ಅವಳು ನನಗೆ ಪರಿಚಯವಾಗಿ ಇವತ್ತಿಗೆ ಸರಿಯಾಗಿ ಏಳು ವರ್ಷಗಳು, ಸಪ್ತವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಒಂದು ವರ್ಷ ಬರೀ ವಿರಸದಲ್ಲೇ ಕಳೆದುಹೋಯಿತಲ್ಲಾ ಎಂದು ಬೇಸರವಾಗುತ್ತದೆ. ಈ ವಿರಸ ಪ್ರಾರಂಭವಾದದ್ದು ಯಾವುದೋ ಒಂದು ಗಂಭೀರ ಘಟನೆಯಿಂದಲ್ಲ, ಕೇವಲ ಒಂದು ಚಿಕ್ಕ ಕಾರಣಕ್ಕಾಗಿ.
ನಾನು, ಅವಳು ಸ್ನೇಹಿತರಾಗಿದ್ದು ಪಿಯುಸಿಯಲ್ಲಿ, ಪಿಯುಸಿ ಎರಡನೇ ವರ್ಷ ತುಂಬ ಆತ್ಮೀಯವಾದಳು, ಓದು, ಪರೀಕ್ಷೆ ಬೇರೆ ಯಾವುದೇ ವಿಷಯವಾದರೂ ನನ್ನಲ್ಲಿ ಮುಕ್ತವಾಗಿ ಮಾತನಾಡುತ್ತಿದ್ದಳು. ಪದವಿಗೆ ನಾವಿಬ್ಬರು ಮಾತನಾಡಿಕೊಂಡು ಸೈಕಾಲಜಿ, ಜರ್ನಲಿಸಂ ಕೋರ್ಸಿಗೆ ಸೇರಿದೆವು.
ಆಗ ಡಿಗ್ರಿ ಎರಡನೇ ಸೆಮಿಸ್ಟರ್ನ ಕೊನೆಯ ದಿನಗಳು, ಒಂದು ದಿನ ಬೆಳಿಗ್ಗೆ ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದಳು, ನಾನು ಏನೋ ಅರ್ಜೆಂಟ್ ಇರಬೇಕೆಂದು ಅವಸರದಿಂದ ಹೋದೆ. ಅವಳ ಮನೆಗೆ ಹೋಗುತ್ತಿದ್ದಂತೆ ಎಲ್ಲಿಗೋ ರೆಡಿ ಆಗುತ್ತಿದ್ದಳು, ನನ್ನನ್ನು ಕಂಡೊಡನೆ ‘ಸ್ವಲ್ಪ ಶಾಪಿಂಗ್ ಮಾಡೋದಿದೆ ನಡೀ ಹೋಗೋಣ’ ಎಂದಳು,
ನನಗೆ ಅಂದು ಬೇರೆ ಯಾವುದೋ ಕೆಲಸ ಇದ್ದಿದ್ದರಿಂದ ‘ಇವತ್ತು ಬೇಡ ಇನ್ನೊಂದ್ಸಲ ಬರ್ತೀನಿ’ ಅಂದೆ, ಅದಕ್ಕೆ ಅವಳು ‘ಯಾವಾಗ್ಲೂ ಹೀಗೆ ಮಾಡ್ತೀಯ, ನಾನು ಕೇಳಿದ್ದಕ್ಕೆಲ್ಲ ಇಲ್ಲ ಅಂತೀಯ ನಿನ್ನ ಇಷ್ಟ ಬಂದ್ಹಂಗೆ ಮಾಡ್ತಿದ್ದೀಯ’ ಎಂದು ಬಯ್ಯತೊಡಗಿದಳು. ಅವಳ ಕೋಪಕ್ಕೆ ಇನ್ನೊಂದು ಕಾರಣವಿತ್ತು, ಹಿಂದಿನ ದಿನ ಅವಳು ಕೇಳಿದ ಪುಸ್ತಕ ತಂದುಕೊಟ್ಟಿರಲಿಲ್ಲ, ಎರಡರ ಕೋಪ ಒಟ್ಟಿಗೆ ಸೇರಿಸಿ ಬಯ್ದಳು, ‘ಇನ್ನು ಮುಂದೆ ನಿನ್ನ ಜೊತೆ ಮಾತಾಡೋದಿಲ್ಲ ಹೋಗು’ ಎಂದಾಗ ನಾನು ಕೋಪದಲ್ಲಿ ನಾನು ಮಾತಾಡೋದಿಲ್ಲ ಎಂದು ಮುಖ ತಿರುಗಿಸಿ ಬಂದುಬಿಟ್ಟೆ.
ಇದಾಗಿ ಕೆಲವು ದಿನಗಳ ನಂತರ ಒಮ್ಮೆ ಕಣ್ಣು ಮುಂದೆ ಕಾಣಿಸಿದಳು. ನಾನೇನು ತಪ್ಪು ಮಾಡಿರದಿದ್ದ ಕಾರಣ ಅವಳು ಮೊದಲು ಮಾತನಾಡಿಸಲಿ ಎಂದು ನಾನು, ನಾನು ಮಾತಾಡಿಸಲಿ ಎಂದು ಅವಳು. ಈ ಹುಚ್ಚು ಅಭಿಮಾನದಿಂದ ಇಬ್ಬರೂ ಮಾತಾಡುತ್ತಿರಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು.
ಕೊನೆಗೂ ಒಂದು ದಿನ ಬಂದೇಬಿಟ್ಟಳು. ಅವಳನ್ನು ಕಂಡೊಡನೆ ನಾನೇ ಕ್ಷಮೆ ಕೇಳಿ ಮಾತಾಡಬೇಕೆಂದು ಓಡಿದೆ. ಆದರೇ ಅವಳೇ ಮಾತಾಡಿದಳು. ಯಾವುದೋ ಕಾರಣಕ್ಕಾಗಿ ದೂರವಿದ್ದಿದ್ದಕ್ಕಾಗಿ, ಕೋಪಿಸಿಕೊಂಡಿದ್ದಕ್ಕಾಗಿ ಕ್ಷಮೆ ಕೆಳುತ್ತಾ ಅಪ್ಪಿಕೊಂಡಳು, ನಾನು ಅಂತೂ ಸಿಕ್ಕಳಲ್ಲಾ ಎಂದು ನಿಟ್ಟುಸಿರುಬಿಟ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.