ನವದೆಹಲಿ (ಪಿಟಿಐ): ಮುಂಗಾರಿನ ಪ್ರಗತಿ ಮತ್ತು 4ನೇ ತ್ರೈಮಾಸಿಕದಲ್ಲಿ ಕೊನೆಯ ಹಂತದ ಫಲಿತಾಂಶ ಪ್ರಕಟಣೆಯು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ ಎಂದು ಪರಿಣತರು ಹೇಳಿದ್ದಾರೆ.
ಕಳೆದ ಎರಡೂ ವರ್ಷಗಳಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಈ ಬಾರಿ ಮುಂಗಾರು ಮಳೆ ಉತ್ತಮ ಆರಂಭ ಕಂಡುಕೊಳ್ಳುವ ಅಗತ್ಯವಿದೆ. ಹೀಗಾದಲ್ಲಿ ಮಾತ್ರವೇ ಸಕಾಲಕ್ಕೆ ಕೃಷಿ ಚಟುವಟಿಕೆ ಆರಂಭವಾಗಲು ಸಾಧ್ಯ. ಅಗತ್ಯ ವಸ್ತುಗಳ ಉತ್ಪಾದನೆಯ ಗುರಿ ತಲುಪಬಹುದು. ಇದು ಆಹಾರ ಕೊರತೆ ತಗ್ಗಿಸಲಿದ್ದು, ದೇಶದ ಒಟ್ಟು ಆರ್ಥಿಕ ಪ್ರಗತಿಗೂ ನೆರವಾಗಲಿದೆ.
ತ್ರೈಮಾಸಿಕ ಸಾಧನೆ: 2015–16ನೇ ಆರ್ಥಿಕ ವರ್ಷದ 4ನೇ ತ್ರೈಮಾಸಿಕದ ಕೊನೆಯ ಹಂತದಲ್ಲಿ ಟಾಟಾ ಮೋಟಾರ್ಸ್, ಎನ್ಟಿಪಿಸಿ ಸೇರಿದಂತೆ ಪ್ರಮುಖ ಕಂಪೆನಿಗಳ ಆರ್ಥಿಕ ಸಾಧನೆ ಈ ವಾರ ಹೊರಬೀಳಲಿದೆ. ಫಲಿತಾಂಶ ಆಧರಿಸಿ ಕಂಪೆನಿಗಳ ಷೇರು ಮೌಲ್ಯದಲ್ಲಿ ವ್ಯತ್ಯಾಸವಾಗಲಿದ್ದು, ಸೂಚ್ಯಂಕದಲ್ಲಿ ಏರಿಳಿತವಾಗಲಿದೆ.
ವಾಹನ ಉದ್ಯಮಕ್ಕೆ ಸಂಬಂಧಿಸಿದ ಮೇ ತಿಂಗಳ ಮಾರಾಟ ಪ್ರಗತಿಯು ಇದೇ ವಾರ ಹೊರಬೀಳಲಿದೆ. ಇದನ್ನು ಆಧರಿಸಿ ವಾಹನ ತಯಾರಿಕಾ ಕಂಪೆನಿಗಳ ಷೇರು ಮೌಲ್ಯ ಮತ್ತು ಹೂಡಿಕೆ ಪ್ರಮಾಣ ನಿರ್ಧಾರವಾಗಲಿದೆ.
ಶನಿವಾರ ಕೋಲ್ ಇಂಡಿಯಾ ಮತ್ತು ಹಿಂಡಾಲ್ಕೊ ಕಂಪೆನಿಗಳ 4ನೇ ತ್ರೈಮಾಸಿಕ ಸಾಧನೆ ಪ್ರಕಟವಾಗಿದೆ. ಹೀಗಾಗಿ, ಸೋಮವಾರ ಈ ಕಂಪೆನಿಗಳ ಷೇರುಗಳ ಮೌಲ್ಯದಲ್ಲಿ ಏರಿಳಿತ ನಿರೀಕ್ಷಿಸಬಹುದಾಗಿದೆ.
ಸೇವಾ ವಲಯ ಮತ್ತು ತಯಾರಿಕಾ ವಲಯದ ಪ್ರಗತಿಯೂ ಇದೇ ವಾರ ಹೊರಬೀಳುವ ನಿರೀಕ್ಷೆ ಇದೆ. ಇದು ವಹಿವಾಟಿನ ಮೇಲೆ ಪ್ರಭಾವ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.
ಕಳೆದವಾರ ಬಿಎಸ್ಇ ಸೂಚ್ಯಂಕ 1,352 ಅಂಶಗಳಷ್ಟು, ಎನ್ಎಸ್ಇ ನಿಫ್ಟಿ 407 ಅಂಶಗಳಷ್ಟು ಏರಿಕೆ ಕಂಡಿವೆ. ಎರಡೂ ಸೂಚ್ಯಂಕಗಳು ಮಾರ್ಚ್ 4ರ ನಂತರ ಕಂಡುಕೊಂಡ ವಾರದ ಗರಿಷ್ಠ ಏರಿಕೆ ಇದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.