ADVERTISEMENT

‘ಅಂತರ್ಜಾಲ ಬ್ಯಾಂಕಿಂಗ್ ಅಭಿವೃದ್ಧಿಗೆ ಪೂರಕ’

ಕೆಎಲ್ಇ ಸಂಸ್ಥೆ ಪದವಿ ವಿದ್ಯಾಲಯದಲ್ಲಿ ವಿತ್ತೀಯ ಸಾಕ್ಷರತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:15 IST
Last Updated 10 ಜನವರಿ 2017, 5:15 IST
ಮಹಾಲಿಂಗಪುರ: ಜನರು ತಮ್ಮ ಅತ್ಯಮೂಲ್ಯ ಸಮಯವನ್ನು ಬ್ಯಾಂಕಿನ ಸರದಿಯಲ್ಲಿ ನಿಲ್ಲಲು ಉಪಯೋಗಿಸದೇ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಯೋಜನ ಪಡೆಯಬೇಕು, ಇದರಿಂದ ಸಮಯದ ಉಳಿಕೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಾಧ್ಯ, ಅಂತರ್ಜಾಲ ಬ್ಯಾಂಕಿಂಗ್ ಸೌಲಭ್ಯ  ದೇಶದ ಅಭಿವೃದ್ಧಿಗೆ ಪೂರಕ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖಾ ವ್ಯವಸ್ಥಾಪಕ ಕರಣಕುಮಾರ ಬಿಸ್ವಾಸ್ ಹೇಳಿದರು. 
 
ಸ್ಥಳೀಯ ಕೆಎಲ್ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸ ಲಾಗಿದ್ದ ವಿತ್ತೀಯ ಸಾಕ್ಷರತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
 
ಸರ್ಕಾರದ ವಿತ್ತೀಯ ಸಾಕ್ಷರತೆ ಆಧುನಿಕ ಕಾಲಘಟ್ಟದ ಅನಿವಾರ್ಯ ಯೋಜನೆಯಾಗಿದ್ದು ನಗದು ರಹಿತ ಆರ್ಥಿಕ ಚಟುವಟಿಕೆಗಳು ಇಂದಿನ ತುರ್ತು ಅಗತ್ಯಗಳಾಗಿವೆ, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸುರಕ್ಷಿತ ವ್ಯವಹಾರ ಸಾಧ್ಯವಿದ್ದು ದೇಶದ ಸಾಮಾನ್ಯ ನಾಗರಿಕರೂ ಈ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದು ಹೇಳಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. 
 
ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಆದರ್ಶ್ ಮಾತನಾಡಿ, ಈಗ ನಮಗೆ ಶುದ್ಧ ಆರ್ಥಿಕ ವ್ಯವಸ್ಥೆಯ ಅವಶ್ಯಕತೆ ಇದ್ದು ಪ್ರತಿಯೊಬ್ಬರೂ ತಮಗೆ ಅನ್ವಯಿಸುವ ಕರಗಳನ್ನು ಪಾವತಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
 
ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ.ಅಶೋಕ ನರೋಡೆ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯ ಪ್ರಕಟಿಸಿದ ವಿತ್ತೀಯ ಸಾಕ್ಷರತಾ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಪ್ರೊ. ಬಿ.ಸಿ. ಬನ್ನೂರ, ವಿ.ಎಸ್. ಅಂಗಡಿ, ಡಾ.ಸುನಂದಾ ಸೋರಗಾವಿ, ಡಾ.ಆಶಾರಾಣಿ ಕೆರೂರ ಇದ್ದರು. ಎನ್ಎಸ್ಎಸ್ ಅಧಿಕಾರಿ ಜಿ.ಎ. ಮಠಪತಿ ಸ್ವಾಗತಿಸಿದರು, ಮುದುಕಪ್ಪ ಮಮದಾಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.