ಸೋಮಣ್ಣ–ಭೀಮಣ್ಣ ಎಂಬ ಸಹೋದರರು ದಿನಾಲೂ ಕಾಡಿಗೆ ಹೋಗಿ, ಕಟ್ಟಿಗೆ ಕಡಿದುಕೊಂಡು ಬಂದು ಪಟ್ಟಣದ ಸಂತೆಯಲ್ಲಿ ಮಾರಿ ಬಂದ ಕಾಸಿನಿಂದ ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಕಾಡಿನಲ್ಲಿ ಕಟ್ಟಿಗೆಗಾಗಿ ಅಲೆಯುತ್ತಿರುವಾಗ ಮರವೊಂದರ ಬುಡದಲ್ಲಿ ಸಾಧು ತಪಸ್ಸಿಗೆ ಕುಳಿತಿರುವುದನ್ನು ಕಂಡು ಹತ್ತಿರ ಹೋಗಿ ನಮಸ್ಕರಿಸಿ ನಿಂತರು.
ಆ ಸಾಧು ಮೆಲ್ಲನೆ ಕಣ್ಣು ತೆರೆದು ಇವರನ್ನು ನೋಡಿ ‘ಯಾರು ನೀವು? ನನ್ನಿಂದೇನಾಗಬೇಕು’ ಎಂದು ಕೇಳಿದರು. ಈ ಸಹೋದರರು ತಮ್ಮ ಸಂಕಷ್ಟ, ಬಡತನದ ಸ್ಥಿತಿ ಹೇಳಿ ಸಹಾಯಕ್ಕಾಗಿ ಬೇಡಿಕೆಯಿತ್ತರು. ಒಂದು ಕ್ಷಣ ಧ್ಯಾನಮಗ್ನರಾದ ಸಾಧು ಕಣ್ಣು ತೆರೆದು ‘ನಾನು ನಿಮಗೆ ತಲಾ ಒಂದು ಚಿನ್ನದ ನಾಣ್ಯ ಇರುವ ಬಿಂದಿಗೆ ಕೊಡುವೆ. ನ್ಯಾಯದಿಂದ ಬಾಳಿ. ಸುಳ್ಳು ನುಡಿಯಬೇಡಿ...’ ಎಂದು ಎಚ್ಚರಿಸಿ, ಕೊಟ್ಟರು.
ಸಂತಸಗೊಂಡ ಸಹೋದರರು ಚಿನ್ನದ ನಾಣ್ಯ ಇರುವ ಬಿಂದಿಗೆಗಳನ್ನು ಪಡೆದುಕೊಂಡು ಬರುತ್ತಿರುವಾಗ ಹಾದಿಯಲ್ಲಿಯ ದೇವಸ್ಥಾನದ ಮುಂದೆ ಭೀಕ್ಷುಕನೊಬ್ಬನಿದ್ದ. ಆತ ಇವರನ್ನು ಕಂಡು ‘ಅಯ್ಯಾ... ಏನಾದ್ರೂ ದಾನ ಮಾಡಿ! ಬಿಂದಿಗೆಯಲ್ಲಿರುವುದೇನು? ನಂಗೂ ಸ್ವಲ್ಪ ಕೊಡಿ...’ ಎಂದು ಬೇಡಿದ.
ಸೋಮಣ್ಣ ‘ಇದ್ರಲ್ಲೇನಿದೇ? ಮಣ್ಣು...!’ ಎಂದು ಸುಳ್ಳು ಹೇಳಿ ಜಾರಿಕೊಂಡ. ಆದರೆ ಭೀಮಣ್ಣ ನಾಲ್ಕು ಚಿನ್ನದ ನಾಣ್ಯಗಳನ್ನು ಭಿಕ್ಷುಕನಿಗೆ ಕೊಟ್ಟ. ಸುಳ್ಳು ಹೇಳಿದ ಸೋಮಣ್ಣನ ಚಿನ್ನದ ನಾಣ್ಯಗಳು ಮಣ್ಣಾದರೆ ಸತ್ಯದಿಂದ ದಾನ ಮಾಡಿದ ಭೀಮಣ್ಣನ ಬಿಂದಿಗೆಯಲ್ಲಿ ಮತ್ತಷ್ಟು ಚಿನ್ನದ ನಾಣ್ಯಗಳು ಫಳಫಳನೆ ಹೊಳೆಯುತ್ತಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.