ADVERTISEMENT

ಸೈಬರ್‌ ದಾಳಿಯ ಹೊಸ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 6 ಮೇ 2014, 19:30 IST
Last Updated 6 ಮೇ 2014, 19:30 IST
ಸೈಬರ್‌ ದಾಳಿಯ ಹೊಸ ಸಂಕಷ್ಟ
ಸೈಬರ್‌ ದಾಳಿಯ ಹೊಸ ಸಂಕಷ್ಟ   

ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧಿಗಳ ನಡವಳಿ­ಕೆಯಲ್ಲಿ ಆಗಿರುವ ಬದಲಾವ­ಣೆಗಳ ಕುರಿತು ಕಂಪ್ಯೂಟರ್‌ ಆ್ಯಂಟಿ ವೈರಸ್‌ ಸಂಸ್ಥೆ ‘ಸಿಮ್ಯಾಂಟೆಕ್‌ ಕಾರ್ಪೊರೇಷನ್‌’ ಇತ್ತೀಚೆಗೆ ಅಧ್ಯಯನ  ನಡೆಸಿ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ, ಮಾಹಿತಿ ಕದಿಯಲು ಹ್ಯಾಕರ್‌ಗಳು ಬಳಸುತ್ತಿದ್ದ ‘ಕ್ಷಿಪ್ರ ದಾಳಿ’ ಈಗ ತೆರೆ­ಮರೆಗೆ ಸರಿದಿದೆ. ಬದಲಿಗೆ ಯಾವುದಾದರೂ ಒಂದು ಕಂಪೆನಿಯನ್ನು­ ಗುರಿಯಾಗಿ­ಟ್ಟು­ಕೊಂಡು ತಿಂಗಳು­ಗಟ್ಟಲೆ ಹೊಂಚು ಹಾಕಿ ‘ಮಹಾ ದಾಳಿ’ (mega breaches) ನಡೆಸುವ ಅಪಾಯಗಳು ಹೆಚ್ಚಿವೆ.

‘ಕ್ಷಿಪ್ರದಾಳಿ’ಯಲ್ಲಿ ಮಾಹಿತಿ ಸಿಗಬ­ಹುದು ಅಥವಾ ಸಿಗದೇ ಇರಬಹುದು. ಆದರೆ, ಮಹಾದಾಳಿಯಲ್ಲಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಹೆಚ್ಚಿರು­ತ್ತದೆ. ಅಂದರೆ ಒಂದು ಮಹಾದಾಳಿ  50 ಸಣ್ಣ ದಾಳಿಗಳಿಗೆ ಸಮನಾಗಿರುತ್ತದೆ ಎನ್ನುತ್ತಾರೆ ಕಂಪ್ಯೂಟರ್‌ ತಂತ್ರಜ್ಞರು.
ಆತಂಕಕಾರಿ ಸಂಗತಿ ಎಂದರೆ, ಭಾರತ­ದಲ್ಲಿ ಇತ್ತೀಚೆಗೆ ನಡೆದಿರುವ ಸೈಬರ್‌ ದಾಳಿಗಳಲ್ಲಿ ಶೇ 69ರಷ್ಟು ಬೃಹತ್ ಪ್ರಮಾ­ಣದ ಉದ್ಯಮ ಸಂಸ್ಥೆಗ­ಳನ್ನೇ ಗುರಿಯಾ­ಗಿಟ್ಟುಕೊಂ­ಡು ದಾಳಿ ನಡೆದಿವೆ  ಎನ್ನು­ತ್ತಾರೆ  ಸಿಮ್ಯಾಂಟೆಕ್‌ ಇಂಡಿಯಾದ ತಂತ್ರಜ್ಞಾನ ಮಾರಾಟ ವಿಭಾಗದ ನಿರ್ದೇಶಕ ತರುಣ್ ಕೌರಾ.

