ಧ್ರುವ ಘೋಷ್ (ಬಂಗಾಳಿಯಲ್ಲಿ ಧ್ರುಬ ಘೋಷ್ ಎಂದು ಕರೆಯುತ್ತಾರೆ) ಅವರನ್ನು ಜಗತ್ತು ನೆನಪಿಸಿಕೊಳ್ಳುವುದು ಸಾರಂಗಿ ವಾದ್ಯಕ್ಕೆ ಸ್ವತಂತ್ರ ಸ್ಥಾನ–ಮಾನ ಕಲ್ಪಿಸಿಕೊಟ್ಟಿದ್ದಕ್ಕಾಗಿ.
1957ರಲ್ಲಿ ಹುಟ್ಟಿದ ಧ್ರುವ ಸಂಗೀತದ ಕುಟುಂಬದವರು. ಅವರ ತಂದೆ ನಿಖಿಲ್ ಘೋಷ್ ತಬಲಾ ವಾದಕರಾಗಿದ್ದರು. ಬಾಲ್ಯದಲ್ಲಿಯೇ ಧ್ರುವ ತಂದೆಯ ಕಛೇರಿಗಳಲ್ಲಿ ಸಾಥ್ ನೀಡುತ್ತಿದ್ದರು. ಅಂದಿನಿಂದಲೂ ಭಾರತ ಹಾಗೂ ವಿದೇಶಗಳಲ್ಲಿ ಅವರು ಹಲವು ಕಛೇರಿಗಳನ್ನು ನೀಡಿದ್ದಾರೆ.
ವಿದೇಶಿ ಶಾಸ್ತ್ರೀಯ ಸಂಗೀತಗಾರರ ಜೊತೆಗೂಡಿ ಧ್ರುವ ಘೋಷ್ ಸಾರಂಗಿಗೆ ಹೆಚ್ಚು ಪ್ರಚಾರ ಕೊಟ್ಟರು. ಜಪಾನ್ನ ‘ವರ್ಲ್ಡ್ ಸ್ಟ್ರಿಂಗ್ ಆರ್ಕೆಸ್ಟ್ರಾ’ ವ್ಯವಸ್ಥಾಪಕರಲ್ಲಿ ಅವರೂ ಒಬ್ಬರು. ಜಪಾನ್, ಚೀನಾ, ಕೊರಿಯಾ, ಉಜ್ಬೇಕಿಸ್ತಾನ ಹಾಗೂ ಭಾರತದ ಸಾಂಪ್ರದಾಯಿಕ ತಂತಿವಾದ್ಯಗಳನ್ನು ಒಂದೇ ವೇದಿಕೆಗೆ ತಂದ ಹೆಗ್ಗಳಿಕೆ ಆ ವಾದ್ಯವೃಂದದ್ದು.
ಅಮೆರಿಕದ ಸ್ಯಾಕ್ಸೊಫೋನ್ ವಾದಕ ಪಾಲ್ ವಿಂಟರ್ ಜೊತೆಗೂಡಿ ‘ಮಿಹೊ: ದಿ ಜರ್ನಿ ಟು ದಿ ಮೌಂಟೆನ್ಸ್’ ಎಂಬ ಯೋಜನೆಯಲ್ಲಿ ತೊಡಗಿಕೊಂಡರು. ಅದು ಪ್ರಕೃತಿ ಸಹಜ ಶಬ್ದಗಳಿಂದ ಪ್ರೇರಣೆ ಪಡೆದ ಸಂಗೀತ ಮೂಡಿಸುವ ಮಹತ್ವದ ಯೋಜನೆಯಾಗಿತ್ತು. ಎರಡು ಸ್ವರ ಸಂಯೋಜನೆಯನ್ನು ಅವರು ಮಾಡಿದ್ದು, ಅವುಗಳಲ್ಲಿ ಒಂದು– ‘ವೇಲ್ ರಾಗ’. ತಿಮಿಂಗಿಲಗಳು ಹೊಮ್ಮಿಸುವ ಶಬ್ದದಿಂದ ಪ್ರೇರಿತವಾದ ಸಂಗೀತ ಅದು. ಹೊಸ ತಲೆಮಾರಿನ ಶ್ರೇಷ್ಠ ಸಂಗೀತ ಎಂದು ಅದನ್ನು ಪರಿಗಣಿಸಿ, 2010ರಲ್ಲಿ ಗ್ರ್ಯಾಮಿ ಪ್ರಶಸ್ತಿ ನೀಡಲಾಯಿತು.
ಮುಂಬೈನ ಭಾರತೀಯ ವಿದ್ಯಾ ಭವನದ ಭಾರತೀಯ ಸಂಗೀತ ಹಾಗೂ ನರ್ತನ ಶಿಕ್ಷಾಪೀಠದ ಪ್ರಾಂಶುಪಾಲರಾಗಿಯೂ ಅವರು ಕೆಲಸ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.