ADVERTISEMENT

ಗುರುತ್ವಾಕರ್ಷಣ ಶಕ್ತಿ ಬಳಸಿ ವಿದ್ಯುತ್ ಬೆಳಕು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಭೂಮಿ, ಜಲ, ಬೆಂಕಿ, ವಾಯು, ಆಕಾಶ ಇವು ಪಂಚಭೂತಗಳು. ಇವುಗಳು ಸಮಪ್ರಮಾಣದಲ್ಲಿ ಹೊಂದಿಕೊಂಡಿರುವ ಕಾರಣದಿಂದಲೇ ಪ್ರಪಂಚ ಸುಸೂತ್ರವಾಗಿ ನಡೆಯುತ್ತಿದೆ. ಇವುಗಳಲ್ಲಿ ಯಾವುದಾದರೂ ಒಂದು ಮಿತಿ ಕಳೆದುಕೊಂಡರೂ ನಾಶ ಕಟ್ಟಿಟ್ಟ ಬುತ್ತಿ ಎಂದು ಪಾಠ ಕೇಳಿದ ನೆನಪು.

ಹೀಗೆ ಹೆಚ್ಚು ಕಡಿಮೆ ಆಗಿಯೇ ಪ್ರಳಯ ಆಗಬಹುದೇನೋ. ನೀರು ಉಕ್ಕಿ ನಾವೆಲ್ಲಾ ಮುಳುಗಿ ಹೋಗಬಹುದು. ಇದೇ ಪ್ರಳಯ ಇರಬಹುದು ಎಂದು ಡಿಸೆಂಬರ್‌ನ 21ರಂದು ಕಾಯುತ್ತಲೇ ಇದ್ದೆ. ಪಂಚಭೂತಗಳಲ್ಲಿ ಯಾವುದೂ ತನ್ನ ಮಿತಿ ಕಳೆದುಕೊಳ್ಳಲೇ ಇಲ್ಲ. ಪ್ರಪಂಚದ ಸುಖವನ್ನು ಹಾಳುಮಾಡುವ ಮನಸ್ಸೂ ಅವುಗಳಿಗೆ ಇರಲಿಲ್ಲವೇನೊ.

ಇದೇ ಯೋಚನೆಯಲ್ಲಿದ್ದಾಗ ಪಂಚಭೂತಗಳಿಗೆ ಸಂಬಂಧಿಸಿದ ಬೆಳಕಿನ ಹೊಸ ಸಂಶೋಧನೆಯೊಂದು ಕಣ್ಣಿಗೆ ಬಿತ್ತು. 1879 ಡಿಸೆಂಬರ್‌ನಲ್ಲಿ ಥಾಮಸ್ ಅಲ್ವಾ ಎಡಿಸನ್ ಬೆಳಕು ಪಸರಿಸುವ ಬಲ್ಬ್ ಒಂದನ್ನು ಸಂಶೋಧಿಸಿ ಹೊಸ ಮನ್ವಂತರಕ್ಕೆ ನಾಂದಿಯಾಗಿದ್ದರು. ಆ ನಂತರದಲ್ಲಿ ಬೆಳಕಿಗೆ ಸಂಬಂಧಿಸಿದಂತೆ ಹಲವಾರು ನೂತನ ಸಂಶೋಧನೆಗಳಾಗಿ ಸೂರ್ಯನಂತೆ ಬೆಳಕು ನೀಡುವ ತಾಕತ್ತು ಮನುಕುಲಕ್ಕೆ ಬಂದಿದೆ.

ಇತ್ತೀಚೆಗಂತೂ ಸೌರದೀಪದ ಕ್ರಾಂತಿಯೇ ಆಗಿದೆ. ಬೆಂಗಳೂರಿನಂಥ ಮಹಾನಗರಗಳು ರಾತ್ರಿಯೂ ಹಗಲಿನಂತೆ ಝಗಮಗಿಸುವಂತಾಗಿದೆ. ಆದರೆ ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲೇ ಕೊಳೆಯುತ್ತವೆ. ಈಗೀಗ ಸೌರ ದೀಪಗಳು ಗ್ರಾಮೀಣ ಪ್ರದೇಶಗಳಲ್ಲಿ ಬೆಳಕು ಹೆಚ್ಚಿಸಿವೆ. ಕತ್ತಲೆಯ್ಲ್ಲಲಿ ನಗುಮುಖ ನೋಡುವ ಅವಕಾಶ ಕಲ್ಪಿತವಾಗಿವೆ. ಈ ಎಲ್ಲಾ ಬೆಳವಣಿಗೆಗಳನ್ನು ಹೊರತುಪಡಿಸಿದರೆ ದೇಹಕ್ಕೆ ಮಾರಣಾಂತಿಕ ತೊಂದರೆ ನೀಡಬಲ್ಲ ಸೀಮೆಎಣ್ಣೆ ಬೆಳಕೇ ಗತಿಯಾಗಿತ್ತು.

ಒಂದು ಸಮೀಕ್ಷೆಯ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಪ್ರತಿವರ್ಷದ ಸಾವಿರದಷ್ಟು ಸಾವು ಸೀಮೆಎಣ್ಣೆಯ ಬಳಕೆಯಿಂದಾಗಿದೆ. ವಿಶ್ವಬ್ಯಾಂಕ್ ಪ್ರಕಾರ 780 ದಶಲಕ್ಷದಷ್ಟು ಮಹಿಳೆಯರು ಹಾಗೂ ಮಕ್ಕಳು ಸೀಮೆ ಎಣ್ಣೆ  ಉಗುಳುವ ಹೊಗೆಯನ್ನು ಸೇವಿಸುತ್ತಿದ್ದಾರೆ. ದಿನಕ್ಕೆ ಎರಡು ಪ್ಯಾಕ್ ಸಿಗರೇಟ್‌ನ್ನು ಸೇವಿಸಿದರೆ ಯಾವ ಮಟ್ಟದ ಹಾನಿ ದೇಹಕ್ಕೆ ಉಂಟಾಗುತ್ತದೆಯೋ ಅದೇ ಮಟ್ಟದ ಹಾನಿ ಸೀಮೆ ಎಣ್ಣೆಯಿಂದ ಉಂಟಾಗುತ್ತಿದೆ.

ಹೀಗಾಗಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಸೀಮೆಎಣ್ಣೆ (ಬಯೊಮಾಸ್ ಇಂಧನ) ಇವುಗಳ ಬಳಕೆಯನ್ನು ಕಡಿಮೆ ಮಾಡಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ನೂತನ ಸಂಶೋಧನೆಯೊಂದನ್ನು ಬ್ರಿಟಿಷ್ ಕಂಪೆನಿ ಅಭಿವೃದ್ಧಿಪಡಿಸಿದೆ.

ಇದಕ್ಕೆ `ಗ್ರ್ಯಾವಿಟಿ ಲೈಟ್' ಎಂದು ಹೆಸರಿಸಲಾಗಿದೆ. ಈ ಸಂಶೋಧನೆಯ ಪ್ರಕಾರ ಹಗ್ಗದ ತುಂಡೊಂದು ಭೂಮಿಯಲ್ಲಿನ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು ಸುತ್ತುತ್ತದೆ. ಒಂದು ಚೀಲ ಮರಳನ್ನು ಹಗ್ಗಕ್ಕೆ ಕಟ್ಟಲಾಗುತ್ತದೆ. ಡೈನಮೊ ಯಾಂತ್ರಿಕ ವ್ಯವಸ್ಥೆಯ ಸಹಾಯದಿಂದ ಪ್ರಕಾರ ಹಗ್ಗ ಚೀಲವನ್ನು ನಿಧಾನವಾಗಿ ಜಗ್ಗುತ್ತದೆ. ಇದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಪ್ರಕ್ರಿಯೆ ಮೂರು ಸೆಂಕೆಂಡ್ ಉಂಟಾದರೆ (ಲೈಟ್ ಎಮಿಟಿಂಗ್ ಡಿಯೋಡ್) ಎಲ್‌ಇಡಿ ಬಲ್ಬ್ 30 ನಿಮಿಷ ಉರಿಯುತ್ತದೆ ಎಂದು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಕಂಪೆನಿ ತಿಳಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಲಂಡನ್ ಮೂಲದ ಕಂಪೆನಿ `ದೆರ್‌ಫೋರ್'ನ ವಿಭಾಗವಾದ ಡಿಸೈನ್ ಅಂಡ್ ಇನೊವೇಶನ್ ಇನೀಶಿಯೇಟಿವ್ ಕಂಪೆನಿಯಾದ ಛ್ಚಿಜಿಡಿಠಿಠಿ.ಟ್ಟಜ ಈ ಗ್ರ್ಯಾವಿಟಿ ಬಲ್ಬ್‌ನ್ನು ವಿನ್ಯಾಸಗೊಳಿಸಿದೆ. `ಬೆಳಕಿಗಾಗಿ ಸೀಮೆಎಣ್ಣೆಯಂಥ ಬಯೊಮಾಸ್ ಇಂಧನವನ್ನು ಬಳಸಿಕೊಳ್ಳುತ್ತಿರುವ ಸುಮಾರು 1.5 ಶತಕೋಟಿ ಜನರಿಗಾಗಿ ಈ ಗ್ರ್ಯಾವಿಟಿ ಬಲ್ಬ್‌ನ್ನು ತಯಾರಿಸಲಾಗಿದೆ. ಆರೋಗ್ಯಕ್ಕೆ ಹಾನಿ ಉಂಟುಮಾಡುವ ಸೀಮೆಎಣ್ಣೆಯ ಬಳಕೆಯಿಂದ ಮುಕ್ತಿ ಹೊಂದಲು ಇದು ಉತ್ತಮ ಪರಿಹಾರವಾಗಲಿದೆ' ಎಂದು ಕಂಪೆನಿ ಹೇಳಿಕೊಂಡಿದೆ.

`ತಂತ್ರಜ್ಞಾನದಲ್ಲಿ ಭಾರೀ ಪ್ರಮಾಣದ ಅಭಿವೃದ್ಧಿಯಾಗುತ್ತಿರುವುದೇ ನೂತನ ಉತ್ಪನ್ನವನ್ನು ನೀಡಲು ಸಹಕಾರಿಯಾಗಿದೆ' ಎಂದು ಹೇಳಿಕೊಂಡಿರುವ ಛ್ಚಿಜಿಡಿಠಿಠಿ.ಟ್ಟಜ ಕಂಪೆನಿ ಇದು ಅತ್ಯಂತ ಸರಳ ಸಾಧನವಾಗಿದ್ದು ಕಡಿಮೆ ಶಕ್ತಿಯನ್ನು ಬಳಸಿಕೊಂಡು ಹೆಚ್ಚಿನ ವಿದ್ಯುತ್ ನೀಡಲಿದೆ' ಎಂದಿದೆ. ದೆರ್‌ಫೋರ್ ಕಂಪೆನಿಯಲ್ಲಿ ನಿರ್ದೇಶಕರಾಗಿರುವ  ಮಾರ್ಟಿನ್ ರಿಡ್ಡಿಫೋರ್ಡ್ ಹಾಗೂ ಜಿಮ್ ರೇವಿಸ್ ಕೂಡ ಈ ಸಂಶೋಧನೆಗೆ ಸಹಕರಿಸಿದ್ದಾರೆ. `ಈಗ ಡಿಜಿಟಲ್ ಯುಗ. ಇದರಿಂದಾಗಿ ಹೆಚ್ಚಿನ ಎಲ್ಲಾ ಉತ್ಪನ್ನಗಳು ವಿದ್ಯುತ್‌ನ್ನು ಹೆಚ್ಚು ಅವಲಂಬಿಸುತ್ತಿವೆ. ಹೀಗಾಗಿ ವಿದ್ಯುತ್ ಕೊರತೆ ಮತ್ತೆ ಕಾಡುತ್ತಿವೆ. ಹೀಗಾಗಿ ಇಂಥ ಉತ್ಪನ್ನ ಜನರಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಸೌರದೀಪ ಬಂದು ಗ್ರಾಮೀಣ ಬದುಕು ಬೆಳಕು ಕಂಡುಕೊಂಡಿದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ನೀಡುವ `ಗ್ರ್ಯಾವಿಟಿ ಲೈಟ್ಸ್' ಭಾರತದ ಗ್ರಾಮೀಣ ಪ್ರದೇಶಗಳಿಗೆ ಬಂದರೆ ಇನ್ನೂ ಕತ್ತಲೆಯಲ್ಲಿರುವ ಹಲವಾರು ಜೀವಗಳ ಬದುಕು ಬೆಳಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.