ADVERTISEMENT

ತೃಪ್ತ

ನಾಗತಿಹಳ್ಳಿ ಚಂದ್ರಶೇಖರ
Published 30 ಡಿಸೆಂಬರ್ 2017, 19:30 IST
Last Updated 30 ಡಿಸೆಂಬರ್ 2017, 19:30 IST
ಚಿತ್ರ: ಶಶಿಕಿರಣ ದೇಸಾಯಿ
ಚಿತ್ರ: ಶಶಿಕಿರಣ ದೇಸಾಯಿ   

ಆಗಲೂ ಅರ್ಜಿ ಗುಜರಾಯಿಸಿರಲಿಲ್ಲ
ತಾನಾಗೆ ಮಂಜೂರು ದರಖಾಸ್ತು ತುಂಡು ನೆಲ
ಇರಬಹುದು ಚೂರು ಕಹಿ, ಬಾಕಿ ಬೆಲ್ಲ
ಇನ್ನು ಬೇಕೆಂದರೆ ಅದು ತೀರಾ ಸಲ್ಲ

ಆಗ್ರಹಕು ದೈನ್ಯತೆಗು ಅರ್ಥವೇ ಇಲ್ಲ
ಕಾಣಿಸದ ಪ್ರಭುವಿಗೆ ಪುರುಸೊತ್ತೆ ಇಲ್ಲ
ಕೋಟಿ ಕಡತಗಳು ಕೊಳೆಯುತಿವೆಯಲ್ಲ
ಸುಮ್ಮನಿರು ಮಾರಾಯ ಲೋಭ ತರವಲ್ಲ

ಬೇಡಿಕೆಯ ಮಂಡನೆ ಸಾಕಪ್ಪ ಸಾಕು
ಈ ಮುಖಕೆ ಈ ಸಲಕೆ ಇನ್ನೆಷ್ಟು ಬೇಕು
ಯಾರು ಕೊಟ್ಟಿದ್ದರೋ ಗ್ಯಾರಂಟಿ ಕಾರ್ಡು
ಅಳಬೇಡ ಚಪ್ಪಲಿಗೆ ಕಾಲಿರದವನ ನೋಡು

ಧನ್ಯತೆಯ ಹೇಳುತ್ತ ತಲೆಬಾಗಿ ನಮಿಸುತ್ತ
ಪಡೆದುದೆಲ್ಲವ ಮರಳಿ ಕೊಡಲು ಅಣಿಯಾಗು
ನೀ ಬರುವ ಮುನ್ನವೇ ನಿನಗಾಗಿ ಕಾಯುತ್ತ
ನಿಂತ ಸಾಲುಮರಗಳಿಗೆ ನಿಜಕು ಋಣಿಯಾಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT