ನವದೆಹಲಿ: ವೊಡಾಫೋನ್, ಐಡಿಯಾ ವಿಲೀನಕ್ಕೆ ಸಂಬಂಧಿಸಿದಂತೆ ಐಡಿಯಾ ಸಂಸ್ಥೆಯು ತನ್ನ ಷೇರುದಾರರು ಮತ್ತು ಸಾಲ ನೀಡಿರುವ ಹಣಕಾಸು ಸಂಸ್ಥೆಗಳ ಒಪ್ಪಿಗೆ ಪಡೆಯಲು ಅಕ್ಟೋಬರ್ 12 ರಂದು ಸಭೆ ಕರೆದಿದೆ.
ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಮಂಡಳಿ (ಎನ್ಸಿಎಲ್ಟಿ) ನಿರ್ದೇಶನದಂತೆ ಗುಜರಾತ್ನ ಗಾಂಧಿ ನಗರದಲ್ಲಿ ಸಭೆ ನಡೆಸಲಾಗುವುದು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ವಿಲೀನ ಒಪ್ಪಂದವನ್ನು ಯಥಾಸ್ಥಿತಿಯಲ್ಲಿ ಅಥವಾ ಬದಲಾವಣೆ ಮಾಡುವ ಮೂಲಕ ಷೇರುದಾರರು ಮತ್ತು ಹಣಕಾಸು ಸಂಸ್ಥೆಗಳ ಒಪ್ಪಿಗೆ ಕೋರಲಾಗುವುದು. ಸೆಪ್ಟೆಂಬರ್ 12 ರಿಂದ ಅಕ್ಟೋಬರ್ 11ರವರೆಗೆ ನಡೆಯಲಿರುವ ಅಂಚೆ ಮತದಾನ ಮೂಲಕ ವಿಲೀನಕ್ಕೆ ಷೇರುದಾರರ ಒಪ್ಪಿಗೆ ಪಡೆಯಲಾಗುವುದು ಎಂದು ಐಡಿಯಾ ಸಂಸ್ಥೆ ತಿಳಿಸಿದೆ.
ದೂರಸಂಪರ್ಕ ರಂಗದಲ್ಲಿನ ಅತಿದೊಡ್ಡ ವಿಲೀನ ನಿರ್ಧಾರ ಇದಾಗಿದೆ. ಈ ವಿಲೀನದಿಂದಾಗಿ, ಮೊಬೈಲ್ ಬಳಕೆದಾರರ ಸಂಖ್ಯೆ ಮತ್ತು ವರಮಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹೊಸ ದೂರಸಂಪರ್ಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮೊಬೈಲ್ ಸಂಸ್ಥೆ ಏರ್ಟೆಲ್ ಅನ್ನು ಹಿಂದಿಕ್ಕಲಿದೆ.
ವಿಲೀನಗೊಂಡ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಅವರು ಹೊಸ ಸಂಸ್ಥೆಯ ಅಧ್ಯಕ್ಷರಾಗಿರಲಿದ್ದಾರೆ. ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಹೊಣೆಯನ್ನು ವೊಡಾಫೋನ್ಗೆ ಸೇರಿದವರು
ನಿರ್ವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.