ಅಂದು ಭಾನುವಾರದಂದು
ನಾವು ನಾಲ್ವರು
ಸೈಕಲ್ಲೇರಿ ಹೊರಟಿದ್ದೆವು
ಹೊಸ ರಸ್ತೆಯಲಿ
ಮೈಸೂರಲ್ಲಿ ಮೊದಲೆ ಅಲ್ಲ
ಬೆಂಗ್ಳೂರಲ್ಲಿ ಅಲ್ವೆ ಅಲ್ಲ
ಹೊಸಪೇಟೆಯ ಹೊಸರಸ್ತೆಯ
ವಿಸ್ತಾರದಲಿ!
ತಿಳಿಬೆಳಕಿನ ತಂಗಾಳಿಯ
ಸಂತಸದಾ ಸಮಯದಲಿ
ಸೈಕಲ್ಲೇರಿ ಹೊರಟಿದ್ದೆವು
ನಾವು ನಾಲ್ವರು!
ನಾನು ಭೂಮಿ ಅಕ್ಕಸುನಿಧೀ
ಸೋದರತ್ತೆ ಮಗಳು ಪ್ರಜ್ಞಾ
ಇಂಚರಾ ಗೆಳತಿ ಸೇರಿ
ಹೊರಟಿದ್ದೆವು ನಾವು ನಾಲ್ವರು
ಸಮ್ಮು ಸೃಜನ್
ಯಶಸ್ ಧೀರೇನ್
ಇವರದೊಂದು ಪಟಾಲಂ
ಬರೀ ಮಾತು ಕೆಲಸ ಸೊನ್ನೆ
ಚಾಟರ್ ಬಾಕ್ಸಸ್ ಚಟ್ಪಟಂ!
ಧೀರೇನ್ ಮನೆಯ ಮುದ್ದು ಬೆಕ್ಕು
ಮೊಲಕ್ಕಿಂತ ಬಿಳಿ ಬಿಳಿ
ಕಣ್ಣು ಮುಚ್ಚಿ ಕಣ್ಣು ತೆರೆಯೆ
ಅದರ ಕಣ್ಣು ಪಿಳಿಪಿಳಿ!
ವಾರವಾಯ್ತು ಕಾಣೆಯಾಗಿ
ಮನೆಯಲೆಲ್ಲ ಕಳವಳ
ಹುಡುಕಿ ಹುಡುಕಿ ಕಾಣೆಯಾಗಿ
ಮನದ ತುಂಬ ಹಳವಳ
ಧೀರೇನ್ ಸೃಜನ್
ಕೋಲು ಹಿಡಿದು
ಪೊದೆಯ ಕೆದಕುತಿದ್ದರು
ಅಡ್ಡ ಬರುವ ನಾಯಿಗಳನು
ಹಿಡಿದು ತದಕುತಿದ್ದರು!
ಹೀಗೆ ಸಾಗಿರಲು ಕತೆಯು
ಪೊದೆಯ ಮಧ್ಯದೊಳಗಿಂದ
ಹಂದಿಮರಿಯು ಹಾರಿ ಬಂತು
ರಸ್ತೆ ಪಕ್ಕದಿಂದ!
ಹಂದಿಮರಿಯು ರಸ್ತೆಯಲ್ಲಿ
ಹಾರಿಬರಲು ಥಟ್ಟನೆ
ಬ್ಯಾಲೆನ್್ಸ ತಪ್ಪಿಬಿದ್ದೆವು
ರಸ್ತೆಯಲ್ಲಿ ಧೊಪ್ಪನೆ!
ಅಂಗಡಿ ಕಟ್ಟೆಲಿದ್ದ ಪೊಲೀಸಪ್ಪ
ರಸ್ತೆಗೆ ನಡೆದು ಬಂದನು
ಚಾಕ್ಲೇಟಿತ್ತು ವಾರ್ನಿಂಗ್ ಕೊಟ್ಟು
ರಮಿಸಿ ಮನೆಗೆ ಕಳಿಸಿದನು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.