ADVERTISEMENT

ನರೇಗಾ ಕಾರ್ಮಿಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 7:20 IST
Last Updated 16 ಮೇ 2017, 7:20 IST

ಬೀಳಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಗಿರಿಸಾಗರದಲ್ಲಿ ನಡೆಯುತ್ತಿರುವ ಕೆರೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಹೋದ ಎರಡನೇ ದಿನವೇ ಕಾರ್ಮಿಕರು ಪಂಚಾಯ್ತಿ ಆವರಣದಲ್ಲಿ ಟೈರುಗಳನ್ನು ಸುಟ್ಟು, ಸಲಿಕೆ, ಗುದ್ದಲಿ, ಬುಟ್ಟಿಗಳೊಂದಿಗೆ ಪ್ರತಿಭಟನೆ ನಡೆಸಿದ ಪ್ರಸಂಗ ಭಾನುವಾರ ನಡೆದಿದೆ.

ಅಗೆದ ಮಣ್ಣನ್ನು 50ಮೀ.ದೂರದವರೆಗೆ ಹಾಕಬೇಕು. 12ಜನ ಸೇರಿ 25 ಟ್ರ್ಯಾಕ್ಟರುಗಳಿಗೆ ಮಣ್ಣು ತುಂಬಬೇಕು ಎಂದು ಕರಾರು ಹಾಕುತ್ತಿರುವ ಸಿಬ್ಬಂದಿಯೊಬ್ಬರು ಕಾರ್ಮಿಕರಿಗೆ ಮಹಿಳೆಯರು ಪುರುಷರೆನ್ನದೇ ಅವಾಚ್ಯವಾಗಿ ಬಿರುನುಡಿಗಳನ್ನಾಡುತ್ತಿರುವುದು, ಜಾತಿನಿಂದನೆ ಕೇಸು ಹಾಕುವುದಾಗಿ ಬೆದರಿಸುತ್ತಿರುವುದು, ಎರಡು ದಿನಗಳಿಂದ ಅಶುದ್ಧ ನೀರು ಪೂರೈಕೆಯಿಂದಾಗಿ ಹತ್ತಾರು ಕಾರ್ಮಿಕರು ಆಸ್ಪತ್ರೆ ಸೇರಿರುವುದು, ಜೆಸಿಬಿ, ಟ್ರ್ಯಾಕ್ಟರುಗಳನ್ನು ಬಳಸುತ್ತಿರುವುದು ಸೇರಿದಂತೆ ನಮ್ಮ ಕರಾರುಗಳಿಗೆ ಒಪ್ಪದಿದ್ದವರು ಕೆಲಸಕ್ಕೆ ಬರುವುದೇ ಬೇಡವೆಂದು ಸಿಬ್ಬಂದಿ ಯೊಬ್ಬರು ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಕಾರ್ಮಿಕರು ಅಂಗೈಯಲ್ಲಿ ಎದ್ದಿರುವ ಬೊಬ್ಬೆಗಳನ್ನು ತೋರಿಸುತ್ತ ದೂರಿದರು.

ಸದಪ್ಪ ಬಾಣದ, ಭೀಮಪ್ಪ ಬೊಮ್ಮಣ್ಣವರ, ಶ್ರೀಶೈಲ ನವಲಗಣ್ಣ, ಲಕ್ಷ್ಮಿಬಾಯಿ ಜಗದ ಪ್ರತಿಭಟನೆಯ ಮುಂದಾಳತ್ವವಹಿಸಿದ್ದರು. ಕೂಲಿ ಕಾರ್ಮಿಕರ ಆರೋಪಗಳಿಗೆ ಉತ್ತರಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್.ನಾಲತವಾಡ, ಕೆರೆಯಲ್ಲಿ ಈ ಹಿಂದೆ ನೀರು ನಿಂತು ನೆಲ ಗಟ್ಟಿಯಾಗಿ ಕಲ್ಲಿನಂತಾಗಿದೆ.

ADVERTISEMENT

ಒಂದಿಷ್ಟು ಸಡಿಲಗೊಳಿಸಿದರೆ ಅಗಿಯಲು ಅನುಕೂಲವಾಗುತ್ತದೆ ಎಂದು ಕಾರ್ಮಿಕರೇ ಹೇಳಿದ್ದರಿಂದ ನೆಲವನ್ನು ಜೆಸಿಬಿಯಿಂದ ಸಡಿಲಗೊಳಿಸಿ ಕೊಡಲಾಗಿದೆ. ಸಂಬಳಕ್ಕೆ ತಕ್ಕಂತೆ ಕೆಲಸದ ದಾಖಲೆಗಾಗಿ ಟ್ರ್ಯಾಕ್ಟರ್ ಮೂಲಕ ಕೆರೆ ಏರಿಯವರೆಗೆ ಮಣ್ಣು ಸಾಗಿಸಲಾಗುತ್ತಿದೆ. ಶನಿವಾರ ಗಿರಿಸಾಗರದಲ್ಲಿ ವಿದ್ಯುತ್ ಪೂರೈಕೆ ಇಲ್ಲದ್ದರಿಂದ ಬೇರೆಕಡೆಯಿಂದ ನೀರು ತರಿಸಲಾಗಿತ್ತು ಎಂದು ಹೇಳಿದರು.

ಬೆಳಿಗ್ಗೆಯಿಂದ ಪ್ರಾರಂಭಗೊಂಡ ಧರಣಿ ಮಧ್ಯಾಹ್ನದವರೆಗೂ ನಡೆದು ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನುಮಂತ ಕಾಖಂಡಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಂತವ್ವ ದೊಡಮನಿ, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಕಾಂತ ಸಂದಿ ಮನಿ, ಮಾಜಿ ಪಂಚಾಯ್ತಿ ಅಧ್ಯಕ್ಷ ಹನುಮಂತ ಬಡಿಗೇರ ಮಧ್ಯಸ್ಥಿಕೆವಹಿಸಿ ಉದ್ಧಟ ಸಿಬ್ಬಂದಿಗೆ ತಾಕೀತು ಮಾಡಲು, ಶುದ್ಧ ನೀರು ಪೂರೈಸಲು, ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪಿಡಿಓ ಆವರಿಗೆ ಸೂಚಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

*

ಜನರಿಗೆ ಕೆಲಸದ ಜತೆ ಸಂಬ ಳವೂ ದೊರೆಯಬೇಕು. ಅವರು ಮಾಡುವ ಕೆಲಸದಿಂದ ಹಾಕಿಕೊಂಡ ಯೋಜನೆಯೂ ಪೂರ್ಣ ಗೊಳ್ಳಬೇಕು ಎನ್ನುವುದು ನರೇಗಾ ಉದ್ದೇಶ
ಎಸ್.ಎಸ್.ನಾಲತವಾಡ
ಪಿಡಿಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.