ADVERTISEMENT

ಕಾಡು ಬೆಳೆಸಿದ ಪಯೆಂಗ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ಕಾಡು ಬೆಳೆಸಿದ ಪಯೆಂಗ್
ಕಾಡು ಬೆಳೆಸಿದ ಪಯೆಂಗ್   

ಅಸ್ಸಾಂನ ಜೋರ್ಹಟ್‌ನಲ್ಲಿ ಜಾಧವ್ ‘ಮೊಲಾಯ್’ ಪಯೆಂಗ್ ಎಂಬ ಆದಿವಾಸಿ ಬ್ರಹ್ಮಪುತ್ರ ನದಿಗೆ ಹೊಂದಿಕೊಂಡ ಪ್ರದೇಶದಲ್ಲಿ ಅರಣ್ಯ ಬೆಳೆಸಿದರು.
ಬ್ರಹ್ಮಪುತ್ರ ನದಿಗೆ ಹೊಂದಿಕೊಂಡ ಮರಳೇರಿಯಲ್ಲಿ ಹಾವುಗಳು ಮರಗಳಿಲ್ಲದೆ ಸಾಯುತ್ತಿರುವುದು 1979ರಲ್ಲಿ ಪಯೆಂಗ್ ಕಣ್ಣಿಗೆ ಬಿತ್ತು. ಆಗಿನ್ನೂ ಅವರಿಗೆ ಹದಿನಾರರ ಪ್ರಾಯ. ವಿಪರೀತ ಧಗೆಯಿಂದ ಹಾವುಗಳು ಸಾಯುತ್ತಿವೆ ಎಂದು ಗೊತ್ತಾಯಿತು.

ಹತ್ತಿರದ ಅರುಣ ಚಪೋರಿ ಎಂಬಲ್ಲಿ ಸರ್ಕಾರದ ಮರ ಬೆಳೆಸುವ ಯೋಜನೆ ಪ್ರಾರಂಭಿಸಿತ್ತು. ಅದರಲ್ಲಿ ಪಯೆಂಗ್ ಕೂಡ ಕೆಲಸ ಮಾಡುತ್ತಿದ್ದರು. ಮರಳೇರಿಯಲ್ಲಿ ಬಿದಿರಿನ 20 ಮರಗಳನ್ನು ಬೆಳೆಸಲೆಂದು ಅವರು ಬೀಜ ಚೆಲ್ಲಿದರು. ಐದು ವರ್ಷಗಳ ನಂತರ ಚಪೋರಿ ಯೋಜನೆ ಪೂರ್ಣಗೊಂಡಿತು. ಆದರೆ, ಪಯೆಂಗ್ ಅಲ್ಲಿಯೇ ಉಳಿಯಲು ನಿರ್ಧರಿಸಿದರು.

ಅದಾಗಲೇ ಬೆಳೆದಿದ್ದ ಮರಗಳ ಆರೈಕೆ ಮಾಡುವುದಷ್ಟೇ ಅಲ್ಲದೆ ಇನ್ನಷ್ಟು ಮರಗಳನ್ನು ಬೆಳೆಸತೊಡಗಿದರು. ವರ್ಷಗಳು ಉರುಳಿದವು. 1,360 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಪಯೆಂಗ್ ಬೆಳೆಸಿದ ಕಾಡು ಹರಡಿಕೊಂಡಿತ್ತು. ಬಂಗಾಳ ಹುಲಿಗಳು, ಆನೆಗಳು, ಘೇಂಡಾಮೃಗಗಳು, ಜಿಂಕೆಗಳು ಕಾಡಿಗೆ ಹೊಕ್ಕವು. ವಿವಿಧ ತಳಿಗಳ ಸಹಸ್ರಾರು ಮರಗಳು ದಟ್ಟವಾಗಿ ಬೆಳೆದಿದ್ದವು. ಬಿದಿರೂ ಅವುಗಳಲ್ಲಿ ಸೇರಿತ್ತು. ಅರಣ್ಯದ ಮಧ್ಯ ಸಣ್ಣ ಗುಡಿಸಲಿನಲ್ಲಿ ಪಯೆಂಗ್ ಕುಟುಂಬ ವಾಸವಿದ್ದು, ಹಸು–ಎಮ್ಮೆಗಳ ಹಾಲು ಮಾರಿ ಅವರು ಜೀವನ ಸಾಗಿಸುತ್ತಾರೆ.

ADVERTISEMENT

ಮೊಲಾಯ್ ಅರಣ್ಯ ಪ್ರದೇಶಕ್ಕೆ ನಿಯಮಿತವಾಗಿ ನೂರು ಆನೆಗಳು ಬರುತ್ತವೆ. ಇದನ್ನು ನೋಡಿ ಅರಣ್ಯ ಇಲಾಖೆಗೇ ಅಚ್ಚರಿಯಾಯಿತು.

2015ರಲ್ಲಿ ಪಯೆಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಸಂದಿತು. ಅವರ ಕುರಿತು ಸಾಕ್ಷ್ಯಚಿತ್ರಗಳು ಬಂದವು. ‘ಸ್ಟೋರಿವೀವರ್’ ಕಂಪೆನಿಯು ‘ದಿ ಟ್ರೀ-ಪ್ಲೇಸ್’ ಎಂಬ ಮಕ್ಕಳ ಪುಸ್ತಕವನ್ನು ಹೊರತಂದಿತು. ಅದು ಪಯೆಂಗ್ ಬದುಕಿನ ಕಥೆಯನ್ನೇ ಒಳಗೊಂಡಿತ್ತು. ಬ್ರಹ್ಮಪುತ್ರ ನದಿಗೆ ಹೊಂದಿಕೊಂಡ ಇನ್ನೊಂದು ಮರಳೇರಿಯಲ್ಲಿ ಕಾಡು ಬೆಳೆಸಬೇಕು ಎನ್ನುವುದು ಪಯೆಂಗ್ ಅವರ ಮುಂದಿನ ಗುರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.