ನವದೆಹಲಿ (ಪಿಟಿಐ): ಚಿನ್ನದ ಆಮದು ನಿಯಂತ್ರಿಸಲು ಮತ್ತು ಭೌತಿಕ ಸ್ವರೂಪದಲ್ಲಿರುವ ಚಿನ್ನವನ್ನು ನಗದಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಿಕೊಡಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮೂರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ, ಚಿನ್ನದ ನಾಣ್ಯದ ಬೇಡಿಕೆ ಪೂರೈಸಲು ಅಶೋಕ ಚಕ್ರ ಚಿತ್ರ ಹೊಂದಿರುವ ಭಾರತೀಯ ಚಿನ್ನದ ನಾಣ್ಯ (ಇಂಡಿಯನ್ ಗೋಲ್ಡ್ ಕಾಯಿನ್) ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ.
ಮೂರು ಯೋಜನೆಗಳಲ್ಲಿ, ಅಗತ್ಯ ಬಿದ್ದಾಗ ನಗದಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಿರುವ ಚಿನ್ನದ ಸಾಲಪತ್ರ ಹೂಡಿಕೆ (ಗೋಲ್ಡ್ ಬಾಂಡ್) ಮೊದಲನೆಯದು. ಇದಕ್ಕೆ ನಿಗದಿತ ಬಡ್ಡಿಯೂ ಲಭಿಸುತ್ತದೆ. ಚಿನ್ನ ನಗದೀಕರಣ ಯೋಜನೆ ಎರಡನೆಯದು. ಈಗಿನ ಚಿನ್ನ ಠೇವಣಿ ಯೋಜನೆ ಮತ್ತು ಚಿನ್ನದ ಮೇಲಿನ ಸಾಲ ಯೋಜನೆ ಬದಲಿಗೆ ಇದು ಜಾರಿಗೆ ಬರಲಿದೆ. ಚಿನ್ನದ ಠೇವಣಿ ಯೋಜನೆಯಡಿ ಗ್ರಾಹಕರಿಗೆ ಬಡ್ಡಿ ಯೂ ಲಭಿಸಲಿದೆ. ಚಿನ್ನಾಭರಣ ವರ್ತಕರು ಕೂಡ ಲೋಹ ಖಾತೆಯನ್ನು ತೆರೆದು ಸಾಲ ಪಡೆಯಬಹುದು. ಬ್ಯಾಂಕುಗಳಿಗೆ ತಮ್ಮ ಸಂಗ್ರಹದಲ್ಲಿರುವ ಚಿನ್ನವನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಅವಕಾಶವನ್ನೂ ಈ ಯೋಜನೆ ನೀಡಿದೆ.
ಸದ್ಯ ಭಾರತದಲ್ಲಿ ಸುಮಾರು 20 ಸಾವಿರ ಟನ್ಗಳಷ್ಟು ಚಿನ್ನದ ಸಂಗ್ರಹ ಇದೆ. ಈ ಚಿನ್ನವನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಲಭಿಸಿದರೆ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿದುಬರಲಿದೆ ಎನ್ನುವುದು ಜೇಟ್ಲಿ ಅವರ ಅಭಿಪ್ರಾಯ. ಇದರ ಜತೆಗೆ ಪ್ರತಿ ವರ್ಷ 800 ರಿಂದ 1 ಸಾವಿರ ಟನ್ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದನ್ನೂ ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಬಹುದು ಎನ್ನುತ್ತಾರೆ ಅವರು.
ಪರ್ಯಾಯ ಹಣಕಾಸು ಹೂಡಿಕೆಯಾಗಿ ‘ಸಾರ್ವಭೌಮ ಗೋಲ್ಡ್ ಬಾಂಡ್’ ಯೋಜನೆಯನ್ನೂ ಜೇಟ್ಲಿ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.