ADVERTISEMENT

ಲಾಭ ಗಳಿಕೆ ಒತ್ತಡದಲ್ಲಿ ವಹಿವಾಟು

ಕೆ.ಜಿ ಕೃಪಾಲ್
Published 3 ಮೇ 2015, 19:30 IST
Last Updated 3 ಮೇ 2015, 19:30 IST

ಷೇರುಪೇಟೆಯ ಸಂವೇದಿ ಸೂಚ್ಯಂಕ ಮಾರ್ಚ್ ಮೊದಲ ವಾರದಲ್ಲಿ 30 ಸಾವಿರ ಅಂಶಗಳ ಗಡಿ ದಾಟಿ ಸಾರ್ವ ಕಾಲೀನ ದಾಖಲೆ ನಿರ್ಮಿಸಿತ್ತು. ಆದರೆ ಏಪ್ರಿಲ್ ಅಂತ್ಯದಲ್ಲಿ 27 ಸಾವಿರ ಅಂಶಗಳ ಗಡಿಗೆ ಬಂದು ನಿಂತಿರು ವುದು ಪೇಟೆಯಲ್ಲಿನ ಕ್ಷಿಪ್ರ ಬದಲಾವಣೆ ಗಳಿಗೆ ಸಾಕ್ಷಿ.

ಇಲ್ಲಿ ಎಲ್ಲಾ ರೀತಿಯ ಚಿಂತನೆಗಳನ್ನು ವಹಿವಾಟುದಾರರ ಅಗತ್ಯಕ್ಕೆ ತಕ್ಕಂತೆ ತಿರುಚಿ ಪೇಟೆಯ ಮಾರ್ಗ ಬದಲಿಸ ಲಾಗುತ್ತದೆ. ಆರ್ಥಿಕ ಬೆಳವಣಿಗೆ, ಸೂಚ್ಯಂಕ ಚಲನೆ, ಕಂಪೆನಿಗಳ ವಿಲೀನ, ಸ್ವಾಧೀನ ಸುದ್ದಿ ಮಾಧ್ಯಮಗಳಲ್ಲಿ ವೈವಿಧ್ಯ ಮಯವಾಗಿ ಬಿಂಬಿತವಾದರೂ ಅದನ್ನು  ಪೇಟೆಯು ತನ್ನ ಚಲನೆಯಲ್ಲಿ ಜೀರ್ಣಿಸಿ ಕೊಂಡಿರುತ್ತದೆ.

ಈ ವಾರದಲ್ಲಿ ಫಾರ್ಮಾ ವಲಯದ ಕಂಪೆನಿಗಳ ಷೇರುಗಳು ಹೆಚ್ಚು ಮಾರಾಟ ಒತ್ತಡಕ್ಕೊಳಗಾದವು. ವೋಕಾರ್ಡ್ ಷೇರು ಬೆಲೆ ₹ 1,650 ರಿಂದ ₹ 1,181ರವರೆಗೂ ಕುಸಿದಿದೆ.  ಕಂಪೆನಿಯ ಚಿಕಲ್ತಾನ ಮತ್ತು ಔರಂಗಾಬಾದ್ ಘಟಕಗಳ ಕೆಲವು ಔಷಧಗಳನ್ನು ಅಮೆರಿಕ ಮಾರುಕಟ್ಟೆ ಮುನ್ನೆಚ್ಚರಿಕೆ ಕ್ರಮವಾಗಿ ಹಿಂದಕ್ಕೆ ಪಡೆದಿದೆ ಎಂಬುದೇ ಈ ಕುಸಿತಕ್ಕೆ ಕಾರಣ.

ಆದರೆ ಷೇರು ಬೆಲೆ ₹ 340 ರಿಂದ  ₹ 2 ಸಾವಿರದವರೆಗೂ ಏರಿಳಿತ ಕಂಡಿರುವುದು ಭಾರಿ ಲಾಭದ ನಗದೀಕರಣಕ್ಕೆ ಕಾರಣವಾಗಿರ ಬಹುದು. ಸ್ಟ್ರೈಡ್ಸ್ ಆರ್ಕೋಲ್ಯಾಬ್ ಷೇರು ಬೆಲೆ ಇದೇ ವಲಯದ ಷೇರುಗಳ ಮಾರಾ ಟದ ಸುಳಿಯಲ್ಲಿ ಸಿಲುಕಿ ₹ 1,100ರ ಸಮೀಪದಿಂದ ವಿನಾಕಾರಣ ₹ 907 ರವರೆಗೂ ಕುಸಿದಿದೆ. ಇದು ಸಹ ಲಾಭದ ನಗದೀಕರಣ ಒತ್ತಡದ ಪರಿಣಾಮವಾಗಿರಬಹುದು.

ವ್ಯಾಲ್ಯೂ ಪಿಕ್‌: ಇಂಥ ಕುಸಿತ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಯೊಂದು 3.15  ಲಕ್ಷ ಷೇರುಗಳನ್ನು ಕೊಳ್ಳುವಂತೆ ಮಾಡಿದೆ. ಇದನ್ನೇ ವ್ಯಾಲ್ಯೂ ಪಿಕ್ ಎನ್ನಲಾಗುತ್ತದೆ.

ನೀರ ಮೇಲಿನ ಗುಳ್ಳೆ: ಅವಕಾಶಗಳು ನೀರ ಮೇಲಿನ ಗುಳ್ಳೆಗಳಂತೆ ಪ್ರತ್ಯಕ್ಷವಾಗಿ ಮಾಯವಾಗುವಂತಹ ಬೆಳವಣಿಗೆ ಯನ್ನು ಎಲೆಕ್ಟ್ರಿಕಲ್ ಕಂಪೆನಿ ಸಿಂಫೋನಿಯ ಷೇರಿನ ಏರಿಳಿತಗಳಲ್ಲಿ ಕಾಣಬಹುದು.

ಪ್ರಾಫಿಟ್ ಬುಕಿಂಗ್‌: ಈ ಕಂಪೆನಿ ಏ. 21 ರಂದು ಪ್ರಕಟಿಸಿದ ಫಲಿತಾಂಶ ಷೇರು ಬೆಲೆಯನ್ನು ಗರಿಷ್ಠ ₹ 3,170ಕ್ಕೆ ಜಿಗಿಯುವಂತೆ ಮಾಡಿತು. ನಂತರ ಮಾರಾಟ ಒತ್ತಡದಿಂದ ₹ 1,956ಕ್ಕೆ ಕುಸಿಯಿತು. 10 ದಿನಗಳಲ್ಲಿ ₹ 1,300 ಕ್ಕೂ ಹೆಚ್ಚಿನ ಇಳಿಕೆ ವಿಸ್ಮಯಕಾರಿ ಅಲ್ಲವೇ? ಇದೇ ಪ್ರಾಫಿಟ್ ಬುಕ್‌ ಚಮತ್ಕಾರ.

ವ್ಯಾಲ್ಯೂ ಪಿಕ್-ಪ್ರಾಫಿಟ್ ಬುಕ್ ಪ್ರಕ್ರಿಯೆ ಇಂದಿನ ಪೇಟೆಗಳಲ್ಲಿ ನಿರಂತರ ಚಟುವಟಿಕೆ. ಹಾಗಾಗಿ, ಹೆಚ್ಚಿನ ಎಚ್ಚರಿಕೆ, ಸೂಕ್ತ ನಿರ್ಧಾರ ಮಾತ್ರವೇ ಹೂಡಿಕೆಯನ್ನು ಸುರಕ್ಷಿತವಾಗಿ ಬೆಳೆಯಲು ನೆರವಾಗುತ್ತವೆ. ಒಟ್ಟಾರೆ ಸಂವೇದಿ ಸೂಚ್ಯಂಕ 427 ಅಂಶಗಳ ಕುಸಿತ ಕಂಡಿದೆ. ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ ಷೇರುಗಳ ಚೇತರಿಕೆ ಮತ್ತಷ್ಟು ಕುಸಿತವಾಗುವುದನ್ನು ತಡೆದಿದೆ. 

ಈ ಕುಸಿತಕ್ಕೆ  ಜತೆಯಾಗಿ ಮಧ್ಯಮ ಶ್ರೇಣಿ ಸೂಚ್ಯಂಕ19 ಅಂಶ, ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 64 ಅಂಶಗಳ ಕುಸಿತ ಕಂಡಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ₹ 7,158 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿ ದ್ದಾರೆ. ಸ್ಥಳೀಯ

ವಿತ್ತೀಯ ಸಂಸ್ಥೆಗಳು ₹ 6,577 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ₹ 99.70 ಲಕ್ಷ ಕೋಟಿಗೆ ಇಳಿದಿದೆ.

ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಸರ್ವೋತ್ತಮ್ ಫಿನ್ ವೆಸ್ಟ್ ಷೇರು ಹಾಗೂ ಬೆಂಗಳೂರು ಮತ್ತು ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿ ಕೊಂಡಿದ್ದ ಬೆಂಗಳೂರು ಫೋರ್ಟ್ ಫಾರ್ಮ್ಸ್ ಷೇರು ಹಾಗೂ ಅಹಮದಾ ಬಾದ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿ ರುವ ಪಾಲ್ಕೋ ಮೆಟಲ್ಸ್ ಷೇರು ಮೇ 4 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಡಿಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

