ADVERTISEMENT

‘ಪ್ರವಾಸಿ ಮಿತ್ರ’ಯೋಜನೆ ಆರಂಭ

ವಿದೇಶಿ ಪ್ರವಾಸಿಗರ ಸುರಕ್ಷತೆಗೆ ರಾಜ್ಯ ಸರ್ಕಾರದ ವಾಗ್ದಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST
‘ಪ್ರವಾಸಿ ಮಿತ್ರ’ರಾಗಿ ನೇಮಕಗೊಂಡಿರುವ ಗೃಹರಕ್ಷಕ ಸಿಬ್ಬಂದಿಗೆ ಆರ್‌.ವಿ. ದೇಶಪಾಂಡೆ ಅವರು  ಪ್ರಮಾಣ ಪತ್ರ ವಿತರಿಸಿದರು. ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಖರೋಲಾ, ಕಾರಾಗೃಹಗಳ ಇಲಾಖೆ ಎಡಿಜಿಪಿ ಕಮಲ್‌ ಪಂತ್‌, ನಗರ ಪೊಲೀಸ್‌ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಎ. ಹುಸೇನ್‌, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಕೆ. ಪಟ್ಟನಾಯಕ್‌, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅಸಗೋಡು ಜಯಸಿಂಹ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪಾಲಿಕೆ ಸದಸ್ಯ ಎಸ್‌. ಸಂಪತ್‌ ಕುಮಾರ್‌ ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಜಿ. ಸತ್ಯವತಿ ಚಿತ್ರದಲ್ಲಿದ್ದಾರೆ  ಪ್ರಜಾವಾಣಿ ಚಿತ್ರ
‘ಪ್ರವಾಸಿ ಮಿತ್ರ’ರಾಗಿ ನೇಮಕಗೊಂಡಿರುವ ಗೃಹರಕ್ಷಕ ಸಿಬ್ಬಂದಿಗೆ ಆರ್‌.ವಿ. ದೇಶಪಾಂಡೆ ಅವರು ಪ್ರಮಾಣ ಪತ್ರ ವಿತರಿಸಿದರು. ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಖರೋಲಾ, ಕಾರಾಗೃಹಗಳ ಇಲಾಖೆ ಎಡಿಜಿಪಿ ಕಮಲ್‌ ಪಂತ್‌, ನಗರ ಪೊಲೀಸ್‌ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಎ. ಹುಸೇನ್‌, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಕೆ. ಪಟ್ಟನಾಯಕ್‌, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅಸಗೋಡು ಜಯಸಿಂಹ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪಾಲಿಕೆ ಸದಸ್ಯ ಎಸ್‌. ಸಂಪತ್‌ ಕುಮಾರ್‌ ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಜಿ. ಸತ್ಯವತಿ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವ ದೇಶಿ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗ ರಿಗೆ ಸುರಕ್ಷತೆ ಖಾತ್ರಿ ಪಡಿಸಲು ‘ಪ್ರವಾಸಿ ಮಿತ್ರ’ ಯೋಜನೆ ಆರಂಭಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ ಹಾಗೂ ಗೃಹ ಇಲಾಖೆಯ ಸಹಭಾಗಿತ್ವದಲ್ಲಿ ಮಂಗಳವಾರ ನಗರದಲ್ಲಿ ಆಯೋಜಿ ಸಿದ್ದ ‘ಪ್ರವಾಸಿ ಮಿತ್ರ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

‘ಮೊದಲ ಹಂತದಲ್ಲಿ 174 ಜನ ಗೃಹ ರಕ್ಷಕ ಸಿಬ್ಬಂದಿಗೆ ತರಬೇತಿ ನೀಡಿ ‘ಪ್ರವಾಸಿ ಮಿತ್ರ’ರಾಗಿ ನೇಮಕ ಮಾಡಿ ಕೊಳ್ಳಲಾಗಿದೆ. ಇವರನ್ನು ಮೈಸೂರು ಅರಮನೆ, ಹಂಪಿ, ಬೀದರ್‌ ಕೋಟೆ, ಚಿತ್ರದುರ್ಗ ಕೋಟೆ ಸೇರಿದಂತೆ ರಾಜ್ಯದ 13 ಪ್ರವಾಸಿ ತಾಣಗಳಲ್ಲಿ ನಿಯೋಜಿಸ ಲಾಗುವುದು’ ಎಂದರು.

