ADVERTISEMENT

ಬರೀ ವ್ಯವಕಲನ

ರೋಜಾ ಎಸ್, ವಿಜಯಪುರ
Published 12 ಜೂನ್ 2015, 19:30 IST
Last Updated 12 ಜೂನ್ 2015, 19:30 IST
ಬರೀ ವ್ಯವಕಲನ
ಬರೀ ವ್ಯವಕಲನ   

ಎಲ್ಲರಿಗೂ ಸ್ನೇಹಿತರು ಇರುವ ಹಾಗೇ ನನಗೂ ಹಲವರು ಔಪಚಾರಿಕ ಕಲಿಕೆಯಲ್ಲಿ ಸ್ನೇಹಿತರಿದ್ದರು. ಆದರೆ ಎಲ್ಲರೂ ಎಲ್ಲರಿಗೂ ಆತ್ಮೀಯವಾಗಿ ಇರಲು ಸಾಧ್ಯವಿಲ್ಲ, ಹಾಗೇಯೇ ನನಗೂ ಒಬ್ಬ ಆತ್ಮೀಯ ಸ್ನೇಹಿತೆ, ಇನ್ನೊಬ್ಬ ಆತ್ಮೀಯ ಸ್ನೇಹಿತನಿದ್ದ. ನಮ್ಮ ಸ್ನೇಹವನ್ನು ನೋಡಿ ತ್ರಿಮೂರ್ತಿಗಳು ಎಂದು ಹೊಗಳುತ್ತಿದ್ದರು.

ಆದರೆ ಈ ನಮ್ಮ ಸ್ನೇಹ  ಬೇಗನೆ ಕುಸಿದು ಹೋಯಿತು ಎನ್ನುವುದು ಇಂದಿಗೂ ನನಗೆ ನೋವಿನ ಸಂಗತಿ. ಆದರೆ ಇಂದು ಒಳ್ಳೆಯ ವ್ಯಕ್ತಿಗಳು ಸ್ನೇಹಿತರಾಗಲು ಬಂದರು ನಾನು ಅವರನ್ನು ತುಂಬ ಹಚ್ಚಿಕೊಳ್ಳುವುದಿಲ್ಲ ಏಕೆಂದರೆ ಒಂದು ಸಲ ಕಲಿತ ಪಾಠ ಪುನರಾವರ್ತನೆಯಾಗಬಾರದು  ಎಂಬ ಎಚ್ಚರಿಕೆ. 

ಸ್ನೇಹಿತೆ ನನಗೆ ಯಾವಾಗಲೂ ನಾನು ಮುಗ್ದೆ ಎಂದು ಹೇಳುತ್ತಿದ್ದಳು, ಆಕೆ ಮಾತನಾಡುತ್ತಿರುವುದನ್ನೆಲ್ಲ ನಿಜವೆಂದು ನಂಬುತ್ತಿದ್ದೇ ಆದರೆ ಆಕೆ ಕಪಟಿ, ಮೋಸಗಾರ್ತಿ, ನನ್ನ ಹಿಂದೆ ಒಂದು, ಮುಂದೆ ಒಂದು ಮಾತನಾಡುವ ಊಸರವಳ್ಳಿಯಾಗಿದ್ದಳು.

ಆದರೆ ಇಂದು ಆಕೆಯಿಂದ ಪಾಠ ಕಲಿತಾಗಿದೆ, ಅನುಭವವಾಗಿದೆ, ವ್ಯಕ್ತಿಗಳನ್ನು ವಿಮರ್ಶಾತ್ಮಕವಾಗಿ ನೋಡುವ ದೃಷ್ಟಿಕೋನ ಬೆಳೆದಿದೆ ಅದಕ್ಕೆ ಈಗ ಆಕೆ ಹತ್ತಿರ ಬಂದರೂ ದೂರದೇ ದೂರವಿರುವೆ. ಮುಂದೆ ಇದ್ದರೂ ಮೌನವಾಗಿರುವೆ. ನನಗೆ ಇಂದು ಇನೋಸೆಂಟ್‌ಗೆ ಇರುವ ಇನ್ನೊಂದು ಅರ್ಥ ಗೊತ್ತಾಗಿದೆ.

ಮೂರ್ಖಳೆಂದು ಆಕೆ ಅಂದು ಹೇಳಿದ್ದು ನಿಜವಲ್ಲವಾ? ನಾನು ಜ್ಞಾನ ಪಡೆಯದೇ ಮೂರ್ಖಳಾಗಿದ್ದೆ. ‘ಕೆಟ್ಟ ಜನರು ಜೀವನಕ್ಕೆ ಒಳ್ಳೆಯ ಪಾಠಗಳನ್ನು ಕಲಿಸುತ್ತಾರೆ’ ಎಂಬುದು ನಿಜವೆನಿಸಿದೆ.

ಇನ್ನೊಬ್ಬ ಸ್ನೇಹಿತನ ಕಥೆ. ಆತ ಸ್ನೇಹದ ಹೆಸರಲ್ಲಿ ನನ್ನ ಜೀವನದಲ್ಲಿ ಪ್ರವೇಶಿಸಿದ. ಸ್ನೇಹವನ್ನು ಸ್ನೇಹ ಎಂದು ಮಾತ್ರವೇ ನೋಡುವ ಗುಣ ನನ್ನದು. ಆತ್ಮೀಯ ಸ್ನೇಹಿತ ಪ್ರೇಮಿಯಾಗಲಾರ, ಉತ್ತಮ ಪ್ರೇಮಿ ಉತ್ತಮ ಗಂಡನಾಗಲಾರ. ಒಂದೇ ವ್ಯಕ್ತಿ ಮೂರು ಪಾತ್ರಗಳಿಗೆ ನ್ಯಾಯ ಕೊಡಲಾರ ಎನ್ನುವುದು ನನ್ನ ಅಭಿಪ್ರಾಯ, ಆದರೆ ಆತ ಪ್ರೇಮಿಯಾಗಿ ವರ್ತಿಸಲು ಪ್ರಾರಂಭಿಸಿದ! ಇಷ್ಟವಾಗಲಿಲ್ಲ ದೂರ ನಡೆದು ಬಂದೆ.

ಈಗಲೂ ನನಗೆ ಕೆಲವು ಆತ್ಮೀಯ ಸ್ನೇಹಿತರಿದ್ದಾರೆ. ಅವರ ಸ್ನೇಹ ಹೀಗೆಯೇ ಇರಲಿ ಎಂದು ದೇವರಲ್ಲಿ  ಪ್ರಾರ್ಥಿಸುತ್ತೇನೆ. ಕೆಲವರಿಗೆ ಸ್ನೇಹ ಜೀವನದಲ್ಲಿ ಗುಣಾಕಾರವಾಗುತ್ತಾ ಸಂಬಂಧಗಳು ಸಂಕಲನಗೊಳ್ಳುತ್ತಾ ದುಃಖ ವ್ಯವಕಲನವಾಗುತ್ತದೆ. ಆದರೆ ಇದು ನನಗಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT