ಯಳಂದೂರು: ತಾಲ್ಲೂಕಿನ ಹವಾಮಾನದಲ್ಲಿ ಉಂಟಾದ ಬದಲಾವಣೆ ಹಾಗೂ ನಿರೀಕ್ಷಿಸದಷ್ಟು ಸುರಿಯದ ಮುಂಗಾರು ಉತ್ತಮ ಫಲ ಕಚ್ಚಿದ ಕಾಳು ಮೆಣಸಿನ ಫಲವತ್ತತೆಗೆ ಎರವಾಗಿದೆ. ಇದರಿಂದ ಹೆಚ್ಚಾದ ಉಷ್ಣಾಂಶದಿಂದ ಮೆಣಸು ಬಳ್ಳಿಯ ಎರೆ (ಹೂವು) ಉದುರುವಂತೆ ಆಗಿದೆ.
ಕಾಳುಮೆಣಸು ಬಹುವಾರ್ಷಿಕ ಬಳ್ಳಿ. ಸಾಂಬಾರು ಮತ್ತು ಔಷಧೀಯ ಕ್ಷೇತ್ರಗಳಲ್ಲೂ ಬಳಕೆಯಲ್ಲಿ ಇದೆ. ಬಿಳಿಗಿರಿರಂಗನಬೆಟ್ಟದ ಬೆಟ್ಟ ಸಾಲಿನ ಘಟ್ಟ ಪ್ರದೇಶಗಳ ಕಡಿಮೆ ಉಷ್ಣತೆ ಬಯಸುವ ಮೆಣಸನ್ನು ಬೆಳೆಸಲಾಗಿದೆ. ಸಾಕಷ್ಟು ಮಳೆ ಮತ್ತು ತಂಪು ಹವಾಮಾನದಲ್ಲಿ ಉತ್ತಮ ಫಸಲು ನೀಡುತ್ತದೆ. ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿ ಹೆಚ್ಚಿನ ಮಳೆ ಆಗಿಲ್ಲ ಎನ್ನುತ್ತಾರೆ ಸಾಂಬಾರ ಬೆಳೆಗಾರರು.
ಸಣ್ಣ ಹಿಡುವಳಿಯಲ್ಲಿ ಕಾಫಿ ಜತೆ ಇದರ ಕೃಷಿ ಮಾಡುವುದು ವಾಡಿಕೆ. ಎಲ್ಲಾ ಬಳ್ಳಿಗಳಲ್ಲೂ ಎರೆ ಚಂದ ಬಂದಿದೆ. ಆದರೆ, ನಿರೀಕ್ಷಿತ ಮಳೆ ಬಿದ್ದಿಲ್ಲ. ಇದರಿಂದ ಕರಿಮೆಣಸಿನ ಬಳ್ಳಿಯಲ್ಲಿ ಬಿಟ್ಟ ಎರೆಗಳು ಒಣಗಿ ಬೀಳುತ್ತವೆ. ತಂಪಿನ ವಾತಾವರಣ ಕಾಣದಾದರೆ ಕರಿಮೆಣಸು ಕಾರವನ್ನು ಕಳೆದುಕೊಳ್ಳುತ್ತದೆ. ಇದರಿಂದ ಗುಣಮಟ್ಟದ ಕಾಳು ಕೈಸೇರದು ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ ಬೇಸಾಯಗಾರರು.
ಗುಡ್ಡಗಾಡು ಪ್ರದೇಶಗಳಲ್ಲಿ ಹಚ್ಚ ಹಸಿರಿನ ಎಲೆ ಮತ್ತು ಕಾಯಿಗಳನ್ನು ಕೊಡುವ ಕರಿಮುಂಡ ತಳಿಯನ್ನು ಕಾಣಬಹುದು. ನೆರಳು ಜಾಸ್ತಿ ಇದ್ದಷ್ಟು ಶೇ 80ರಷ್ಟು ದ್ವಿಲಿಂಗ ಹೂವುಗಳನ್ನು ಬಿಟ್ಟಿವೆ. ನಂತರ ಮಧ್ಯಮ ಗಾತ್ರದ ಕಾಯಿ ಕಚ್ಚುತ್ತವೆ. ಆದರೆ, ಈ ಬಾರಿ ಬಳ್ಳಿಯ ಅರೆಗಳು ಒಣಗಲು ಪ್ರಾರಂಭವಾಗಿವೆ. ತುಂತುರು ಮಳೆಗೆ ಉದುರಿ ಬೀಳುತ್ತಿವೆ ಎನ್ನುತ್ತಾರೆ ಬಿಳಿಗಿರಿಬೆಟ್ಟದ ಕೃಷಿಕ ವಾಸು ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.