ಅಮಿತಾವ್ ಘೋಷ್ ಇಂಗ್ಲಿಷ್ನಲ್ಲಿ ಬರೆಯುವ ಭಾರತದ ಮಹತ್ವದ ಲೇಖಕ. ಅವರ ‘ಶಾಡೋಲೈನ್ಸ್’ ಎಂಬ ಪ್ರಸಿದ್ಧ ಕಾದಂಬರಿಯನ್ನು ಎಂ.ಎಸ್. ರಘುನಾಥ್ ಕನ್ನಡಕ್ಕೆ ತಂದಿದ್ದಾರೆ. ‘ಈ ಕಾದಂಬರಿಯು ರಾಷ್ಟ್ರೀಯತೆ, ಅಂತರರಾಷ್ಟ್ರೀಯತೆ, ಸಾಂಸ್ಕೃತಿಕ ಹಾಗೂ ಚಾರಿತ್ರಿಕ ನಿರ್ಧಾರ – ಈ ಉದ್ದೇಶಗಳನ್ನು ಕುರಿತ ಚಿಂತನೆಯಾಗಿದೆ’ ಎಂದು ಅನುವಾದಕರು ತಮ್ಮ ಮಾತಿನಲ್ಲಿ ಕಾದಂಬರಿಯ ಕುರಿತಂತೆ ಹೇಳಿದ್ದಾರೆ. ಸ್ವತಂತ್ರ ರಾಷ್ಟ್ರದ ಕುರಿತ ಹತಾಶೆ, ಅಸಮಾಧಾನಗಳ ಕುರಿತ ನೋಟಗಳನ್ನು ಇದು ಕೊಡುತ್ತದೆ.
ಇಲ್ಲಿನ ಕತೆಯೂ ಸರಳ. ಬೇರೆಬೇರೆ ಧರ್ಮಗಳಿಗೆ ಸೇರಿದ ಎರಡು ಕುಟುಂಬಗಳ ನಡುವಿನ ಕತೆಯಾಗಿದೆ. ಜಸ್ಟಿಸ್ ಚಂದ್ರಶೇಖರ ದತ್ತ ಚೌಧರಿ ಹಾಗೂ ಲಯನೆಲ್ ಟ್ರೆಸಾವ್ಸೆನ್ ಎಂಬ ಎರಡು ಗೆಳೆಯರ ನಡುವಿನ ಕತೆ ಮಾತ್ರವಲ್ಲ, ಅದು ಅವರ ಮುಂದಿನ ತಲೆಮಾರುಗಳಿಗೂ ವಿಸ್ತರಿಸುತ್ತದೆ.
ಕತೆಯ ಕಾಲಮಾನ ಎರಡನೇ ಮಹಾಯುದ್ಧ (1939) ಮತ್ತು ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದ ಹಿಂಸೆ (1964)ಯ ನಡುವಿನದು. ನೆನಪು – ಅನುಭವ, ದೇಶ – ಕಾಲ, ವಾಸ್ತವ – ಕಲ್ಪನೆಗಳನ್ನು ಬಳಸಿಕೊಂಡು ಈ ಕಾದಂಬರಿ ಬೆಳೆಯುತ್ತದೆ.
ಕಾದಂಬರಿಯ ನೇಯ್ಗೆಯ ಹಿಂದಿರುವುದು ಭಾರತದ ರಾಜಕೀಯ, ಮೂಲಭೂತವಾದ, ಮನುಷ್ಯ ಸ್ವಭಾವದ ಹಲವು ನೆರಳುಗಳು ಮತ್ತು ಎಳೆಗಳು. ಅಮಿತಾವ್ ಘೋಷ್ ಅತ್ಯಂತ ಲವಲವಿಕೆಯ, ಮನಮುಟ್ಟುವ ಬರವಣಿಗೆಯಿಂದ ಪ್ರಭಾವಶಾಲಿ ಕತೆಯೊಂದನ್ನು ಓದುಗರ ಮುಂದಿಟ್ಟಿದ್ದಾರೆ. ಎಂ.ಎಸ್. ರಘುನಾಥ್ ಅವರ ಅನುವಾದಿಂದಾಗಿ ಕನ್ನಡ ಓದುಗರಿಗೆ ಆ ಉತ್ತಮ ಕತೆ ಈಗ ದಕ್ಕುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.