ADVERTISEMENT

ಮರುಜೇವಣಿ ಮಂಡೇಲಾ...

ಕವಿತೆ

ಶಂಕರ ಕಟಗಿ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ದುಡಿ ನುಡಿಸುತ
ಹಾಡತೊಡಗಿದ್ದಾರೆ ಕರಿಯ ಗಾಯಕರು–

ದಿಗುತಟದ ಬೆಳವಟ್ಟ ಬೆಳಗನು
ಹೊನಲ ಸಿರಿಮೆಯ್ ಹೊಳಪನು
ಈ ಮಣ್ಣ ಮಂದಿಯ ಕಪ್ಪು ಬಣ್ಣವನು
ಬದಲಾಯಿಸಲು ಬಿಡಲಾರೆವು ನಾವು

ಆ ಗಾಯಕ ಹಾಡಿನೊಳಗೆ–

ADVERTISEMENT

ಬಿಳಿಯರು ಬಳಸಿದ ಕೋವಿಯ
ನಳಿಕೆಯಲಿ ಸಿಡಿಮದ್ದಿನ ಸದ್ದಿತ್ತು
ಹೊಟ್ಟೆ ಕಟ್ಟಿದ ಮಕ್ಕಳು ಇಕ್ಕಳದ ಹಾಗೆ
ರೊಟ್ಟಿಗಾಗಿ ಕೈಚಾಚಿದ ಚಿತ್ರಗಳಿದ್ದವು
ಕರಿತೊಗಲ ಸುಟ್ಟ ವಾಸನೆಯು
ಬೆಟ್ಟದಿರುಕಿನಲಿ ದಟ್ಟಯಿಸಿ ಅಮರುತಲಿತ್ತು
ನುಡಿವಕ್ಕಿ ನಾದದ ಬಿನದ ಗೂಡುಗಳಿದ್ದವು

ಆ ಗೂಡ ನಿನಾದ ಇಂತಪ್ಪ ಇತ್ತು–

ಮಂಡೇಲಾ ನೆಲ್ಸನ್‌ ಮಂಡೇಲಾ...
ತಿರೆಯ ತೆಂಕಕೆ ಉಂಕಿಯ ಹಾಸಿ
ನೆರೆಜರಿ ನೀರಿನ ಲಾಳಿಯ ಪೋಣಿಸಿ
ತಿಳಿವಿನ ನೂಲನು ನೇಯ್ದವನೆ
ಹಳಸಿದ ಗಾಳಿಯ ಒಳತಳ ತಾವಿಗೆ
ಮಧು ಮದರಂಗಿಯ ಗಿಡ ನೆಟ್ಟವನೆ

ಬಯಲಿಗೆ ಬಗೆ ಬಗೆ ಬಣ್ಣವ ಬರೆದೆ
ನವಿಲಿನ ಹಿಂಡಿಗೆ ಮಳೆಮೋಡವ ತಂದೆ
ಮಾಗಿದ ಮನಸಿಗೆ ತಾಗಿಸಿ ತಾಗಿಸಿ
ತೇಗದ ಎಲೆ ಗರಿ ಕಾಗದ ಓದಿದೆ...

ಆ ಕಾಗದದಲಿ–

ಸವೆದ ದಾರಿಯ ಬದಿಗೆ
ಜಾವಳಿಗನ ನೆತ್ತರದ ಹೆಜ್ಜೆ ಗುರುತುಗಳಿದ್ದವು
‘ಕುನು’ ಊರಿನ ಗೋರಿಯ ಮರೆಗೆ
ಕೊನರಿದ ಮರುಜೇವಣಿಯು ಕೊಸರುತಲಿತ್ತು

ರಾಗಿ ಕುದಿತದ ಬೋಗುಣಿ ಕಡೆಗೆ
ಉರಿ ಬೆಂಕಿ ಯೋಗಿಯ ನಡುಗಣ್ಣ ನೆದರಿತ್ತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.