ಕೋಲ್ಕತ್ತ ಮತ್ತು ಉತ್ತರ ಪ್ರದೇಶ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಣಿಯಾಗಿರುವ ವಿ ಬಿ ಇಂಡ ಸ್ಟ್ರೀಸ್ ಷೇರು ಹಾಗೂ ದೆಹಲಿ ಮತ್ತು ಜಯಪುರ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿ ರುವ ಹಿಂದ್ ಸೆಕ್ಯುರಿಟೀಸ್ ಅಂಡ್ ಕ್ರೆಡಿಟ್ಸ್ ಷೇರು ಬಿಎಸ್‌ಇನ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಹರಿಚರಣ್ ಪ್ರಾಜೆಕ್ಟ್ಸ್ ಲಿಮಿಟೆಡ್  ಹಾಗೂ ಮದ್ರಾಸ್  ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಬೋದ್ ಟ್ರೀ ಕನ್ಸಲ್ಟಿಂಗ್  ಲಿಮಿಟೆಡ್ ಷೇರು ಮೇ 4 ರಿಂದ ಮುಂಬೈ ಬಿಎಸ್‌ಇಯ ಡಿಟಿ ವಿಭಾಗದಲ್ಲಿ ಬಿಡುಗಡೆಯಾಗಲಿದೆ.

ಪ್ರತಿ ಷೇರಿಗೆ ₹ 205ರಂತೆ ವಿಆರ್ಎಲ್ ಲಾಜಿಸ್ಟಿಕ್ಸ್ ಲಿ.ನ (ಐಪಿಒ) 9.12 ಕೋಟಿ ಷೇರುಗಳು ಏ. 30ರಿಂದ ಬಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆ ಯಾಗಿವೆ. ಆರಂಭದ ದಿನ ₹ 281 ರಿಂದ ₹ 309ರವರೆಗೂ ಏರಿಳಿತ ಪ್ರದರ್ಶಿಸಿ ₹ 293ರಲ್ಲಿ ಅಂತ್ಯಕಂಡು ಹೂಡಿಕೆದಾರ ರಲ್ಲಿ ಹರ್ಷ ಮೂಡಿಸಿವೆ.

ಬೋನಸ್ ಷೇರು: ಆಡಳಿತ ಮಂಡಳಿಯ ಸಭೆಗೆ ಕೋರಂ ಇಲ್ಲದೆ ಒಂದು ವಾರ ಬೋನಸ್ ಷೇರು ವಿತರಣೆ ಮುಂದೂಡಿದ್ದ ಸಿ. ಮಹೇಂದ್ರ ಎಕ್ಸ್‌ಪೋರ್ಟ್ಸ್ ಲಿ., ಕಂಪೆನಿ ಈ ವಾರ 1:1ರ ಅನುಪಾತದ ಬೋನಸ್ ಪ್ರಕಟಿಸಿದೆ. ನಂತರದ ದಿನ ₹ 10 ಮುಖಬೆಲೆಯ  ಷೇರಿನ ಬೆಲೆಯು ₹ 11 ದಾಟಿತು.  ಆದರೆ ಮೇ 4 ರ ಸಭೆಯಲ್ಲಿ ಪ್ರಿಫರೆನ್ಸ್ ಷೇರುಗಳನ್ನು ಈಕ್ವಿಟಿ ಷೇರುಗಳಾಗಿ ಪರಿವರ್ತಿಸುವ ಕಾರ್ಯ ಸೂಚಿ ಇರುವ ಕಾರಣ ಷೇರಿನ ಬೆಲೆ ₹ 9ರ ಸಮೀಪಕ್ಕೆ ಕುಸಿದಿದೆ.

ವಾರದ ವಿಶೇಷ
ಷೇರುಪೇಟೆಯ ದಿಗ್ಗಜ ಕಂಪೆನಿ ಗಳಾದ ಭಾರ್ತಿ ಏರ್‌ಟೆಲ್‌್, ಐ.ಸಿ.ಐ.ಸಿ.ಐ. ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬಯೋ ಕಾನ್, ಮಾರುತಿ ಸುಜುಕಿ, ಎಚ್‌ಡಿಎಫ್‌ಸಿ, ರೇಮಂಡ್ 4ನೇ ತ್ರೈಮಾಸಿಕ ಫಲಿತಾಂಶದಲ್ಲಿ ಆಕರ್ಷಕ ಲಾಭಾಂಶ ಪ್ರಕಟಿಸಿವೆ.

