ADVERTISEMENT

28,29ಕ್ಕೆ ತಂತ್ರಜ್ಞಾನ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಇದೇ 28 ಮತ್ತು 29ರಂದು ನಗರದಲ್ಲಿ 12ನೇ ರಾಷ್ಟ್ರೀಯ ಹೊಸ ಔದ್ಯೋಗಿಕ ತಂತ್ರಜ್ಞಾನ ಶೃಂಗಸಭೆಯನ್ನು ಆಯೋಜಿಸಿದೆ.

ಹೋಟೆಲ್‌ ಶೆರ್ಟನ್‌ನಲ್ಲಿ  ನಡೆಯಲಿರುವ ಶೃಂಗಸಭೆಯನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಲಿದ್ದಾರೆ.
‘ಕಳೆದ 11 ವರ್ಷಗಳಿಂದ ನಿರಂತರ  ಔದ್ಯೋಗಿಕ ಪರಿಸರ, ಉದ್ಯಮಶೀಲತೆಯ ಅವಕಾಶ ಮತ್ತು ಸವಾಲು ಕುರಿತು  ಚರ್ಚೆಗೆ ಸಮಾವೇಶದ ಮೂಲಕ ವೇದಿಕೆ ಒದಗಿಸುತ್ತಲಿದೆ’ ಎಂದು  ಶೃಂಗಸಭೆಯ ಅಧ್ಯಕ್ಷ ಕ್ರಿಸ್‌ ಗೋಪಾಲ ಕೃಷ್ಣನ್‌  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೊಸ ತಂತ್ರಜ್ಞಾನ ಮತ್ತು ಉದ್ಯಮಶೀಲತೆ’ ಈ ಬಾರಿಯ ಸಮಾವೇಶದ  ಧ್ಯೇಯವಾಗಿದ್ದು ಯುವ ಜನತೆಯ ಉದ್ಯಮಶೀಲ ಮನೋಭಾವ ಪ್ರತಿನಿಧಿಸುತ್ತದೆ ಎಂದು ತಿಳಿಸಿದರು.

‘ನವೋದ್ಯಮ, ಮಾಹಿತಿ ತಂತ್ರಜ್ಞಾನ , ಜೈವಿಕ ತಂತ್ರಜ್ಞಾನ, ವಾಣಿಜ್ಯ, ಇ–ಕಾಮರ್ಸ್‌, ಹಣಕಾಸು  ಸೇರಿದಂತೆ ವಿವಿಧ ಕ್ಷೇತ್ರಗಳ 500ಕ್ಕೂ ಹೆಚ್ಚು ತಜ್ಞರು, ಉದ್ಯಮಿಗಳು   ಸಮಾವೇಶದಲ್ಲಿ  ಭಾಗವಹಿಸಲಿದ್ದಾರೆ’ ಎಂದು ಕ್ರೇಯಾನ್‌ ಡೇಟಾ ಪ್ಟೆ ಸಹ ಸಂಸ್ಥಾಪಕ ಐ. ವಿಜಯಕುಮಾರ್‌ ತಿಳಿಸಿದರು.
‘ನವನವೀನ ಆಲೋಚನೆ ಮತ್ತು ಹೊಸತನವುಳ್ಳ ನವೋದ್ಯಮ ಮಾದರಿಗಳಿಗೆ ಬಹುಮಾನ ನೀಡಲಾಗುವುದು’ ಎಂದು 3ಎಂ ಇಂಡಿಯಾ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕಿ  ದೇಬರತಿ ಸೇನ್‌ ಹೇಳಿದರು.

‘ಶಿಕ್ಷಣ ಮತ್ತು ಮನರಂಜನೆ ಕ್ಷೇತ್ರದಲ್ಲಿ ಡಿಜಿಟಲ್‌ ಮಾಧ್ಯಮದ ಪಾತ್ರ, ಫ್ಯಾಷನ್‌ ಮತ್ತು ಆಹಾರ,   ವೈದ್ಯಕೀಯ ಸೇವೆ ಕ್ಷೇತ್ರದ ಹೊಸತನಗಳ ಕುರಿತು ಗೋಷ್ಠಿ ನಡೆಯಲಿವೆ’ ಎಂದು ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ರವಿ ರಾಘವನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.