ADVERTISEMENT

ಕೇಂದ್ರದ ಆದೇಶ: ಮಲೆನಾಡಿಗೆ ಮರಣ ಶಾಸನ

ಪಶ್ಚಿಮಘಟ್ಟದ ಗ್ರಾಮಗಳನ್ನು ಅತಿ ಸೂಕ್ಷ್ಮ ಪ್ರದೇಶ ಪಟ್ಟಿಯಲ್ಲಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 9:30 IST
Last Updated 6 ಮಾರ್ಚ್ 2017, 9:30 IST
ಮುತ್ತಿನಕೊಪ್ಪ (ಎನ್ ಆರ್ ಪುರ): ಕೇಂದ್ರ ಸರ್ಕಾರವು ಶೃಂಗೇರಿ ಕ್ಷೇತ್ರದ ಮೂರು ತಾಲ್ಲೂಕುಗಳ 89 ಹಳ್ಳಿಗಳನ್ನು ಅತಿಸೂಕ್ಷ್ಮ ಪ್ರದೇಶ ಪಟ್ಟಿಯಲ್ಲಿ ಸೇರಿಸಿ ಮಲೆನಾಡಿಗೆ ಮರಣಶಾಸನ ಬರೆದಿದೆ ಎಂದು ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಅಭಿಪ್ರಾಯಪಟ್ಟರು.
 
ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ದಲ್ಲಿ ಶನಿವಾರ ನಡೆದ ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಬಂದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 
 
ಹಿಂದೆ ಮಾಧ್ಯಮದ ಮೂಲಕ ಕಾಂಗ್ರೆಸ್ ಪಶ್ಚಿಮಘಟ್ಟದ ಪ್ರದೇಶಗಳನ್ನು ಅತಿ ಸೂಕ್ಷ್ಮ ಪ್ರದೇಶಗಳನ್ನು ಕೈಬಿಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಅವರ ಗಮನ ಸೆಳೆಯಲಾಗಿತ್ತು. ಆದರೆ ಸಂಸದರು ನ್ಯಾಶನಲ್ ವ್ಯೆಲ್ದ್ ಲೈಫ್ ಬೋರ್ಡ್ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಜವಬ್ದಾರಿ ಮರೆತಿದ್ದರು ಎಂದು ದೂರಿದ ಅವರು, ಮುಖ್ಯಮಂತ್ರಿಗಳು ಇದಕ್ಕಾಗಿ ಸಂಪುಟ ಉಪ ಸಮಿತಿ ರಚಿಸಿ ಜನರ, ಸಂಘ ಸಂಸ್ಥೆಗಳ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ವರದಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಆ ಸಭೆಗೂ ಸಹ ಸಂಸದರು ಗೈರು ಹಾಜರಾಗಿದ್ದರು ಎಂದು ಜರಿದರು. 
 
ಮಲೆನಾಡಿನ ಜನರ ಬದುಕಿಗೆ ಮರಣಶಾಸನ ಬರೆದಿರುವ ಈ ಆದೇಶವನ್ನು ಕಾಂಗ್ರೆಸ್  ಕಠಿಣ ಪದಗಳಲ್ಲಿ ಖಂಡಿಸಲಿದ್ದು, ಕೇರಳ ರಾಜ್ಯವನ್ನು ಅತಿಸೂಕ್ಷ್ಮ ಪ್ರದೇಶ ಪಟ್ಟಿಯಲ್ಲಿ ಕೈ ಬಿಟ್ಟು. ಕರ್ನಾಟಕವನ್ನು ಸೇರಿಸಿರುವುದು ಕೇಂದ್ರದ ರಾಜ್ಯದ ಮೇಲಿನ ಮಲತಾಯಿ ಧೋರಣೆಗೆ ಸಾಕ್ಷಿ.  ಕೂಡಲೇ ಕೇಂದ್ರ ಸರ್ಕಾರ ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಹಿಸಿದರು.

ಅಲ್ಲದೇ ಆಕ್ಷೇಪಣೆಗೆ 60 ದಿನಗಳ ಸಮಯ ಇದ್ದು ಸಂಸದರು, ಶಾಸಕರು, ಬಿಜೆಪಿಯ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಆದೇಶ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು. 
 
ಕಾಂಗ್ರೆಸ್ ಮುಖಂಡ ಟಿ.ಡಿ ರಾಜೇಗೌಡ ಮಾತನಾಡಿ ಬಿಜೆಪಿ ರೈತ ವಿರೋಧಿಯಾಗಿದ್ದು ಹುಲಿಯೋಜನೆ, ರೈತರಿಗೆ ಭೂಗಳ್ಳರೆಂಬ ಹಣೆ ಪಟ್ಟಿ ಕಟ್ಟಿದ್ದು, ಇನ್ನು ಹಲವಾರು ರೈತ ವಿರೋಧಿ ಯೋಜನೆಗಳ ರೂವಾರಿ ಯಾಗಿದೆ  ಎಂದರು.
 
ಕೊಪ್ಪ ಎಪಿಎಂಸಿ ಅಧ್ಯಕ್ಷ ಒಣಿತೋಟ ರತ್ನಾಕರ್ ಮಾತನಾಡಿ, ಮುತ್ತಿನಕೊಪ್ಪ ಭಾಗದ ಜನರ, ಕಾಂಗ್ರೆಸ್ ಮುಖಂಡರ ಬಹು ದಿನದ ಬೇಡಿಕೆಯಾದ ಸಂತೆ ಮಾರಕಟ್ಟೆಗೆ ಸರ್ಕಾರ ₹20 ಲಕ್ಷ  ನೀಡಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.