ಐ.ಸಿ.ಐ.ಸಿ.ಐ. ಬ್ಯಾಂಕ್ ಫಲಿತಾಂಶ ಹೊರಬಿದ್ದಾಗ ಮಾಧ್ಯಮಗಳಲ್ಲಿ ಎನ್‌ಪಿಎ  ಹೆಚ್ಚಾಗಿದೆ ಎಂಬುದು ಎದ್ದು ಕಂಡಿದ್ದರಿಂದ ಷೇರಿನ ಬೆಲೆ ₹ 310 ರಿಂದ ₹ 297 ರವರೆಗೂ ಇಳಿಯಿತು. ನಂತರದ ದಿನದಲ್ಲಿ ರೇಟಿಂಗ್‌ ಸಂಸ್ಥೆ ಯೊಂದು ಬ್ಯಾಂಕ್‌ ಶ್ರೇಣಿಯನ್ನು ಉನ್ನತ ದರ್ಜೆಗೇರಿಸಿದ ತಕ್ಷಣ ಷೇರು ಬೆಲೆ ₹ 334ರವರೆಗೂ ಚಿಮ್ಮಿದೆ.

ಆಕ್ಸಿಸ್ ಬ್ಯಾಂಕ್ ಸಾಧನೆಯ ಅಂಕಿ ಅಂಶಗಳು ಉತ್ತಮವಾಗಿ ಕಂಡರೂ ಎನ್ ಪಿ ಎ ಪ್ರಮಾಣದಲ್ಲಿ ಪ್ರಗತಿಯಿಲ್ಲದಿದ್ದರೂ ಷೇರಿನ ಬೆಲೆಯು ಗಗನಕ್ಕೆ ಚಿಮ್ಮಿತು. ಸಹಜವಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ಸಾಧನೆಯಲ್ಲಿ ಎನ್ ಪಿ ಎ ಪ್ರಮಾಣವನ್ನು ಮೊಟಕುಗೊಳಿಸಿ ಉತ್ತಮ ಕಾರ್ಯದ ಪ್ರಕಟಣೆಯ ನಂತರ ಷೇರಿನ ಬೆಲೆಯು ₹ 110 ರ ಸಮೀಪಕ್ಕೆ ಜಿಗಿದು ನಂತರ ₹ 103 ಕ್ಕೆ ಹಿಂದಿರುಗಿತು.

ಮಾರುತಿ ಸುಜುಕಿ ಫಲಿತಾಂಶ ಪ್ರಕಟಣೆಯ ನಂತರ ₹ 3,580 ರಿಂದ ₹ 3,870  ರವರೆಗೂ ಜಿಗಿದು ನಂತರ ಇಳಿಕೆ ಕಂಡಿತು.
ಇಷ್ಟೆಲ್ಲ ಬೆಳವಣಿಗೆ ಪರಿಶೀಲಿಸಿದಾಗ ಪೇಟೆಯಲ್ಲಿ, ಉತ್ತಮ ಕಂಪೆನಿಗಳು ಕೆಲವು ಬಾರಿ  ಮಧ್ಯಂತರದಲ್ಲಿ ಒದಗಿಸಬಹುದಾದ ಅವಕಾಶಗಳನ್ನು ಲಾಭದ ನಗದೀಕರಣಕ್ಕಾಗಲಿ ಅಥವಾ ಕುಸಿತ ಕಂಡಾಗ ಹೂಡಿಕೆಗಾಗಿಯಾಗಲಿ ಆಯ್ಕೆ ಮಾಡಿಕೊಂಡರೆ ಲಾಭದಾಯಕ ಹೂಡಿಕೆಗುಚ್ಚ ನಿರ್ಮಿಸಲು ಸಾಧ್ಯ ಎನ್ನಬಹುದು.

ಕೊಳ್ಳುವಾಗ ಮಾತ್ರ ಉತ್ತಮ, ಅಗ್ರಮಾನ್ಯ ಕಂಪೆನಿ ಎಂಬ ಅಭಿಮಾನ ಇರಲಿ. ನಂತರ ಅವಕಾಶ ಒದಗಿಬಂದು ಆಕರ್ಷಕ ಆದಾಯ ಗಳಿಸಿಕೊಟ್ಟಲ್ಲಿ ಅದು ಕ್ಷಣಿಕ ಮಾತ್ರವಾಗಿರುವುದರಿಂದ ಷೇರು ಮಾರಾಟ ಮಾಡಿ ನಗದೀಕರಿಸಿ ಕೊಳ್ಳುವುದು ಕ್ಷೇಮ. ಮುಂದಿನ ದಿನಗಳಲ್ಲಿ ಅದೇ ಷೇರು ಕಡಿಮೆ ದರದಲ್ಲಿ ದೊರೆಯುವ ಸಾಧ್ಯತೆ ಇರುತ್ತದೆ. ಕಾರಣ ಇಲ್ಲಿ ಎಲ್ಲವನ್ನೂ ವ್ಯವಹಾರಿಕ ದೃಷ್ಟಿಯಿಂದ ನೋಡಲಾಗುತ್ತದೆ ಎಂಬುದು ನೆನಪಿರಲಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.