ನವದೆಹಲಿ: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಭಾರತ್ ಸಂಚಾರ್ ನಿಗಮ್ ನಿಯಮಿತದ (ಬಿಎಸ್ಎನ್ಎಲ್) ಸಿಬ್ಬಂದಿ ಇದೇ 27ರಂದು ದೇಶದಾದ್ಯಂತ ಮುಷ್ಕರ ನಡೆಸಲಿದ್ದಾರೆ.
ಮೂರನೇ ವೇತನ ಪರಿಷ್ಕರಣೆ ಸಮಿತಿಯ ಶಿಫಾರಸಿನಂತೆ ಸಂಬಳ ಹೆಚ್ಚಿಸದಿರುವುದನ್ನು ಪ್ರತಿಭಟಿಸಿ ಈ ಒಂದು ದಿನದ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸಂಸ್ಥೆಯು ನಷ್ಟದಲ್ಲಿ ನಡೆಯಲು ಸಿಬ್ಬಂದಿ ಹೊಣೆಯಲ್ಲ. ಸರ್ಕಾರದ ಬಿಎಸ್ಎನ್ಎಲ್ ವಿರೋಧಿ ನೀತಿಯಿಂದಾಗಿ ನಷ್ಟ ಉಂಟಾಗಿದೆ. ಮೊಬೈಲ್ ಸಂಪರ್ಕ ಜಾಲ ವಿಸ್ತರಿಸಲು ಅಗತ್ಯವಾದ ಸಾಧನ – ಸಲಕರಣೆಗಳ ಖರೀದಿಗೆ 2006 ರಿಂದ 2012ರವರೆಗೆ ಸರ್ಕಾರ ಅವಕಾಶವನ್ನೇ ನೀಡಿರಲಿಲ್ಲ ಎಂದು ಸಂಸ್ಥೆಯ ಉದ್ಯೋಗಿಗಳ ಸಂಘದ ಸಂಚಾಲಕ ಪಿ. ಅಭಿಮನ್ಯು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೇತನ ಪರಾಮರ್ಶೆ ಸಮಿತಿಯ ಶಿಫಾರಸಿನ ಅನ್ವಯ, ಕಳೆದ 3 ಹಣಕಾಸು ವರ್ಷಗಳಿಂದ ಲಾಭ ಮಾಡಿರುವ ಕೇಂದ್ರೋದ್ಯಮಗಳಲ್ಲಿ ಮಾತ್ರ ಸಿಬ್ಬಂದಿ ವೇತನ ಪರಿಷ್ಕರಣೆಗೆ ಅವಕಾಶ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.