ಬ್ಯಾಡಗಿ (ಹಾವೇರಿ ಜಿಲ್ಲೆ): ಗುಂಟೂರ ತಳಿ ಮೆಣಸಿನಕಾಯಿ ಧಾರಣೆ ಕುಸಿತ ಖಂಡಿಸಿ ರೈತರು ಶುಕ್ರವಾರ ಮೆಣಸಿನಕಾಯಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಮಾರಾಟಕ್ಕಿಟ್ಟಿದ್ದ ಕೆಲ ಮೆಣಸಿನಕಾಯಿ ಚೀಲಗಳಿಗೆ ಕ್ವಿಂಟಲ್ಗೆ ಕೇವಲ ₹100 ನಮೂದಿಸಲಾಗಿದೆ ಎಂದು ಆರೋಪಿಸಿದ ರೈತರು, ಮೊದಲು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ, ಧಾರಣೆ ಹೆಚ್ಚಿಸುವಂತೆ ಆಗ್ರಹಪಡಿಸಿದರು.
‘ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿದದ್ದರಿಂದ ತೋಯ್ದ ಮೆಣಸಿನಕಾಯಿಯನ್ನೇ ರೈತರು ಮಾರುಕಟ್ಟೆಗೆ ತಂದಿದ್ದಾರೆ. ಕಡಿಮೆ ಗುಣಮಟ್ಟದ ಮೆಣಸಿನಕಾಯಿಗೆ ವರ್ತಕರು ಕಡಿಮೆ ಬೆಲೆ ನಮೂದಿಸಿದ್ದಾರೆ.
ಗುಣಮಟ್ಟದ ಮೆಣಸಿನಕಾಯಿಗೆ ಯೋಗ್ಯ ಬೆಲೆ ಸಿಕ್ಕಿದೆ. ಯೋಗ್ಯ ಬೆಲೆ ಬಂದಿದ್ದರೆ ಮಾತ್ರ ರೈತರು ಉತ್ಪನ್ನ ಮಾರಾಟ ಮಾಡಬಹುದು’ ಎಂದು ಎಪಿಎಂಸಿ ಅಧ್ಯಕ್ಷ ದಾನಪ್ಪಗೌಡ ತೋಟದ ಹೇಳಿದರು.
ಶುಕ್ರವಾರ ಮಾರುಕಟ್ಟೆಗೆ ಶೇ 95ರಷ್ಟು ಗುಂಟೂರ ತಳಿ ಮೆಣಸಿಕಾಯಿ ಆವಕವಾಗಿತ್ತು. ಕನಿಷ್ಠ ₹ 520ರಿಂದ ಗರಿಷ್ಠ ₹ 6,050 ರವರೆಗೆ ಮಾರಾಟವಾಯಿತು. ಮಾರುಕಟ್ಟೆಗೆ 2,42,786 ಚೀಲ (72,836 ಕ್ವಿಂಟಲ್) ಒಣಮೆಣಸಿನಕಾಯಿ ಬಂದಿತ್ತು. ಇದು ಸೇರಿ, ಪ್ರಸಕ್ತ ಹಂಗಾಮಿನಲ್ಲಿ ಆರು ಬಾರಿ, ಒಂದೇ ದಿನ ಎರಡು ಲಕ್ಷಕ್ಕಿಂತ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾದಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.