‘ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳ ತಾಳ್ಮೆ, ಆತ್ಮವಿಶ್ವಾಸ ಅದೆಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂದರೆ ಬೃಹತ್‌ ಪ್ರಮಾಣದ ಹಾನಿ ಉಂಟು ಮಾಡುವ ಅವಕಾಶ ಸಿಗುವವ­ರೆಗೂ ಅವರು ಕಾಯುತ್ತಲೇ ಇರು­ತ್ತಾರೆ. ಸರ್ವರ್‌ ಮೇಲೆ ದಾಳಿ ನಡೆಸಿ ದತ್ತಾಂಶ­ಗಳನ್ನು ಕದಿಯುವ ಪ್ರಕರಣ­ಗಳಲ್ಲಿ ಈ ವರ್ಷ ಕಳೆದ ವರ್ಷಕ್ಕಿಂತ ಶೇ ೬೨ರಷ್ಟು ಹೆಚ್ಚಳ ಕಂಡುಬಂದಿದೆ. ಇದರಿಂದ ಸುಮಾರು ೫೫ ಕೋಟಿಗೂ ಅಧಿಕ ಮಂದಿಯ ವೈಯಕ್ತಿಕ ಮಾಹಿ­ತಿಗಳು ಬಹಿರಂಗ­ಗೊಂಡಿವೆ. ಕಂಪೆನಿಗಳ ಮೇಲೆ ಹೊಂಚು ಹಾಕಿ ನಡೆಸುವ ಸೈಬರ್‌ ದಾಳಿ ಪ್ರಮಾಣ ೨೦೧೨ಕ್ಕೆ ಹೋಲಿಸಿದರೆ ೨೦೧೩ರಲ್ಲಿ ಮೂರು ಪಟ್ಟು ಹೆಚ್ಚಿವೆ’ ಎನ್ನುತ್ತಾರೆ ಅವರು.

‘ದತ್ತಾಂಶ ಸೋರಿಕೆಯಲ್ಲಿ ಸಂಸ್ಥೆಯ ಒಳಗೇ ಇರುವ ದೋಷ­ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ  ಪ್ರತಿಯೊಂದು ಕಂಪೆನಿಯೂ ತನ್ನ ದತ್ತಾಂಶ ಸುರಕ್ಷತಾ ವ್ಯವಸ್ಥೆಯನ್ನು ಮತ್ತೆ ಮತ್ತೆ ಪರಿಶೀಲಿಸುತ್ತಿರಬೇಕಿದೆ. ಸಾಧ್ಯ­ವಾ­ದರೆ ಇಡೀ ಸುರಕ್ಷತಾ ವ್ಯವಸ್ಥೆಯನ್ನೇ ಮರು ವಿನ್ಯಾಸಗೊಳಿಸಬೇಕಿದೆ’ ಎಂಬ ಸಲಹೆಯನ್ನೂ ತರುಣ್ ಮುಂದಿಡುತ್ತಾರೆ.

ಹುಲಿ ಬೇಟೆಗೆ ಮೇಕೆ!
ಸೈಬರ್‌ ಅಪರಾಧಿಗಳು ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸ ಮಾಡು­ವವರನ್ನು, ಮುಖ್ಯವಾಗಿ ಪ್ರಮುಖ ಹುದ್ದೆಯಲ್ಲಿ­ರುವವರ ಖಾಸಗಿ ಸಹಾ­ಯ­ಕರನ್ನೇ ಗುರಿ­ಯಾಗಿ­ಟ್ಟು ದಾಳಿ ಮಾಡು­­ತ್ತಾರೆ. ಈ ದಾಳಿಯಿಂದ ಲಭಿಸುವ ಮಾಹಿತಿಯನ್ನು ದೊಡ್ಡ ದಾಳಿಗೆ ಮೆಟ್ಟಿಲಾಗಿ ಬಳಸಿ­ಕೊಳ್ಳುತ್ತಾರೆ. ಹುಲಿಯನ್ನು ಬೇಟೆಯಾಡಲು ಮೇಕೆ­ಯನ್ನು ಬೋನಿಗೆ ಕಟ್ಟಿದಂತೆ ದೊಡ್ಡ ದೊಡ್ಡ ಕಂಪೆನಿಗಳ, ವಾಣಿಜ್ಯೋದ್ಯಮ ಸಂಸ್ಥೆಗಳ ಪ್ರಮುಖರ ಮಾಹಿತಿ ಕೋಶಕ್ಕೆ ಕನ್ನ ಹಾಕುವ ಸಲುವಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳನ್ನು ದಾಳಗಳಾಗಿ ಬಳಸಿಕೊ­ಳ್ಳಲಾಗುತ್ತದೆ. ಇಂತಹ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳು ತಮ್ಮಲ್ಲಿನ ದತ್ತಾಂಶ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿರು­ವುದಿಲ್ಲ. ಹೀಗಾಗಿ ದಾಳಿಗೆ ಸುಲಭವಾಗಿ ತುತ್ತಾಗುತ್ತವೆ. ಭಾರತದಲ್ಲಿ ಇತ್ತೀಚೆಗೆ ಇಂತಹ ದಾಳಿ ಹೆಚ್ಚಿದೆ ಎನ್ನುತ್ತದೆ ‘ಸಿಮ್ಯಾಂಟೆಕ್‌’ ವರದಿ.

