ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚು

ಉದಯ ಕುಲಕರ್ಣಿ
Published 3 ಡಿಸೆಂಬರ್ 2017, 5:49 IST
Last Updated 3 ಡಿಸೆಂಬರ್ 2017, 5:49 IST
ನೇಪಾಳದಲ್ಲಿ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಪಡೆದ ಬೆಳ್ಳಿ ಪದಕದೊಂದಿಗೆ ಮುಧೋಳ ತಾಲ್ಲೂಕು ಹಲಕಿ ಗ್ರಾಮದ ಬಸವರಾಜ ಹೊರಡ್ಡಿ
ನೇಪಾಳದಲ್ಲಿ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಪಡೆದ ಬೆಳ್ಳಿ ಪದಕದೊಂದಿಗೆ ಮುಧೋಳ ತಾಲ್ಲೂಕು ಹಲಕಿ ಗ್ರಾಮದ ಬಸವರಾಜ ಹೊರಡ್ಡಿ   

ಮುಧೋಳ: ಗ್ರಾಮೀಣ ಭಾಗದಲ್ಲಿ ಜನಿಸಿ, ಸರಿಯಾದ ಮಾರ್ಗದರ್ಶನ ಇಲ್ಲದೆ, ದೈಹಿಕ ಅಂಗವಿಕಲತೆಯನ್ನೂ ಮೀರಿ ತನ್ನ ಸಾಧನೆಯ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಪ್ರತಿಭೆ ಮುಧೋಳ ತಾಲ್ಲೂಕಿನ ಹಲಕಿ ಗ್ರಾಮ ಬಸವರಾಜ ತಮ್ಮಣ್ಣಪ್ಪ ಹೊರಡ್ಡಿ.

ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನೇಪಾಳ ದೇಶದ ಕಠ್ಮಂಡುನಲ್ಲಿ 2017ರ ಅಕ್ಟೋಬರ್ 28ರಿಂದ 30ರವರೆಗೆ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ 100 ಮೀ. ಸ್ಟ್ರಿಂಟ್ ರನ್ನಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಬೆಳ್ಳಿ ಪದಕ ದೇಶಕ್ಕೆ ಕೊಡುಗೆ ನೀಡಿದ್ದಾರೆ.

2009ರಲ್ಲಿ ಬೆಂಗಳೂರಿನಲ್ಲಿ ನಡೆದ ಆವಾಸ್ ವರ್ಡ್ ಗೇಮ್‌ನಲ್ಲಿ 400 ಮೀ. ರಿಲೇಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದ ಬಂಗಾರದ ಪದಕ ಪಡೆದಿದ್ದಾರೆ. 2007ರಲ್ಲಿ ದಯವಾನ್ ಆವಾಸ್ ವರ್ಡ್ ಗೇಮ್‌ನಲ್ಲಿ ಭಾಗವಹಿಸಿ ತ್ರಿಬಲ್ ಜಂಪ್‌ನಲ್ಲಿ ತೃತೀಯ ಸ್ಥಾನದ ಕಂಚಿನ ಪದಕ ಪಡೆದಿದ್ದಾರೆ. 2006ರಲ್ಲಿ ಶ್ರೀಲಂಕಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 100 ಮೀ. ಹರ್ಡಲ್ ಪ್ರಥಮ ಸ್ಥಾನದ ಚಿನ್ನದ ಪದಕ ಪಡೆದಿದ್ದಾರೆ.

ADVERTISEMENT

2010 ಇಂಗ್ಲೆಂಡ್‌ನಲ್ಲಿ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 100 ಮೀ. ಓಟದಲ್ಲಿ ಪ್ರಥಮದ ಚಿನ್ನದ ಪದಕ ಹಾಗೂ 200 ಮೀ. ಓಟದಲ್ಲಿ ದ್ವಿತೀಯ ಸ್ಥಾನದ ಬೆಳ್ಳಿ ಪದಕ ಪಡೆದಿದ್ದಾರೆ. 2006ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ 2006 ಪ್ಯಾರಾ ಏಷಿಯನ್ ಗೇಮ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

‘ಅಂಗವಿಕಲತೆಯ ಬಗ್ಗೆ ಕೊರಗುವುದಕ್ಕಿಂತ ಅದನ್ನು ಉಪಯೋಗಿಸಿಕೊಂಡು ಸಾಧನೆ ಮಾಡುವುದೇ ನಿಜವಾದ ಬದುಕು. ಅಂಗವಿಕಲತೆ ಶಾಪ ಎಂದು ಕೊರಗುವುದೇ ನಿಜವಾದ ಅಂಗವಿಕಲತೆ’ ಎಂದು 29 ವಯಸ್ಸಿನ ಬಸವರಾಜ ಹೇಳುತ್ತಾರೆ.

ಬಡತನದಲ್ಲಿರುವ ತಮಣ್ಣಪ್ಪ ಹೊರಡ್ಡಿ ಹಾಗೂ ಕಸ್ತೂರಿ ಅವರ ಏಕೈಕ ಪುತ್ರ ಬಸವರಾಜ. ಬಿಎ ಶಿಕ್ಷಣ ಮುಗಿದ ತಕ್ಷಣ ಅವರ ಸಾಧನೆ ಗಮನಿಸಿದ ಹಲಕಿ ಗ್ರಾಮದ ಹತ್ತಿರದಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿಯ ಆಡಳಿತ ಮಂಡಳಿ ನೌಕರಿ ನೀಡಿದೆ. ಅವರ ಕ್ರೀಡೆಗೆ ನೆರವು ನೀಡುತ್ತಾ ಬಂದಿದೆ. ಜೆ.ಕೆ. ಸಿಮೆಂಟ್ ಕಂಪನಿಯ ಮುಖ್ಯಸ್ಥ ಆರ್‌ಬಿಎಂ ತ್ರಿಪಾಠಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಜಯಂತ ಮಲ್ಹೋತ್ರಾ ಅವರನ್ನು ಬಸವರಾಜ ಸ್ಮರಿಸುತ್ತಾರೆ.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಮಣ್ಣ ತಳೇವಾಡ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಿಕ ಆರ್ಥಿಕ ನೆರವು ನೀಡಿದ್ದನ್ನೂ ಬಸವರಾಜ ಸ್ಮರಿಸುತ್ತಾರೆ. ಗ್ರಾಮೀಣ ಭಾಗದ ನನಗೆ ಸರಿಯಾದ ಮಾರ್ಗದರ್ಶನ ಮಾಡುವುದರ ಮೂಲಕ ನನ್ನ ಪ್ರತಿಭೆ ಅನಾವರಣಕ್ಕೆ ಕಾರಣರಾದ ತರಬೇತುದಾರ ಆರ್.ಕೆ.ಪಡತಾರೆ ಸ್ಮರಿಸಿ, ಪತ್ನಿ ಪೂರ್ಣಿಮಾ ಹಾಗೂ ಹಲಕಿ ಗ್ರಾಮಸ್ಥರ ಬೆಂಬಲವನ್ನು ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.