ಬಾದಾಮಿ: ಸರ್ಕಾರದ ಆದೇಶದಂತೆ ಇಲ್ಲಿನ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಸೋಮವಾರದಿಂದ ಬೆಂಬಲ ಬೆಲೆಗೆ ತೊಗರಿ ಖರೀದಿಸಲು ಆರಂಭಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗೆ ತೊಗರಿ ಖರೀದಿ ಕೇಂದ್ರ ದಲ್ಲಿ ಸೋಮವಾರ ಎಪಿಎಂಸಿ ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಫೆಡರೇಷನ್ ಅಧಿಕಾರಿಗಳು ತೊಗರಿ ಯನ್ನು ಖರೀದಿಸಲು ತಿರಸ್ಕರಿಸಿದ್ದರಿಂದ ರೈತರು ಪ್ರತಿಭಟಿಸಿದ್ದನ್ನು ಸ್ಮರಿಸಬಹುದು.
ಎಪಿಎಂಸಿ ತೊಗರಿ ಬೆಳೆ ಖರೀದಿ ಕೇಂದ್ರದಲ್ಲಿ ಸೋಮವಾರ 142 ಕ್ವಿಂಟಲ್ ಮತ್ತು ಮಂಗಳವಾರ 82 ಕ್ವಿಂಟಲ್ ಮತ್ತು ಬುಧವಾರ 148 ಕ್ವಿಂಟಲ್ ತೊಗರಿಯನ್ನು ತಾಲ್ಲೂಕಿನ ರೈತರಿಂದ ಮೂರು ದಿನಗಳಲ್ಲಿ ಒಟ್ಟು 372 ಕ್ವಿಂಟಲ್ ಖರೀದಿಸಲಾಗಿದೆ. 190 ರೈತರು ತೊಗರಿ ಮಾದರಿ(ಶ್ಯಾಂಪಲ್) ಕೊಟ್ಟು ಹೋಗಿದ್ದಾರೆ.
ಸರದಿ ಪ್ರಕಾರ ಅವರಿಗೆ ದೂರವಾಣಿಯ ಮೂಲಕ ತಿಳಿಸಲಾಗುವುದು ಎಂದು ತೊಗರಿ ಧಾನ್ಯ ಶ್ರೇಣಿ ಪರೀಕ್ಷಕ ಮತ್ತು ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಚಂದಾವರಿ ಹೇಳಿದರು.
ತೊಗರಿ ಧಾನ್ಯವನ್ನು ಎಪಿ ಎಂಸಿಗೆ ಬೆಂಬಲ ಬೆಲೆ ಕೊಡುವ ರೈತರು ಗ್ರಾಮ ಲೆಕ್ಕಾಧಿಕಾರಿಯಿಂದ ಧೃಡೀಕ ರಣ, ಖಾತೆ ಉತಾರ, ಚಾಲತಿ ಉತಾರ, ಆಧಾರ ಕಾರ್ಡ್ ಮತ್ತು ಐಎಫ್ಎಸ್ಎ ಕೋಡ್ ಹೊಂದಿದ ಬ್ಯಾಂಕ್ ಪಾಸ್ ಬುಕ್ ಝರಾಕ್ಸ ಪ್ರತಿ ಮತ್ತು ತೊಗರಿಯ ಮಾದರಿ (ಶ್ಯಾಂಪಲ್) ತಂದು ಖರೀದಿ ಕೇಂದ್ರದಲ್ಲಿ ಕೊಡಬೇಕು ಎಂದು ತೊಗರಿ ಧಾನ್ಯದ ಶ್ರೇಣಿಯನ್ನು ಗುರುತಿ ಸುವ ಅಧಿಕಾರಿ ಚಂದಾವರಿ ಹೇಳಿದರು.
ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿ ಸಂಜೀವ್, ಟಿಎಪಿಸಿಎಂಎಸ್ ಎಸ್.ಎನ್ ಅಂಗಡಿ, ತೊಗರಿ ಧಾನ್ಯ ಗುಣಮಟ್ಟ ಪರೀಕ್ಷಕ ಪುಂಡಲೀಕ ಯಂಕಂಚಿ ಮತ್ತು ಎಪಿಎಂಸಿಯ ಗುರುಲಿಂಗಯ್ಯ ಪೂಜಾರ ರೈತರ ತೊಗರಿಯ ತೂಕ ಮಾಡಿಸುತ್ತಿದ್ದರು. ತಾಲ್ಲೂಕಿನ ಕೆರೂರ, ಬೆಳಕೊಪ್ಪ, ನೀಲಗುಂದ, ಮುಷ್ಟಿಗೇರಿ ಹಾಗೂ ಮುತ್ತಲಗೇರಿಗಳಿಂದ ರೈತರು ತೊಗರಿ ತೆಗೆದುಕೊಂಡು ಬಂದಿದ್ದರು.
*
ಬೆಂಬಲ ಬೆಲೆಗೆ ಮಾರಾಟ ಮಾಡಲು ತೊಗರಿ ತೆಗೆದು ಕೊಂಡು ಬಂದ ಎಲ್ಲ ರೈತರ ತೊಗರಿ ಖರೀದಿಸಲಾಗಿದೆ.
–ಎಂ.ಎಸ್. ಚಂದಾವರಿ,
ಸಹಾಯಕ ಕೃಷಿ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.