ಭಾರತದಲ್ಲಿ ಇತ್ತೀಚೆಗೆ ನಡೆದ ಸೈಬರ್ ದಾಳಿಗಳಲ್ಲಿ ಪ್ರತಿ ಹತ್ತರಲ್ಲಿ ನಾಲ್ಕು ದಾಳಿಗಳು ಹೋಟೆಲ್‌ಗಳು, ಆತಿಥ್ಯ ಸೇವಾ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ವೈಯಕ್ತಿಕ ಸೇವಾ ಸಂಸ್ಥೆಗಳ ಮೇಲೆಯೇ ನಡೆದಿವೆ. ಸುಲಭವಾಗಿ ದಾಳಿಗೆ ತುತ್ತಾಗುವ ಸಂಸ್ಥೆಗಳಲ್ಲಿ ಹಣಕಾಸು ಮತ್ತು ವಿಮಾ ಸೇವಾ ಕ್ಷೇತ್ರದ ಸಂಸ್ಥೆಗಳೂ ಸೇರಿವೆ.

ಇಂತಹ ದಾಳಿಗಳು ಒಂದೆಡೆ­ಯಾದರೆ, ಇನ್ನೊಂದೆಡೆ ಕೇವಲ ವ್ಯಕ್ತಿಗಳ ಹೆಸರು, ಅಂಚೆ ವಿಳಾಸ, ಇ- ಮೇಲ್ ವಿಳಾಸ ಮತ್ತು ಸರ್ಕಾರದಿಂದ ಪಡೆದ ಗುರುತಿನ ಚೀಟಿ ಮೊದಲಾದವನ್ನು  ಬಳಸಿಕೊಂಡು ವೈಯಕ್ತಿಕ ಮಾಹಿತಿ ಕದಿಯುವುದೂ ವ್ಯಾಪಕವಾಗಿ ನಡೆಯುತ್ತಿದೆ.

ಭಾರತ 3ನೇ ಸ್ಥಾನ
ಜಾಗತಿಕ ಸೈಬರ್ ಅಪರಾಧಿಗಳ ಪಾಲಿಗೆ ಭಾರತ ಬಹಳ ಸುಲಭದ ಕೇಂದ್ರ. ವಿಶ್ವದಲ್ಲಿಯೇ ದತ್ತಾಂಶ ಸೋರಿ­ಕೆಗೆ ಬಲಿಯಾಗುವಂತಹ ದೇಶಗಳಲ್ಲಿ ಭಾರತಕ್ಕೆ ೩ನೇ ಸ್ಥಾನವಿದೆ. ಇ ಮೇಲ್‌ ‘ಸ್ಪಾಮ್’ ಚಟುವಟಿಕೆಯಲ್ಲಿ ಭಾರತ ವಿಶ್ವದ ರಾಜಧಾನಿ ಎಂಬ ಕುಖ್ಯಾತಿ­ಯನ್ನು ಪಡೆದುಕೊಂಡಿದೆ!

೧೪೫ ಕೋಟಿ  ಬೂಟ್‌ನೆಟ್ ಸ್ಪಾಮ್‌ಗಳು  ಪ್ರತಿ ದಿನ ಭಾರತದಿಂದಲೇ ಸೃಷ್ಟಿಯಾಗುತ್ತವೆ ಎಂಬ ಅಂದಾಜಿದೆ. ಕಟ್‌ವೇಲ್ ಮತ್ತು ಕೆಲಿಹೋಸ್‌ನಂತಹ ಬೃಹತ್ ಬೂಟ್‌­ನೆಟ್‌ಗಳು ಈ ವರ್ಷ ಬಲು ಹೆಚ್ಚಿನ ಇ ಮೇಲ್‌­ಗಳಿಗೆ ಮೆತ್ತಿಕೊಂಡು ವಿಶ್ವದೆಲ್ಲೆ­ಡೆಗೆ ಹರಿದಾಡಿ ದೊಡ್ಡ ಮಟ್ಟದ ಅಪಾಯವನ್ನೇ ತಂದೊಡ್ಡಿವೆ.

ಗ್ಯಾಜೆಟ್‌ಗಳ ವ್ಯಾಪಕ ಬಳಕೆಯಿಂದ ಸೈಬರ್‌ ಅಪರಾಧ ಚಟುವಟಿಕೆಗಳು ಹೆಚ್ಚಿದೆ ಎನ್ನುತ್ತಾರೆ ತಂತ್ರಜ್ಞರು. 

ಗ್ಯಾಜೆಟ್‌ಗಳಿಂದ ವಿವಿಧ ಅಪ್ಲಿಕೇಷನ್ಸ್‌ ಬಳಸಿ ರವಾನಿಸುವ ದತ್ತಾಂಶಗಳ ಪ್ರಮಾಣ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದುವೇ ಸೈಬರ್ ಅಪರಾಧಿಗಳ ಚಟುವಟಿಕೆ ಹೆಚ್ಚಲು ಪ್ರಮುಖ ಕಾರಣ. ಇಂತಹ ಗ್ಯಾಜೆಟ್‌­ಗಳ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಕಾಪಾಡಿಕೊಳ್ಳಲು ಎಚ್ಚರ ವಹಿಸಬೇಕಿದೆ.

ಸುರಕ್ಷತಾ ಕ್ರಮಗಳು
*ನಿಮ್ಮ ಅಮೂಲ್ಯವಾದ ದತ್ತಾಂಶ ಎಲ್ಲಿದೆ ಮತ್ತು ಯಾವ ಕಡೆಗೆ ಅದು ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಕಂಡುಕೊಳ್ಳಿರಿ. ಇದರಿಂದ ಅತ್ಯುತ್ತಮ ಸುರಕ್ಷತಾ ಕ್ರಮಗಳನ್ನು, ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಅನುಕೂಲ­ವಾಗುತ್ತದೆ.
*ವೈಯಕ್ತಿಕ ಹಾಗೂ ಕಂಪೆನಿಯ ಅಮೂಲ್ಯವಾದ ಮಾಹಿತಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಸ್ಪಷ್ಟ ಮಾರ್ಗದರ್ಶಿ ಸೂತ್ರ ರಚಿಸಿರಿ.
*ದತ್ತಾಂಶ ಸೋರಿಕೆ ತಡೆ, ಸಂಪರ್ಕ ಜಾಲ ಸುರಕ್ಷತೆ, ಎಂಡ್ ಪಾಯಿಂಟ್ ಸೆಕ್ಯುರಿಟಿ, ಪರಿಶೋಧನೆಗೆ ಬಲಿಷ್ಠವಾದ ಸುಭದ್ರತಾ ವ್ಯವಸ್ಥೆಯನ್ನು ಜಾರಿಗೆ ತನ್ನಿರಿ.
*ವೈಯಕ್ತಿಕ ಮಾಹಿತಿ ಕೋಶಕ್ಕೆ ಪ್ರಬಲವಾದ ಪಾಸ್‌ವರ್ಡ್ ರಚಿಸಿ­ಕೊಳ್ಳಿರಿ. ಪ್ರತಿ­ಯೊಂದು ವೆಬ್‌ತಾಣ­ವನ್ನು ವೀಕ್ಷಿಸಿ­ದಾಗಲೂ ವೈಯಕ್ತಿಕ ಮಾಹಿತಿಗೆ ಹಾನಿಯಾಗದಂತೆ ವಿಶೇಷ­ವಾದ ಪಾಸ್‌ವರ್ಡ್ ಸೃಷ್ಟಿಸಿಕೊಳ್ಳಿರಿ. ಅದಕ್ಕಾಗಿ ಪಾಸ್‌ವರ್ಡ್ ನಿರ್ವಹಣಾ ತಂತ್ರಾಂಶದ ನೆರವು ಪಡೆದುಕೊಳ್ಳಿರಿ.
*ನಿಮ್ಮ ಬ್ಯಾಂಕ್ ವಹಿವಾಟಿನ ಮತ್ತು ಕ್ರೆಡಿಟ್ ಕಾರ್ಡ್‌ನ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸುತ್ತಿರಿ. ಶಂಕಾಸ್ಪದವಾದುದು ಕಂಡು­ಬಂದರೆ ತಕ್ಷಣ ಬ್ಯಾಂಕ್‌ಗೆ ವರದಿ ಮಾಡಿರಿ.
*ಅನಪೇಕ್ಷಿತ ಇ ಮೇಲ್‌ಗಳ ಬಗೆಗಂತೂ ಬಹಳ ಜಾಗ್ರತೆ ವಹಿಸಿರಿ. ಆನ್‌ಲೈನ್ ಮೂಲಕ ನಿಮ್ಮ ಇ ಮೇಲ್‌ಗೆ ಬರುವ ಆಕರ್ಷಕ ಕೊಡುಗೆಗಳ ಆಮಿಷಗಳಿಗೆ ಬಲಿಯಾ­ಗದಿರಿ.
*ಚಿಲ್ಲರೆ ವಹಿವಾಟು ಸಂಸ್ಥೆಗಳು, ಆನ್‌ಲೈನ್ ಮೂಲಕವೇ ಸೇವೆ ಒದಗಿಸು­ವಂತಹವರ ಬಗ್ಗೆ ಬಹಳ ಜಾಗ್ರತೆ­ಯಾಗಿರಿ. ಯಾವುದೇ ಕಾರಣಕ್ಕೂ ಇ ಮೇಲ್‌ನಲ್ಲಿ ಬಂದ ಇಂತಹ ಲಿಂಕ್‌ಗಳ ಮೇಲೆ ಮೌಸ್ ಕ್ಲಿಕ್ ಮಾಡದಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT