ಮುಂಬೈ: ಮಾರ್ಚ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಂಡಿರುವುದು ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದಾಗಿ ದೇಶದ ಷೇರುಪೇಟೆಗಳು ಇಳಿಮುಖವಾಗಿ ವಾರದ ವಹಿವಾಟು ಅಂತ್ಯಗೊಳಿಸಿವೆ.
ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಹೂಡಿಕೆದಾರರು ನಿರೀಕ್ಷೆ ಮಾಡಿದ್ದರು. ಆದರೆ, ಯಾವು ಪಕ್ಷಕ್ಕೂ ಸ್ಪಷ್ಟ ಬಹುಮತ ಬರದೇ ಇದ್ದಿದ್ದರಿಂದ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಇನ್ನು, ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿರುವುದು, ಚಿಲ್ಲರೆ ಮತ್ತು ಸಗಟು ಹಣದುಬ್ಬರ ಏರಿಕೆಯಾಗಿರುವುದು ಸಹ ಹೂಡಿಕೆ ಚಟುವಟಿಕೆಯನ್ನು ತಗ್ಗಿಸುವಂತೆ ಮಾಡಿವೆ ಎಂದು ಹೇಳಿದ್ದಾರೆ. ಜಾಗತಿಕ ಅಂಶಗಳೂ ದೇಶದ ಷೇರುಪೇಟೆ ಪಾಲಿಗೆ ಸಕಾರಾತ್ಮಕವಾಗಿಲ್ಲ.
ಕಚ್ಚಾ ತೈಲ ಬೆಲೆ ಏರಿಕೆ, ವ್ಯಾಪಾರ ಸುಂಕಕ್ಕೆ ಸಂಬಂಧಿಸಿದಂತೆ ಅಮೆರಿಕ–ಚೀನಾ ಮಧ್ಯೆ ಮೂಡಿರುವ ಬಿಕ್ಕಟ್ಟು ಹೂಡಿಕೆದಾರರನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿವೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 35,556 ಅಂಶಗಳ ವಾರದ ವಹಿವಾಟು ಆರಂಭಿಸಿತು. ನಂತರ 35,993 ಅಂಶಗಳ ಗರಿಷ್ಠ ಮತ್ತು 34,822 ಅಂಶಗಳ ಕನಿಷ್ಠ ಮಟ್ಟವನ್ನು ತಲುಪಿತ್ತು. ಒಟ್ಟಾರೆ 687 ಅಂಶಗಳಷ್ಟು ಕುಸಿತ ಕಂಡು, 34,848 ಅಂಶಗಳಲ್ಲಿ ವಾರದ ವಹಿವಾಟು ಮುಕ್ತಾಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ ವಾರದ ವಹಿವಾಟಿನಲ್ಲಿ 210 ಅಂಶ ಇಳಿಕೆಯಾಗಿ 10,596 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಮೂರನೇ ವಾರವೂ ಮಾರಾಟದ ಒತ್ತಡ ಮುಂದುವರಿಯಿತು. ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಇಳಿಕೆ ಕಂಡವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.