ಬೆಂಗಳೂರು: ಅರಿಸೆಂಟ್ ಮತ್ತು ರಾಷ್ಟ್ರೀಯ ಸಾಫ್ಟ್ವೇರ್ ಹಾಗೂ ಸೇವಾ ಸಂಸ್ಥೆಗಳ ಒಕ್ಕೂಟದ (ನಾಸ್ಕಾಂ) ಫೌಂಡೇಷನ್ ಆಶ್ರಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಉದ್ಯೋಗಶೀಲತೆಯ ಕೌಶಲ ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
‘3,400 ಕಾಲೇಜ್ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಒದಗಿಸುವ ವಿಶಿಷ್ಟ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮ (ಸಿಎಸ್ಆರ್) ಇದಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ದೆಹಲಿ – ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ (ಎನ್ಸಿಆರ್) ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಒಳಗೊಂಡಿದೆ’ ಎಂದು ನಾಸ್ಕಾಂ ಫೌಂಡೇಷನ್ ಸಿಇಒ ಶ್ರೀಕಾಂತ್ ಸಿನ್ಹಾ ತಿಳಿಸಿದರು.
‘ಎರಡೂ ಸಂಘಟನೆಗಳು ಕಳೆದ ವರ್ಷ ಪ್ರಾಯೋಗಿಕವಾಗಿ ಆರಂಭಿಸಿದ್ದ ಈ ಅರೈಸ್ ಕಾರ್ಯಕ್ರಮದಡಿ 2,700ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಉದ್ಯೋಗಶೀಲತಾ ಕೌಶಲ ಹೆಚ್ಚಿಸಲಾಗಿತ್ತು. ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳು ಸದ್ಯಕ್ಕೆ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
‘ಕಾಲೇಜ್ ಕ್ಯಾಂಪಸ್ನಲ್ಲಿಯೇ ನಡೆಯುವ ಈ ಕಾರ್ಯಕ್ರಮವು ಎರಡು ಮತ್ತು ಮೂರನೇ ಸ್ಥರದ ನಗರಗಳ ಎಂಜಿನಿಯರಿಂಗ್ ಕಾಲೇಜ್ಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಅವಕಾಶ ವಂಚಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವ ಕೌಶಲ ಒದಗಿಸಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.