ADVERTISEMENT

‘ದೇಶದಲ್ಲಿ ನೋಟು ರದ್ದು ಕ್ರಮ ಖಂಡನೀಯ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:42 IST
Last Updated 3 ಮಾರ್ಚ್ 2017, 7:42 IST

ಬಾದಾಮಿ: ಪ್ರಧಾನಮಂತ್ರಿಯ ನೋಟು ರದ್ದು ಕ್ರಮ ಖಂಡನೀಯ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಉಸ್ತುವಾರಿ ಕಾರ್ಯದರ್ಶಿ ಪಾರಸ್ಮಾಲ್‌ ಜೈನ್‌ ಟೀಕಿಸಿದರು. ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಕಾಂಗ್ರೆಸ್‌ ತಾಲ್ಲೂಕು ಘಟಕದ  ‘ಜನವೇದನಾ ಸಮಾವೇಶ’ದಲ್ಲಿ  ಮಾತನಾಡಿದರು.

ಮೋದಿ ಅವರು ಅಭಿವೃದ್ಧಿ ಮಾಡುವರು ಎಂಬ ಕನಸು ದೇಶದ ಜನರಿಗೆ ಇತ್ತು. ಸ್ವಿಸ್‌ ಬ್ಯಾಂಕಿನಿಂದ ಕಪ್ಪು ಹಣ ತಂದು ನಿಮ್ಮ ಜನಧನ ಅಕೌಂಟಿಗೆ  ₹15 ಲಕ್ಷ ಹಾಕುವುದಾಗಿ ಎಂದು ಹೇಳಿದ್ದರು. ಯಾವ ಹಣವನ್ನು ತರಲಿಲ್ಲ ಎಂದು ಆರೋಪಿಸಿದರು.

ಕಾಳ ಧನಿಕರಿಗೆ ಕೋಟಿ  ಹಣ ವಿತರಣೆಯಾಯಿತು. ಕಪ್ಪು ಹಣ ಬಿಳಿ ಮಾಡಲು  ಬ್ಯಾಂಕ್‌ ಸಿಬ್ಬಂದಿಯೇ ಭ್ರಷ್ಟಾಚಾರ ಎಸಗಿದರು. ನೋಟು ಪಡೆಯಲು  ಜನರು ಸರದಿಯಲ್ಲಿ ನಿಂತು ನೂರಾರು ಜನ ಮರಣ ಹೊಂದಿದರೂ ಅವರಿಗೆ ಪರಿಹಾರ ಕೊಡಲಿಲ್ಲ ಎಂದು ಜೈನ್‌ ಟೀಕಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ  ರೈತರ ಸಾಲ ಮನ್ನಾ ಮಾಡಲು ಆಗಲಿಲ್ಲ. ಕೇಂದ್ರದಿಂದ ₹ 1 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಂ.ಬಿ.ಸೌದಗರ ಬಿಜೆಪಿ ಸರ್ಕಾರವನ್ನು ಟೀಕಿಸಿದರು.

ನೋಟು ರದ್ದುಗೊಂಡಿದ್ದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಭಾರತ ದೇಶಕ್ಕೆ ಒಳ್ಳೆಯ ದಿನಗಳು ಬಂದವೇ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಪ್ರಶ್ನಿಸಿದರು.

ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಡಾ.ಎಂ.ಜಿ.ಕಿತ್ತಲಿ, ಎಫ್‌.ಆರ್‌.ಪಾಟೀಲ, ಸುವರ್ಣ ಬ್ಯಾಹಟ್ಟಿ, ಪ್ರಕಾಶ ಮೇಟಿ, ಮುತ್ತಣ್ಣ ಯರಗೊಪ್ಪ, ಡಿ.ಆರ್.ಪೂಜಾರ, ಯಮನಪ್ಪ ದೇವಮಾಳಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಫಾರೂಕ್‌ ಅಹ್ಮದ್‌ ದೊಡಮನಿ, ಪಾಂಡಪ್ಪ ಈಳಗೇರ, ಐ.ಎಸ್‌. ಕರಿಗೌಡರ, ಬಿ.ಬಿ.ಸೂಳಿಕೇರಿ ಮೊದಲಾದವರಿದ್ದರು.  ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಂ.ಡಿ.ಯಲಿಗಾರ ಪ್ರಾಸ್ತಾವಿಕವಾಗಿ  ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT