ADVERTISEMENT

‘ಶೈಕ್ಷಣಿಕ ರಂಗಕ್ಕೆ ಕೆಎಲ್‌ಇ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:20 IST
Last Updated 14 ನವೆಂಬರ್ 2017, 5:20 IST
ಬೆಳಗಾವಿಯಲ್ಲಿ ಸೋಮವಾರ ನಡೆದ ಕೆಎಲ್‌ಇ ಸಂಸ್ಥೆಯ 102ನೇ ವರ್ಷಾಚರಣೆ ಉದ್ಘಾಟನಾ ಸಮಾರಂಭದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ.ವಿವೇಕ ಸಾವಜಿ, ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಅಧ್ಯಕ್ಷ ಶಿವಾನಂದ ಕೌಜಲಗಿ, ಉಪ ಕಾರ್ಯಾಧ್ಯಕ್ಷ ಅಶೋಕ ಬಾಗೇವಾಡಿ, ಭಾಗವಹಿಸಿದ್ದರು
ಬೆಳಗಾವಿಯಲ್ಲಿ ಸೋಮವಾರ ನಡೆದ ಕೆಎಲ್‌ಇ ಸಂಸ್ಥೆಯ 102ನೇ ವರ್ಷಾಚರಣೆ ಉದ್ಘಾಟನಾ ಸಮಾರಂಭದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ.ವಿವೇಕ ಸಾವಜಿ, ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಅಧ್ಯಕ್ಷ ಶಿವಾನಂದ ಕೌಜಲಗಿ, ಉಪ ಕಾರ್ಯಾಧ್ಯಕ್ಷ ಅಶೋಕ ಬಾಗೇವಾಡಿ, ಭಾಗವಹಿಸಿದ್ದರು   

ಬೆಳಗಾವಿ: ಶೈಕ್ಷಣಿಕ ರಂಗದ ಬೆಳವಣಿಗೆಯಲ್ಲಿ ಕೆಎಲ್‌ಇ ಕೊಡುಗೆ ಅಪಾರವಿದೆ. ಒಳ್ಳೆಯ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರಶಂಶಿಸಿದರು. ನಗರದಲ್ಲಿ ಸೋಮವಾರ ನಡೆದ ಕೆಎಲ್‌ಇ ಸಂಸ್ಥೆಯ 102ನೇ ಸಂಸ್ಥಾಪನಾ ದಿನಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶೇಷವಾದ ಸಾಮರ್ಥ್ಯವಿರುತ್ತದೆ. ಅದನ್ನು ಅಭಿವ್ಯಕ್ತಗೊಳಿಸಬೇಕು. ಅದಕ್ಕೆ ಅನುಗುಣವಾಗಿ ಸಮಾಜವೂ ಬೆಂಬಲ ನೀಡಬೇಕು. ಬೀಜ ಬೆಳೆಯಲು ಅವಕಾಶ ನೀಡಿದರೆ ಅದು ಹೆಮ್ಮರವಾಗಿ ಬೆಳೆದು ಹೂ, ಹಣ್ಣು, ಕಾಯಿ, ನೆರಳು ನೀಡುತ್ತದೆ. ಇದರಂತೆ ಕೆಎಲ್‌ಇ ಸಂಸ್ಥೆಯು ಸಮಾಜಕ್ಕೆ ಫಲ ನೀಡುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ.ವಿವೇಕ ಸಾವಜಿ ಮಾತನಾಡಿ, ಕೆಎಲ್‌ಇ ಸಂಸ್ಥೆಯು ವಿಶ್ವ ಮಟ್ಟದಲ್ಲಿ ವಿಸ್ತರಿಸಿದೆ. ಶಿಕ್ಷಣದ ಹಲವಾರು ಕ್ಷೇತ್ರಗ ಳಲ್ಲಿ ಸಾಧನೆ ಮಾಡಿದೆ. ಭವಿಷ್ಯದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಂಸ್ಥೆ ಸಜ್ಜಾಗಿದೆ ಎಂದು ಹೇಳಿದರು.

ADVERTISEMENT

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಎಲ್‌ಇ ಸಪ್ತರ್ಷಿಗಳು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ಅವರ ಪ್ರಖರವಾದ ವಿಚಾರಗಳು ಹಾಗೂ ಸೇವಾ ಮನೋ ಭಾವದಿಂದ ಕೆಎಲ್‌ಇ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ ಎಂದರು.

ಕಳೆದ ವರ್ಷ ನಡೆದ ಶತ ಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಮಗೆ ಮೂರು ಸವಾಲು ಗಳನ್ನು ನೀಡಿದ್ದರು. ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪದಕ ಗಳಿಸಬೇಕು. ವಿಶ್ವದ ನೂರು ವಿಶ್ವವಿದ್ಯಾಲಯಗಳಲ್ಲಿ ಒಂದಾಗಬೇಕು ಹಾಗೂ ಅತ್ಯುತ್ತಮ ಸಂಶೋಧನೆ ಕೈಗೊಳ್ಳಬೇಕು ಎಂದು ಹೇಳಿದ್ದರು. ಇವುಗಳನ್ನು ಸಾಕಾರ ಗೊಳಿ ಸಲು ಸಂಸ್ಥೆಯು ದಾಪುಗಾಲು ಇಟ್ಟಿದೆ ಎಂದರು.

ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ಹೋಮಿಯೋಪಥಿ ಆಸ್ಪತ್ರೆ ಹಾಗೂ ಮಹಾವಿದ್ಯಾಲಯ, ಪುಣೆಯಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಅಧ್ಯಕ್ಷ ಶಿವಾನಂದ ಕೌಜಲಗಿ ಮಾತ ನಾಡಿದರು. ವೇದಿಕೆಯ ಮೇಲೆ ಉಪಕಾರ್ಯಾಧ್ಯಕ್ಷ ಅಶೋಕ ಬಾಗೇವಾಡಿ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು. ಆಜೀವ ಸದಸ್ಯ ಎಸ್.ಡಿ.ಶಿರಗಾವೆ ಸ್ವಾಗತಿಸಿ ದರು. ಡಾ.ನೇಹಾ ದಡೇದ ಹಾಗೂ ಡಾ. ಮಹೇಶ ಗುರನಗೌಡರ ನಿರೂಪಿಸಿದರು.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ 30 ಚಿನ್ನ ಹಾಗೂ 44 ಬೆಳ್ಳಿಯ ಪದಕಗಳನ್ನು ಪ್ರಭಾಕರ ಕೋರೆ ನೀಡಿ, ಸನ್ಮಾನಿಸಿದರು. ಡಾ.ಶಿವಪ್ರಸಾದ ಗೌಡರ ಹಾಗೂ ತಂಡದವರನ್ನು, ಡಾ.ಆರ್.ಎಸ್.ಮುಧೋಳ, ಅಮಿತ ಧನವಡೆ, ಬಿಬಿಯಾನ್ ಪೆರೆರಾ ಅವರನ್ನು ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.