ADVERTISEMENT

‘ಅರಣ್ಯ ಸಂರಕ್ಷಣೆಗೆ ಕೈಜೋಡಿಸಿ’

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:24 IST
Last Updated 17 ಜುಲೈ 2017, 7:24 IST

ಬಾಗಲಕೋಟೆ: ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಅರಣ್ಯ ಸಂಪತ್ತು ರಕ್ಷಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು. ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದಿಂದ ನವನಗರದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಅರಣ್ಯ ಸಂಪತ್ತನ್ನು ರಕ್ಷಿಸುವುದು ನಾಗರಿಕರ ಜವಾಬ್ದಾರಿ.

ಸಮೃದ್ಧ ಮಳೆ, ಬೆಳೆ ಪಡೆದು ಉತ್ತಮ ಜೀವನ ನಡೆಸಲು ಅರಣ್ಯ ಸಂಪತ್ತಿನ ರಕ್ಷಣೆ ಇಂದಿನ ಅಗತ್ಯವಾಗಿದೆ’ ಎಂದರು. ಅರಣ್ಯ ಸಂರಕ್ಷಣೆಗೆ ಸರ್ಕಾರದಿಂದ ಸಾಕಷ್ಟು ಉತ್ತೇಜನ ದೊರೆಯುತ್ತಿದೆ. ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು ಎಂದರು.

ವಿದ್ಯಾ ಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಪ್ರೌಢಶಾಲೆಗೆ ಶಾಸಕರ ಅಭಿವೃದ್ಧಿ ನಿಧಿಯಿಂದ ಮೊದಲ ಹಂತದಲ್ಲಿ ₹10 ಲಕ್ಷ ಹಾಗೂ ಮುಂದಿನ ದಿನಗಳಲ್ಲಿ ₹10 ಲಕ್ಷ ನಿೀಡುವ ಭರವಸೆ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಟಿಡಿಎ ಅಧ್ಯಕ್ಷ ಎ. ಡಿ. ಮೊಕಾಶಿ, ‘ವಿದ್ಯಾ ಪ್ರಸಾರಕ ಮಂಡಳವು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು’ ಎಂದರು.

ADVERTISEMENT

ಇದೇ ಸಂದರ್ಭದಲ್ಲಿ ಎಚ್.ವೈ. ಮೇಟಿ, ಎನ್.ಡಿ. ಸುದರ್ಶನ, ಬಿಟಿಡಿಎ ಸದಸ್ಯರಾದ ಬಸವರಾಜ ಬಾದಾಮಿ,  ಆನಂದ ಜಿಗಜಿನ್ನಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ. ಕೆ. ಗಾರವಾಡ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಸಿ.ಎನ್. ದಾಸ್ ಮಾತನಾಡಿ, ‘ಸಂಸ್ಥೆಯು ₹17 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ನವನಗರದ ನೂತನ ನಿವೇಶನದಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ’ ಎಂದರು.

ಸಂಸ್ಥೆಯ ಉಪಕಾರ್ಯಾಧ್ಯಕ್ಷೆ  ಶ್ರೀಲತಾ ಹೆರಂಜಲ್, ಉಪಾಧ್ಯಕ್ಷ ವಿ.ವೈ.ಕವಠೇಕರ, ಆಡಳಿತ ಮಂಡಳಿ ಸದಸ್ಯರಾದ ಪಿ.ಎ. ಪರ್ವತಿಕರ, ಆರ್.ಎಸ್. ಕಂದಕೂರ, ಬಿ.ಆರ್. ಕಾಸಟ್, ಪ್ರಾಚಾರ್ಯರಾದ ಡಾ. ಜಿ.ಬಿ. ಕುಲಕರ್ಣಿ, ಎ.ಕೆ. ಕಂದಗಲ್, ಬಿ.ಎಚ್.ಲಮಾಣಿ, ಎಪಿಎಂಸಿ ಸದಸ್ಯ ಬಲರಾಮ ನಾಯ್ಕ, ನಿವೃತ್ತ ಪ್ರಾಚಾರ್ಯ ಜಿ.ಎನ್. ಕುಲಕರ್ಣಿ, ನಾಗರಾಜ ಹದ್ಲಿ, ನಾರಾಯಣ ದೇಸಾಯಿ ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಾಮ ಮನಗೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಎಸ್.ಜಿ. ದೇಶಪಾಂಡೆ ಪರಿಚಯಿಸಿದರು. ಸಹ ಪ್ರಾಧ್ಯಾಪಕ ಶ್ರೀನಿವಾಸ ನರಗುಂದ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶ್ರೀನಾಥ ಮಳಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.