ಇಳಕಲ್: ಭೀಕರ ಬರದ ಪರಿಣಾಮವಾಗಿ 3ವರ್ಷಗಳಿಂದ ರೈತರಿಗೆ ಫಸಲು ಕೈಗತ್ತಿಲ್ಲ. ರಾಜ್ಯ ಸರ್ಕಾರ ನೆಪ ಹೇಳದೇ ಕೂಡಲೇ ಸಾಲಮನ್ನಾ ಮಾಡಬೇಕು ಹಾಗೂ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಹುನಗುಂದ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.ಸೋಮವಾರ ಕಂಠಿ ವೃತ್ತದಿಂದ ತಹಶೀಲ್ದಾರ್ ಕಚೇರಿಗೆ ಮೆರವಣಿಗೆಯಲ್ಲಿ ಸಾಗಿದ ರೈತರು ಸಾಲ ಮನ್ನಾ ಮಾಡುವಂತೆ ಹಾಗೂ ತ್ವರಿತವಾಗಿ ಬರ ಪರಿಹಾರ ವಿತರಿಸುವಂತೆ ಘೋಷಣೆ ಕೂಗಿದರು. ಬಿಡುಗಡೆಯಾದ ಬರ ಪರಿಹಾರದ ಮೊತ್ತವನ್ನು ಕೆಲವು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ಗಳು ಇನ್ನೂ ರೈತರ ಖಾತೆಗಳಿಗೆ ಹಣ ಜಮೆ ಮಾಡಿಲ್ಲ. ಕೂಡಲೇ ಹಣ ಜಮೆ ಮಾಡಲು ಸೂಚಿಸಬೇಕು ಎಂದು ಆಗ್ರಹಿಸಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ತಾಲ್ಲೂಕಿನ ಪೂರ್ವಭಾಗದ 28 ಹಳ್ಳಿಗಳಿಗೆ ಹನಿ ನೀರಾವರಿ ಸೌಲಭ್ಯ ಒದಗಿಸಬೇಕು. ಗ್ರಾನೈಟ್ ಗಣಿಗಾರಿಕೆ ಮಾಡುವ ಜೆಮ್ ಮತ್ತು ಬಿಟಿಸಿ ಕಂಪೆನಿಗಳು ಗಣಿಗಳಲ್ಲಿ ಕಲ್ಲು ಕೊರೆಯಲು ಉಪಯೋಗಿಸುವ ಸ್ಟೋನ್ ಪೌಡರ್ನ್ನು ನಿಷೇಧಿಸಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಹುನಗುಂದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ತುಂಬದ, ಕಾರ್ಯಾಧ್ಯಕ್ಷ ಗುರು ಗಾಣಿಗೇರ, ರೈತ ಮುಖಂಡರಾದ ಮಹಾಲಿಂಗಪ್ಪ ಅವಾರಿ, ವಿಜಯಕುಮಾರ ಪಾಟೀಲ, ಸುರೇಶ ಬಂಡರಗಲ್ಲ, ಸಂಗಪ್ಪ ಬಂಡರಗಲ್ಲ, ರಾಯಪ್ಪ ಶೆಟ್ಟರ್, ಎಸ್.ಎಸ್. ಪಾಟೀಲ, ಬಿ.ಎಸ್. ತಳಗೇರಿ, ಕೆ.ಎಸ್. ವಣಗೇರಿ, ಶರಣಪ್ಪ ಶೆಟ್ಟರ್, ಮಲ್ಲನಗೌಡ ಆದಾಪೂರ, ಮಹಾಂತೇಶ ಶಿವನಗುತ್ತಿ, ವಸಂತ ಕಂಪ್ಲಿ, ರಾಮಣ್ಣ ಪರೂತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.