ಮೈಸೂರು: ಎಲ್ಲ ಕ್ಷೇತ್ರಗಳಲ್ಲಿ ಇರುವ ಭ್ರಷ್ಟಾಚಾರದ ಕರಿನೆರಳು ಮಾಧ್ಯಮ ಕ್ಷೇತ್ರದ ಮೇಲೂ ಬಿದ್ದಿರುವುದು ಕಳವಳದ ವಿಚಾರ ಎಂದು ಪಬ್ಲಿಕ್ ಟಿ.ವಿ ಸುದ್ದಿವಾಹಿನಿಯ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹೇಳಿದರು.
‘ಮಾಧ್ಯಮ: ಮುಂದಿರುವ ಸವಾಲುಗಳು’ ಗೋಷ್ಠಿಯಲ್ಲಿ ದಿಕ್ಸೂಚಿ ನುಡಿಗಳನ್ನಾಡಿದ ಅವರು, ‘ಮಾಧ್ಯಮಗಳಲ್ಲಿ ನುಸುಳಿರುವ ಭ್ರಷ್ಟಾಚಾರವು ನಮ್ಮನ್ನು ನೈತಿಕವಾಗಿ ಶಿಥಿಲಗೊಳಿಸುತ್ತಿದೆ. ಸಮಾಜವು ನಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಿಲು ಹೊಂದಾಣಿಕೆ ಮಾಡಿಕೊಳ್ಳುವುದು ಸಾಮಾನ್ಯ. ಬಹಳ ಪತ್ರಕರ್ತರು ಕೂಡಾ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಆತಂಕದ ವಿಚಾರ. ಪರಿಸ್ಥಿತಿಯ ಒತ್ತಡ ಇದಕ್ಕೆ ಕಾರಣವಾಗಿರಲೂಬಹುದು ಎಂದು ಅಭಿಪ್ರಾಯಪಟ್ಟರು.
ಕನ್ನಡವು ಒಂದು ಮತ, ಧರ್ಮವಾಗಿ ಬೆಳೆಯದೆ ಇರುವುದು ದೊಡ್ಡ ದುರಂತ. ಕನ್ನಡ ಪರ ಹೋರಾಟಗಳು ಕ್ಷಣಿಕವಾಗುತ್ತಿವೆ. ಕನ್ನಡಕ್ಕಾಗಿ ಹೋರಾಡುವವರನ್ನು ಸರ್ಕಾರವು ‘ಗೂಂಡಾ’ಗಳು ಎಂದು ಕರೆದರೆ, ಕನ್ನಡದ ಉಳಿವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
‘ಮುದ್ರಣ ಮಾಧ್ಯಮ’ ಕುರಿತು ಮಾತನಾಡಿದ ‘ಪ್ರಜಾವಾಣಿ’ಯ ಸಹಾಯಕ ಸಂಪಾದಕ ಎನ್.ಉದಯಕುಮಾರ್, ‘ಇಂದು ಡಿಜಿಟಲ್ ಮಾಧ್ಯಮಗಳು ಪತ್ರಿಕೆಗಳಿಗೆ ಬಲುದೊಡ್ಡ ಸವಾಲೊಡ್ಡಿದೆ’ ಎಂದು ಅವರು ಹೇಳಿದರು.
ಡಿಜಿಟಲ್ ಮಾಧ್ಯಮಗಳಿಗೆ ಇನ್ನೊಂದು ಮಾಧ್ಯಮವನ್ನು ಅಪ್ರಸ್ತುತಗೊಳಿಸುವ ಶಕ್ತಿಯಿದೆ. ಮುಂದಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳ ಆದಾಯದ ಬಲುದೊಡ್ಡ ಪಾಲು ಡಿಜಿಟಲ್ ಮಾಧ್ಯಮಗಳ ತೆಕ್ಕೆಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸುದ್ದಿಗಳ ಮೌಲ್ಯವರ್ಧನೆ ಮಾಡುವುದು, ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮತ್ತು ನುರಿತ ಪತ್ರಕರ್ತರನ್ನು ಕಂಡುಕೊಳ್ಳುವುದು ಮುದ್ರಣ ಮಾಧ್ಯಮಗಳ ಮುಂದಿರುವ ಪ್ರಮುಖ ಸವಾಲುಗಳಾಗಿವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ತಿಮ್ಮಪ್ಪ ಭಟ್, ‘ಕನ್ನಡದ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಮಾಧ್ಯಮದ ಮುಂದಿರುವ ಸವಾಲು’ ಎಂದರು.
ಕನ್ನಡ ಅಪಾಯದಲ್ಲಿದೆ ಎಂದು ನಾನು ಭಾವಿಸುವುದಿಲ್ಲ. ಕನ್ನಡವು ಸಶಕ್ತ ಭಾಷೆ. ಆದರೆ ಇಂದಿನ ಶಿಕ್ಷಣದ ನೀತಿಯಿಂದಾಗಿ ಕನ್ನಡದ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ‘ಸಾಮಾಜಿಕ ಜಾಲತಾಣ’ ಕುರಿತು ಎನ್.ರವಿಶಂಕರ್ ವಿಷಯ ಮಂಡಿಸಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.