ADVERTISEMENT

ಅನಧಿಕೃತ ಕಟ್ಟಡ ತೆರವಿಗೆ ನೋಟಿಸ್‌ ಜಾರಿ

ಪುರಸಭೆ ಸಾಮಾನ್ಯ ಸಭೆಯಲ್ಲಿ ಸೂಚನೆ; 135 ಫಲಾನುಭವಿಗಳಿಗೆ ಸಿಲಿಂಡರ್ ಒಲೆ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 6:20 IST
Last Updated 1 ಮಾರ್ಚ್ 2017, 6:20 IST
ಬಾದಾಮಿ ಪುರಸಭೆಯಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ ಫಲಾನುಭವಿಗಳಿಗೆ ಗ್ಯಾಸ್‌ ಸಿಲಿಂಡರ್‌ ಒಲೆ ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಫಾರೂಕ್‌ ಅಹ್ಮದ್‌ ದೊಡಮನಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ನಿಂಗಮ್ಮ ರೋಣದ ಇದ್ದರು
ಬಾದಾಮಿ ಪುರಸಭೆಯಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ ಫಲಾನುಭವಿಗಳಿಗೆ ಗ್ಯಾಸ್‌ ಸಿಲಿಂಡರ್‌ ಒಲೆ ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಫಾರೂಕ್‌ ಅಹ್ಮದ್‌ ದೊಡಮನಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ನಿಂಗಮ್ಮ ರೋಣದ ಇದ್ದರು   

ಬಾದಾಮಿ:  ಇಲ್ಲಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಅನಧಿಕೃತವಾಗಿ ಪುರಸಭೆಯ 2843/1ಎ, 2843/1ಬಿ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡವನ್ನು ತೆರವುಗೊಳಿಸಲು ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಒಂದು ವಾರದಲ್ಲಿ ತೆರವುಗೊಳಿಸದಿದ್ದರೆ ಪುರಸಭೆಯಿಂದ ತೆರವುಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ   ವಿವಿಧ ಅಭಿವೃದ್ಧಿ ಕಾಮಗಾರಿಗೆ ಟೆಂಡರ್‌ ಕರೆಯಲು ಸಭೆಯಲ್ಲಿ ಒಪ್ಪಿಗೆ ಪಡೆದು ಫಲಾನುಭವಿಗಳಿಗೆ ಒಲೆ ವಿತರಿಸಲಾಯಿತು.

ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ ಮಾಲೀಕರು ಸಾಮಾನ್ಯ ಸಭೆಯಲ್ಲಿ ನಾವು ಅನಧಿಕೃತವಾಗಿ ಕಟ್ಟಿದ್ದೇವೆ. ಪಟ್ಟಣದಲ್ಲಿ ಅನೇಕ ಅನಧಿಕೃತ ಕಟ್ಟಡಗಳು ಇವೆ ಎಲ್ಲವನ್ನೂ ತೆರವುಗೊಳಿಸಿ ನಮ್ಮ ಸಹಕಾರವಿದೆ ಎಂದು ಎ.ಎಸ್‌.ಪೀರಜಾದೆ ಇತರರು ಹೇಳಿದರು.

ನಿಮ್ಮ ಅನಧಿಕೃತ ಕಟ್ಟಡಗಳ ಬಗ್ಗೆ ಅಧಿಕೃತವಾಗಿ ದೂರು ಬಂದಿದೆ. ಬೇರೆಯವರ ಕಟ್ಟಡಗಳು ಅನಧಿಕೃತವಾಗಿದ್ದರೆ ಪುರಸಭೆಗೆ ನೀವೂ ದೂರು ನೀಡಿರಿ ಅವುಗಳನ್ನು ಸಹ ತೆರವುಗೊಳಿಸುತ್ತೇವೆ ಎಂದು ಸದಸ್ಯರಾದ ಆರ್‌.ಎಫ್‌ ಬಾಗವಾನ ಮತ್ತು ಬಸವರಾಜ ತೀರ್ಥಪ್ಪನವರ ಹೇಳಿದರು.

ಇಲ್ಲಿನ ನಿವೇಶನದಲ್ಲಿ ಹೃದಯ ಯೋಜನೆಯಲ್ಲಿ ಮಂಜೂರಾದ ಕಸ ನಿರ್ವಹಣೆ ಘಟಕದ ಕಟ್ಟಡವನ್ನು ನಿರ್ಮಿಸಲು ಅನುಕೂಲವಾಗುವುದು ಎಂದು ಪುರಸಭೆ ಸದಸ್ಯರಾದ ಇಲಿಯಾಸ್‌ ಜಮಾದಾರ, ಶಿವಕುಮಾರ ಹಿರೇಮಠ ಸಭೆಯ ಗಮನಕ್ಕೆ ತಂದರು.

ಸಾಮಾನ್ಯ ಸಭೆ ನಡೆದಾಗ ಸಾರ್ವಜನಿಕರು ಒಳಗೆ ಬರಬಾರದು. ಸಭೆ ಗೌರವವನ್ನು ಕಾಪಾಡಲು ಅಧ್ಯಕ್ಷರು ಮತ್ತು ಪುರಸಭೆ ಮುಖ್ಯಾಧಿಕಾರಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸದಸ್ಯ ಪಾಂಡಪ್ಪ ಕಟ್ಟಿಮನಿ ದೂರಿದರು.

ಇದೇ ಸಂದರ್ಭದಲ್ಲಿ ಪುರಸಭೆಯ ಎಸ್‌ಎಫ್‌ಸಿ ₹ 10 ಲಕ್ಷ ಅನುದಾನದಲ್ಲಿ 135 ಫಲಾನುಭವಿಗಳಿಗೆ ಗ್ಯಾಸ್‌ ಸಿಲಿಂಡರ್‌ ಮತ್ತು ಒಲೆಯನ್ನು ಪುರಸಭೆ ಅಧ್ಯಕ್ಷ ಫಾರೂಕ್‌ಅಹ್ಮದ್‌ ದೊಡಮನಿ ವಿತರಿಸಿದರು. ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ನಿಂಗಮ್ಮ ರೋಣದ ಮತ್ತು  ಪುರಸಭೆ ಸದಸ್ಯರು ಇದ್ದರು.

ಅಸಮಾಧಾನ: ಸಭೆಯಲ್ಲಿ ಪತ್ರಕರ್ತರು ಅಸಮಾಧಾನಗೊಂಡು ಹೊರನಡೆದ ಪ್ರಸಂಗ ಜರುಗಿತು. ವಿವಿಧ ಇಲಾಖೆ ಅಂಕಿ ಅಂಶಗಳ ಪ್ರಗತಿ ವಿವರದ ಬುಕ್‌ಲೆಟ್‌ ಪತ್ರಕರ್ತರು ಕೇಳಿದಾಗ ನಿಮಗೆ ಇಲ್ಲ.  ಸದಸ್ಯರಿಗೆ ಮಾತ್ರ ಎಂದು ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಹೇಳಿದರು. ಪ್ರಗತಿ ವಿವರಣೆ ಪತ್ರಕರ್ತರಿಗೂ ತಿಳಿಯಬೇಕು. ಸಭೆಯಲ್ಲಿ ನಾವು ಹಾಗೆಯೇ ಕುಳಿತುಕೊಂಡು ಕೇಳಬೇಕೆ ? ಎಂದು ಪ್ರಶ್ನಿಸಿ ಹೊರನಡೆದರು. ನಂತರ ಇಓ ಕ್ಷಮೆ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.