ನವದೆಹಲಿ (ಪಿಟಿಐ): ಸಬ್ಸಿಡಿ ಹೊರೆ ತಗ್ಗಿಸಲು ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ ಇದರ ಮೊದಲ ಹಂತವಾಗಿ ಶ್ರೀಮಂತರಿಗೆ ನೀಡುತ್ತಿರುವ ಅಡುಗೆ ಅನಿಲದ (ಎಲ್ಪಿಜಿ) ಸಬ್ಸಿಡಿ ಕಡಿತ ಮಾಡುವ ಕುರಿತು ಚಿಂತಿಸುತ್ತಿದೆ.
ಇಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಬ್ಸಿಡಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಎಲ್ಪಿಜಿ ಸಬ್ಸಿಡಿ ಫಲಾನುಭವಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುವುದು ಎಂದರು.
ಕೆಲವರಿಗೆ ಅನಗತ್ಯವಾಗಿ ಸಬ್ಸಿಡಿ ಲಾಭ ಲಭಿಸುತ್ತಿದೆ. ಇದನ್ನು ತಡೆಯಲು ಪ್ರಯತ್ನಿಸಲಾಗುವುದು ಆದರೆ, ದೇಶದ ಜನಸಂಖ್ಯೆಯ ದೊಡ್ಡ ಪಾಲು ಬಡವರಿದ್ದಾರೆ. ಅವರಿಗೆ ಖಂಡಿತವಾಗಿಯೂ ಸಬ್ಸಿಡಿ ನೆರವಿನ ಅಗತ್ಯವಿದೆ. ಈ ವರ್ಗದವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಬ್ಸಿಡಿ ಹೊರೆಯಿಂದಾಗಿ ದೇಶದ ಆರ್ಥಿಕ ಆರೋಗ್ಯ ಹದಗೆಡುತ್ತಿದೆ. ಇನ್ನೊಂದೆಡೆ ವಿತ್ತೀಯ ಕೊರತೆ ಕೂಡ ಹೆಚ್ಚುತ್ತಿದೆ. ಸಬ್ಸಿಡಿ ಅಗತ್ಯವಿಲ್ಲದ ಶ್ರೀಮಂತರಿಗೂ ಕೂಡ ಕೋಟ್ಯಂತರ ರೂಪಾಯಿ ಸಬ್ಸಿಡಿ ರೂಪದಲ್ಲಿ ಹೋಗುತ್ತಿದೆ. ಇದನ್ನು ತಡೆಹಿಡಿಯಬೇಕು, ಇಲ್ಲದಿದ್ದರೆ ಇದು ಆರ್ಥಿಕ ಪ್ರಗತಿಗೆ ಮಾರಕ ಎಂದರು.
ಬಡ್ಡಿ ದರ ಕಡಿತ ವಿಶ್ವಾಸ
ಹಣದುಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ 2ರಂದು ಪ್ರಕಟಿಸಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರವಾದ ‘ರೆಪೊ’ ದರ ತಗ್ಗಿಸಬಹುದು ಎಂದು ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.