್ ಟೂರ್ನಿಯಲ್ಲಿ ಆಡಿದ್ದ ವಿಷ್ಣುವರ್ಧನ್, ಅನಿರುದ್ಧ ಚಂದ್ರಶೇಖರ್ ಅವರಿಗೂ ವೈಲ್ಡ್ಕಾರ್ಡ್ ಲಭಿಸಿದೆ.
ಈ ನಾಲ್ವರು ಆಟಗಾರರು ಎಂಟು ಮಂದಿ ಕ್ವಾಲಿಫೈಯರ್ಸ್ ಮತ್ತು ಮುಖ್ಯ ಸುತ್ತಿನಲ್ಲಿರುವ 20 ಮಂದಿಯನ್ನು ಸೇರಿಕೊಳ್ಳಲಿದ್ದಾರೆ. ನಿಕ್ಷೇಪ್ ಮತ್ತು ತಥಾಗತ್ ಅವರು ಮೊದಲ ಬಾರಿ ಐಟಿಎಫ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
‘ತವರು ನೆಲದಲ್ಲಿ ಮೊದಲ ಬಾರಿ ಐಟಿಎಫ್ ಟೂರ್ನಿಯಲ್ಲಿ ಆಡುವುದಕ್ಕೆ ಕಾತರನಾಗಿದ್ದೇನೆ. ಅವಕಾಶ ನೀಡಿದ ಕೆಎಸ್ಎಲ್ಟಿಎಗೆ ಕೃತಜ್ಞತೆಗಳು‘ ಎಂದು 24 ವರ್ಷದ ನಿಕ್ಷೇಪ್ ಹೇಳಿದ್ದಾರೆ.
‘ಕೆಲವು ಪ್ರಮುಖ ಆಟಗಾರರನ್ನು ಹೊರತುಪಡಿಸಿ ಎಲ್ಲರೂ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಶ್ರೇಷ್ಠ ಆಟಗಾರರೊಡನೆ ಅಂಗಣಕ್ಕಿಳಿಯುತ್ತಿರುವುದಕ್ಕೆ ಉತ್ಸುಕನಾಗಿರುವೆ‘ ಎಂದು ತಥಾಗತ್ ಹೇಳಿದ್ದಾರೆ.
ಇತ್ತೀಚೆಗೆ ಎರಡು ಲೆಗ್ಗಳ ಬೆಂಗಳೂರು ಓಪನ್ ಬಳಿಕ ಮೂರನೇ ಟೂರ್ನಿಯು ಉದ್ಯಾನಗರಿಯಲ್ಲಿ ನಡೆಯುತ್ತಿದೆ. ಒಟ್ಟು ₹ 11.44 ಲಕ್ಷ ಬಹುಮಾನ ಮೊತ್ತದ ಟೂರ್ನಿ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.