ADVERTISEMENT

ಕೋವಿಂದ್ ಬಾಳ ಪಯಣ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST
ಕೋವಿಂದ್ ಬಾಳ ಪಯಣ
ಕೋವಿಂದ್ ಬಾಳ ಪಯಣ   

ಪ್ರಣವ್ ಮುಖರ್ಜಿ ಅವರ ನಂತರ ಭಾರತದ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಆಯ್ಕೆಯಾದರು. ಅವರ ಪರಿಚಯಾತ್ಮಕ ಟಿಪ್ಪಣಿ ಇದು:

* ಕೋವಿಂದ್ ಹುಟ್ಟಿ, ಬೆಳೆದದ್ದು ಎಲ್ಲಿ?

1945ರ ಅಕ್ಟೋಬರ್ 1ರಂದು ಉತ್ತರ ಪ್ರದೇಶದ ಕಾನ್ಪುರದ ಪರೌಖ್ ಎಂಬ ಗ್ರಾಮದಲ್ಲಿ ಹುಟ್ಟಿದರು.ಐವರು ಮಕ್ಕಳಲ್ಲಿ ಅವರು ಕೊನೆಯವರು. ಮಣ್ಣಿನ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು.  ದಿನವೂ ಶಾಲೆಗೆ  6 ಕಿ.ಮೀ. ನಡೆದೇ ಸಾಗಬೇಕಿತ್ತು.

ADVERTISEMENT

* ಅವರು ಏನು ಓದಿದ್ದರು, ಮಾಡಿದ್ದು ಯಾವ ಕೆಲಸ?

ವಾಣಿಜ್ಯ ಪದವೀಧರರಾದ ಅವರು ವಕೀಲ ವೃತ್ತಿಯಲ್ಲಿದ್ದರು. ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಲ್ಲಿ 1993ರ ವರೆಗೆ ಕೆಲಸ ಮಾಡಿದರು. 'ಫ್ರೀ ಲೀಗಲ್ ಏಡ್ ಸೊಸೈಟಿ' ಮೂಲಕ ಬಡವರ ಕಾನೂನು ಹೋರಾಟಕ್ಕೆ ಸಾಥ್ ನೀಡಿದರು. ಎಸ್.ಸಿ ಹಾಗೂ ಎಸ್.ಟಿ. ಮಹಿಳೆಯರಿಂದ ಚಿಕ್ಕಾಸೂ ಪಡೆಯದೆ ಕಾನೂನು ಹೋರಾಟ ಮಾಡಿದ ಹೆಗ್ಗಳಿಕೆ ಅವರದ್ದು.

* ರಾಜಕೀಯ ಪ್ರವೇಶಿಸಿದ್ದು ಯಾವಾಗ?

1994ರಲ್ಲಿ ರಾಜ್ಯಸಭಾ ಎಂ.ಪಿ ಆಗಿ ಉತ್ತರ ಪ್ರದೇಶದಿಂದ ಆಯ್ಕೆಯಾದರು. ಎರಡು ಅವಧಿ ಅವರು ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡಿದರು. ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹಲವು ಶಾಲೆಗಳನ್ನು ಕಟ್ಟಿಸಿದರು. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ, 2002ರ ಅಕ್ಟೋಬರ್ ನಲ್ಲಿ ಭಾಷಣ ಮಾಡಿದರು. 2015ರಲ್ಲಿ ಬಿಹಾರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವ ಅವಕಾಶ ಸಂದಿತು.

* ಅವರು ಯಾರ ವಿರುದ್ಧ ಚುನಾವಣೆ ಎದುರಿಸಿ, ರಾಷ್ಟ್ರಪತಿಯಾಗಿ ಆಯ್ಕೆಯಾದದ್ದು?

ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದ ಮೀರಾಕುಮಾರಿ ಅವರ ವಿರುದ್ಧ. ಕೋವಿಂದ್ ಅವರಿಗೆ 7,02,644 ಮತಗಳು ಸಂದರೆ,  ಮೀರಾ ಅವರಿಗೆ 3,67,314 ಮತಗಳು ದೊರೆತವು. 1977ರಲ್ಲಿ ನೀಲಂ ಸಂಜೀವರೆಡ್ಡಿ ಅವರನ್ನು ಬಿಟ್ಟರೆ ಬೇರೆ ಯಾರೂ ಅವಿರೋಧವಾಗಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿಲ್ಲ.

* ರಾಷ್ಟ್ರಪತಿಯನ್ನು ಚುನಾಯಿಸುವವರು ಯಾರು?

ಸಂಸತ್ ನ ಉಭಯ ಸದನಗಳ ಸದಸ್ಯರು. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ  ಸದಸ್ಯರು ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.