ADVERTISEMENT

ತಲೆಎತ್ತದ ಮಹಿಳಾ ಮಹಾವಿದ್ಯಾಲಯ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಾಗರತ್ನಾ ಕುಪ್ಪಿ ವಿಷಾದ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2017, 5:44 IST
Last Updated 1 ಏಪ್ರಿಲ್ 2017, 5:44 IST
ಯಾದಗಿರಿ: ‘ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಗಂಭೀರ ಸಮಸ್ಯೆಗಳು ಎದುರಿಸುತ್ತಿದ್ದಾರೆ ಎಂಬುದಕ್ಕೆ ಸರ್ಕಾರಿ ಮಹಿಳಾ ಕಾಲೇಜಿನ ಅವ್ಯವಸ್ಥೆಯೇ ಪ್ರತ್ಯಕ್ಷ ಸಾಕ್ಷಿ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ವಿಷಾದಿಸಿದರು.
 
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
‘ಶೌಚಾಲಯ, ನೀರಿನ ಸೌಲಭ್ಯವಿರದ ವಾತಾವರಣದಲ್ಲಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವುದು ನಿಜಕ್ಕೂ ದುರಂತ ಸಂಗತಿ. ಈ ಕುರಿತು ಜನಪ್ರತಿ ನಿಧಿಗಳ ನಿಷ್ಕಾಳಜಿ ಮುಖ್ಯ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
‘ಜಿಲ್ಲೆಯಲ್ಲಿ ಮಹಿಳಾ ಮಹಾವಿದ್ಯಾಲಯಕ್ಕೆ ₹ 3 ಕೋಟಿ ಅನುದಾನ ಬಿಡುಗಡೆಯಾಗಿ ಮೂರು ವರ್ಷ ಕಳೆದರೂ ಸೂಕ್ತ ನಿವೇಶನ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಸೌಲಭ್ಯ ವಂಚಿತರಾಗಿದ್ದಾರೆ.

ಇದಕ್ಕೆ ಆಡಳಿತದಲ್ಲಿ ಇರುವ ಶಾಸಕರ ಇಚ್ಛಾಶಕ್ತಿ ಕೊರತೆಯೇ ಮೂಲ ಕಾರಣ’ ಎಂದರು. ‘ಜಿಲ್ಲೆಯಲ್ಲಿ ಮಹಿಳಾ ಜಿಲ್ಲಾಧಿಕಾರಿ ಇದ್ದಾರೆ. ಸರ್ಕಾರಿ ಮಹಿಳಾ ವಿದ್ಯಾಲಯಕ್ಕೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿನಿಯರಿಗೆ ಧೈರ್ಯ ಹೇಳುವ ಕೆಲಸ ಮಾಡಬೇಕು’ ಎಂದರು.
 
ಲಿಂಗೇರಿ ಕೋನ್ಪಪ್ಪ ಮಹಿಳಾ ಕಾಲೇಜು ಉಪನ್ಯಾಸಕಿ ಡಾ.ಜ್ಯೋತಿ ಲತಾ ತಡಿಬಿಡಿಮಠ ಉಪನ್ಯಾಸ ನೀಡಿದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕಿ ಡಾ.ಅನಸೂಯ ಪಾಟೀಲ, ಕಲ್ಪನಾ ಜೈನ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಆರ್. ಪಿ.ರೆಡ್ಡಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.