ADVERTISEMENT

ಕಲ್ಲಾದವರ ಮುಂದೆ ಕವಿತೆ

ಆರಿಫ್ ರಾಜಾ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಕಲ್ಲಾದವರ ಮುಂದೆ ಕವಿತೆ

ಇಲ್ಲಿ ಮುಖದಿಂದ ಮುಖಕ್ಕೆ ನಗುವನು ದಾಟಿಸುವುದು ಎಷ್ಟೊಂದು ಕಷ್ಟ
ಇಲ್ಲಿ ಹೃದಯದಿಂದ ಹೃದಯಕ್ಕೆ ಭಾವನೆಯನು ದಾಟಿಸುವುದು ಎಷ್ಟೊಂದು ಕಷ್ಟ

ಜೀವನಪೂರ ಹೊತ್ತುಕೊಂಡು ಓಡಾಡಿದರೂ ನಮ್ಮದೇ ಶಿಲುಬೆಗಳ
ಇಲ್ಲಿ ಹೆಗಲಿನಿಂದ ಹೆಗಲಿಗೆ ಹೆಣವನು ದಾಟಿಸುವುದು ಎಷ್ಟೊಂದು ಕಷ್ಟ

ನಿದಿರೆಯಲಿ ನಡೆದಾಡುವವರ ತಡೆದು ನಗೆಪಾಟಲಿಗೀಡು ಮಾಡದಿರಿ
ಇಲ್ಲಿ ಕನಸಿನಿಂದ ಕನಸಿಗೆ ಹೂದೋಟವನು ದಾಟಿಸುವುದು ಎಷ್ಟೊಂದು ಕಷ್ಟ

ADVERTISEMENT

ಸಾವಿರ ಬಾಯಾರಿದ ಮರುಭೂಮಿಗಳು ಮಲಗಿವೆ ನಿನ್ನ ಮೈಯೊಳಗೆ
ಇಲ್ಲಿ ನೆತ್ತರಿನಿಂದ ನೆತ್ತರಿಗೆ ನದಿಯನು ದಾಟಿಸುವುದು ಎಷ್ಟೊಂದು ಕಷ್ಟ

ಹಂಚಿಕೊಂಡಂತೆ ದುಃಖವನು ಹಂಚಿಕೊಳ್ಳಲಾರರು ಜನರು ಸುಖವನು
ಇಲ್ಲಿ ಕಣ್ಣಿನಿಂದ ಕಣ್ಣಿಗೆ ಬೆಳಕನು ದಾಟಿಸುವುದು ಎಷ್ಟೊಂದು ಕಷ್ಟ

ಹುಳುವೇನ ಬಲ್ಲದು ದೀಪವೆಂದರೆ ಬರೀ ಬೆಳಕಲ್ಲವೆಂಬುದ
ಇಲ್ಲಿ ಬೆಂಕಿಯಿಂದ ಬೆಂಕಿಗೆ ಪತಂಗವನು ದಾಟಿಸುವುದು ಎಷ್ಟೊಂದು ಕಷ್ಟ

ಬುದ್ಧ ಬಂದು ಹೋದರೂ ನಿನ್ನೊಂದಿಗೆ ನೀನೇ ಇರಬೇಕು ಕೊನೆಗಾಲದಲಿ
ಇಲ್ಲಿ ಮಾತಿನಿಂದ ಮಾತಿಗೆ ಸತ್ಯವನು ದಾಟಿಸುವುದು ಎಷ್ಟೊಂದು ಕಷ್ಟ

ಕುಡಿಯಲು ನೀರಿಲ್ಲದ ಊರಿನಲಿ ಶರಾಬಿನಂಗಡಿ ತೆರೆದು ಕುಂತವರು ನಾವು
ಇಲ್ಲಿ ತುಟಿಯಿಂದ ತುಟಿಗೆ ಬಟ್ಟಲನು ದಾಟಿಸುವುದು ಎಷ್ಟೊಂದು ಕಷ್ಟ

ಕಲ್ಲಾದವರ ಮುಂದೆ ಅದೇನ ಕವಿತೆ ಒದರುವಿಯೋ ಹುಚ್ಚಪ್ಪ
ಇಲ್ಲಿ ಕಲ್ಲಿನಿಂದ ಕಲ್ಲಿಗೆ ಸ್ಪಂದನವನು ದಾಟಿಸುವುದು ಎಷ್ಟೊಂದು ಕಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.