ADVERTISEMENT

ದೋಷಮುಕ್ತ ಶ್ರವಣ ಸಾಧನ

ಮಾನಸ ಬಾಳಗೋಡು
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ದೆಹಲಿಯ ಮೌಲಾನ ಆಜಾದ್ ಮೆಡಿಕಲ್ ಕಾಲೇಜ್ ಮೂರು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ ಸುಮಾರು 63 ದಶಲಕ್ಷ ಜನರಿಗೆ ಶ್ರವಣ ಸಮಸ್ಯೆ ಇದೆ.

ಈಗಂತೂ ಕಿವುಡುತನದಿಂದ ಬಳಲುತ್ತಿರುವವರಿಗೆ ಸ್ಪಷ್ಟವಾಗಿ ದ್ವನಿ ಆಲಿಸಲು ನೆರವಾಗಬಲ್ಲ ಹಲವು ಉಪಕರಣಗಳು ಮಾರುಕಟ್ಟೆಗೆ ಬಂದಿವೆ. ಆದರೆ, ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾಗಿದ್ದರೂ ಕಿವಿ ಕೇಳದ ವ್ಯಕ್ತಿಗಳಿಗೆ ಸಂಪೂರ್ಣ ತೃಪ್ತಿಯಾಗುವಂತೆ ದೋಷ ಮುಕ್ತ ಕಿವಿ ಕೇಳುವ ಯಂತ್ರ ಇನ್ನೂ ಕಂಡು ಹಿಡಿಯಲಾಗಿಲ್ಲ. ಈ ನಿಟ್ಟಿನಲ್ಲಿ ಇತ್ತೀಚೆಗೆ ಅಮೆರಿಕ ಮೂಲದ `ಎಂಐಟಿ' ವಿಜ್ಞಾನಿಗಳ ತಂಡವೊಂದು ಅಭಿವೃದ್ಧಿಪಡಿಸಿರುವ `ಚಿಪ್' ಆಧಾರಿತ ಶ್ರವಣ ಸಾಧನ ಹೊಸ ಸಾಧ್ಯತೆ ಹುಟ್ಟುಹಾಕಿದೆ.

ಕಿವಿಯಲ್ಲಿ ಈ ಚಿಪ್ ಅಳವಡಿಸಿ ರೇಡಿಯೋ ತರಂಗಗಳ ಮೂಲಕ ಕಿವಿಯೊಳಗಿನ ಸ್ಥಿತಿಯನ್ನು ವಿವರವಾಗಿ ತಿಳಿಯಬಹುದು. ಈ ಮೂಲಕ  ವೈದ್ಯರು ಶ್ರವಣ ದೋಷದ ಮೂಲ ಕಾರಣವನ್ನು ಸ್ಪಷ್ಟವಾಗಿ ತಿಳಿಯಬಹುದು.
ಬಯಾಲಜಿಕಲ್ ಬ್ಯಾಟರಿ

ಈ ಚಿಪ್‌ಗೆ ಬಯಾಲಜಿಕಲ್ ಬ್ಯಾಟರಿ ವಿದ್ಯುತ್ ಒದಗಿಸುವ ಸಾಧನವಾಗಿ ಬಳಕೆಯಾಗಿದೆ. ಈ ಬ್ಯಾಟರಿ ಕಂಟ್ರೋಲ್ ಸರ್ಕಿಟ್‌ನ ಸಹಾಯದಿಂದ  ಕೆಲಸ ಮಾಡುತ್ತದೆ. ಈ ಚಿಪ್ ಸೋಂಕು ರಹಿತವಾಗಿದ್ದು ಇದರ ಅಳವಡಿಕೆಯಿಂದ ಕಿವಿಯ ಒಳಗೆ ಯಾವುದೇ ಹಾನಿಯಾಗುವುದಿಲ್ಲ. `ಎಂಐಟಿ' ವಿಜ್ಞಾನಿಗಳಾದ ಕೆ. ಸ್ಟ್ಯಾನ್‌ಕೋವಿಕ್, ಅನಂತ ಚಂದ್ರಹಾಸನ್ ಮತ್ತು ಸಹ ಉದ್ಯೋಗಿಗಳು ಈ ವಿಶೇಷ ಚಿಪ್ಪನ್ನು ಸ್ವತಃ ಅಳವಡಿಸಿಕೊಂಡು ಪ್ರಯೋಗ ನಡೆಸಿದ್ದಾರೆ. ರೇಡಿಯೋ ತಂತ್ರಜ್ಞಾನದ ಸಹಾಯದಿಂದ ಹೊರಗಿನ ಶಬ್ದಗಳು ಇನ್ನಷ್ಟು ಸ್ಪಷ್ಟವಾಗಿ ಕೇಳುವಂತೆ ಮಾಡುವ ಪ್ರಯತ್ನಗಳು ನಡೆದಿವೆ.

ಚಿಪ್‌ನ ಗಾತ್ರ 2.4ಎಂ.ಎಂ. ಪದೇ ಪದೇ ಸರ್ಜರಿ ಮಾಡುವ ತೊಂದರೆ ಕೂಡ ಇಲ್ಲ. ಕಿವಿಯ ಯಾವ ಭಾಗ ಕೂಡ ಇದರಿಂದ ಹಾನಿಗೆ ಒಳಗಾಗುವುದಿಲ್ಲ.  ಈ ಶ್ರವಣ ಸಾಧನವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕುರಿತ   ಪ್ರಯತ್ನಗಳು ನಡೆದಿವೆ ಎನ್ನುತ್ತಾರೆ ಎಂಐಟಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಅನಂತ ಪಿ ಚಂದ್ರಹಾಸನ್.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT