ADVERTISEMENT

ಚಂದಾ ಎತ್ತಿ ಗ್ರಾಮಸ್ಥರಿಂದ ಅಂತ್ಯಸಂಸ್ಕಾರ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:04 IST
Last Updated 19 ಏಪ್ರಿಲ್ 2017, 6:04 IST

ಬಾಗಲಕೋಟೆ: ಭೂಮಿ ಮಾರಾಟ ಮಾಡಿ ಬಂದ ₹ 70 ಲಕ್ಷಕ್ಕೂ ಹೆಚ್ಚು ಹಣವನ್ನು ಪತ್ನಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರೂ ಪತಿ ಮೃತಪಟ್ಟಾಗ ಗ್ರಾಮಸ್ಥರೇ ಚಂದಾ ಎತ್ತಿ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ತಾಲ್ಲೂಕಿನ ಹೊನ್ನಾಕಟ್ಟಿಯಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಶಿವಲಿಂಗಪ್ಪ ಬೇವಿನಕಟ್ಟಿ ಎಂಬುವವರು ಸೋಮವಾರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ರೇಣುಕಾ ಎಂಜಿನಿಯರಿಂಗ್ ಓದುವ ಪುತ್ರನೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ. ಅನಾರೋಗ್ಯಪೀಡಿತ ಶಿವಲಿಂಗಪ್ಪ ಅವರನ್ನು ಸೋದರತ್ತೆ ಸಾವಂತೆವ್ವ ಅವರೇ ನೋಡಿಕೊಳ್ಳುತ್ತಿದ್ದರು. ಎಂಟು ವರ್ಷಗಳ ಹಿಂದೆ ಶಿವಲಿಂಗಪ್ಪ 19 ಎಕರೆ ಜಮೀನು ಮಾರಿದ್ದು, ಆಗ ಬಂದ ಹಣವನ್ನು ಪತ್ನಿಯ ಹೆಸರಿನಲ್ಲಿ ಠೇವಣಿ ಇಟ್ಟಿದ್ದಾರೆ ಎನ್ನಲಾಗಿದೆ.

ಪತಿಯ ಸಾವಿನ ಸುದ್ದಿ ತಿಳಿದು ರೇಣುಕಾ ಗ್ರಾಮಕ್ಕೆ ಬಂದಿದ್ದಾರೆ. ಸಂಜೆ ಸಭೆ ಸೇರಿದ ಗ್ರಾಮಸ್ಥರು ಶಿವಲಿಂಗಪ್ಪನನ್ನು ನೋಡಿಕೊಳ್ಳುತ್ತಿದ್ದ ಸೋದರತ್ತೆ ಸಾವಂತೆವ್ವ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಜೊತೆಗೆ ಆಕೆಯ ಭವಿಷ್ಯದ ಭದ್ರತೆಗೆ ಒಂದಷ್ಟು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಕೇಳಿದ್ದಾರೆ. ಅದಕ್ಕೆ ಆಗ ಒಪ್ಪಿಕೊಂಡಿದ್ದ ರೇಣುಕಾ ರಾತ್ರೋರಾತ್ರಿ ಯಾರಿಗೂ ಹೇಳದೇ ಊರು ಬಿಟ್ಟು ತೆರಳಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಪತಿಯ ಅಂತ್ಯಸಂಸ್ಕಾರ ನೆರವೇರಿಸದೇ ರೇಣುಕಾ ತೆರಳಿದ್ದರಿಂದ ಬೆಳಿಗ್ಗೆ ಗ್ರಾಮದ ಹಿರಿಯರು  ಹಾಗೂ ಸಂಬಂಧಿಕರು ಸೇರಿ ಮನೆ ಮನೆಯಿಂದ ಚಂದಾ ಎತ್ತಿ ಮಧ್ಯಾಹ್ನ ಶಿವಲಿಂಗಪ್ಪ ಅವರ ಅಂತ್ಯಸಂಸ್ಕಾರ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.