‘ನೇಮಕಗೊಂಡಿರುವ ಈ ಸಿಬ್ಬಂದಿಗೆ ಕೆಲವು ವಿಶೇಷ ಪೊಲೀಸ್‌ ಅಧಿಕಾರ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ರಾಜ್ಯ ಗೃಹ ಇಲಾಖೆಯ ಜತೆ ಸಮಾಲೋಚನೆ ಮುಂದುವರೆದಿದೆ. ಎರಡನೇ ಹಂತದಲ್ಲಿ ಮಹಿಳೆ ಯರು ಸೇರಿದಂತೆ 250 ಜನರನ್ನು ಒಳಗೊಂಡ ತಂಡಕ್ಕೆ ತರಬೇತಿ ನೀಡಲಾಗುವುದು. ಮುಂದಿನ ತಿಂಗಳು ತರಬೇತಿ ಕಾರ್ಯಕ್ರಮ ಆರಂಭ ವಾಗಲಿದೆ’ ಎಂದರು.

ಗೈಡ್‌ಗಳಿಗೆ ತರಬೇತಿ: ‘ಪ್ರವಾಸಿ ಸ್ಥಳಗಳಲ್ಲಿ ಗೈಡ್‌ಗಳು ಇದ್ದಾರೆ. ಆದರೆ ಅವರಿಗೆ ಸ್ಥಳೀಯ ಭಾಷೆ ಬಿಟ್ಟರೆ ಮತ್ತೊಂದು ಭಾಷೆಯಲ್ಲಿ ಮಾತನಾ ಡಲು ಬರುವುದಿಲ್ಲ. ಹಾಗಾಗಿ ಅವರಿಗೂ ತರಬೇತಿ ನೀಡಲಾಗುತ್ತಿದೆ’ ಎಂದರು. ‘ಮೈಸೂರು, ಬೆಂಗಳೂರು ಸೇರಿದಂತೆ ಐದು ವಿಶ್ವವಿದ್ಯಾಲಯಗಳಲ್ಲಿ ಗೈಡ್‌ಗಳಿಗೆ ರಷ್ಯನ್‌, ಫ್ರೆಂಚ್‌, ಚೈನೀಸ್‌, ಇಂಗ್ಲಿಷ್‌ ಸೇರಿದಂತೆ ಇತರ ಭಾಷೆ ಕಲಿಸಲಾಗುತ್ತಿದೆ.

ಜೊತೆಗೇ ಕನ್ನಡವನ್ನು ಇನ್ನಷ್ಟು ಸುಧಾರಣೆ ಮಾಡಲಾಗುತ್ತಿದೆ. ಈಗಾಗಲೇ ಒಂದು ತಂಡ ತರಬೇತಿ ಪೂರ್ಣಗೊಳಿಸಿದೆ’ ಎಂದರು. ‘ಗೈಡ್‌ಗಳಿಗೆ ಅಲ್ಪಸ್ವಲ್ಪ ಮಾಹಿತಿ ಇದ್ದರೆ ಸಾಲದು. ಆ ಸ್ಥಳದ ಇತಿಹಾಸ, ಕಲೆ ಎಲ್ಲವೂ ಗೊತ್ತಿರಬೇಕು. ಹಾಗಾಗಿ ಅವರಿಗೆ ಎಲ್ಲ ರೀತಿಯ ಅಗತ್ಯ ತರಬೇತಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಸಂಪರ್ಕ–ಸ್ವಚ್ಛತೆ: ‘ರಾಜ್ಯದಲ್ಲಿ 319 ಪ್ರಮುಖ ಪ್ರವಾಸಿ ಸ್ಥಳಗಳಿವೆ. ಅಗತ್ಯ ಇರುವ ಕಡೆ ರಸ್ತೆ ಸಂಪರ್ಕ ಕಲ್ಪಿಸಲು ಪ್ರಯತ್ನ ಮಾಡಲಾಗುತ್ತಿದೆ’ ಎಂದರು. ‘ಸ್ವಚ್ಛತೆ ಕೂಡ ಅಷ್ಟೇ ಮುಖ್ಯ. ಕೆಲವೊಂದು ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ, ಅವುಗಳ ನಿರ್ವಹಣೆ ಮಾಡಲು ಕೆಲ ಕಾರ್ಪೊರೇಟ್‌ ಸಂಸ್ಥೆಗಳು ಮುಂದೆ ಬಂದಿವೆ. ಇನ್ನಷ್ಟು ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸ ಬೇಕು’ ಎಂದು ಕೋರಿದರು. 

‘ಸಿಂಗಪುರ, ಕಾಂಬೋಡಿಯಾ ದುಬೈ, ಹಾಗೂ ಯುರೋಪ್‌ನ ಕೆಲವು ಸಣ್ಣ ದೇಶಗಳು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿವೆ. ಅವುಗಳ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲು ಪ್ರವಾಸೋದ್ಯಮದಿಂದ ಬರುತ್ತದೆ. ಆದರೆ ನಮ್ಮ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಪ್ರವಾಸೋದ್ಯ ಮದ ಪಾಲು ಶೇ 6ರಷ್ಟಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.