ಬಾಗಲಕೋಟೆ: ಜಿಲ್ಲೆಯ ಲಾರಿ ಮಾಲೀಕರ ಸಂಘದಿಂದ ಹಣಕ್ಕಾಗಿ ಬೇಡಿಕೆ ಮತ್ತು ಚಾಲಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಕೊಪ್ಪಳ ಜಿಲ್ಲೆ ಮರಳು ಸಾಗಾಟ ಲಾರಿ ಮಾಲೀಕರು ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶರಣಪ್ಪ ಗಂಗಾವತಿ ಅವರು, ಕೊಪ್ಪಳ ಜಿಲ್ಲೆ ಯಿಂದ ಮರಳು ಸಾಗಾಟ ಮಾಡುವು ದನ್ನು ಇಲ್ಲಿನ ಲಾರಿ ಮಾಲೀಕರು ವಿರೋಧಿಸುತ್ತಿದ್ದಾರೆ. ನಮ್ಮ ಜಿಲ್ಲೆಗೆ ಬೇರೆ ಜಿಲ್ಲೆಗಳಿಂದ ಮರಳು ಸಾಗಾಟ ಮಾಡು ವಂತಿಲ್ಲ. ನೀವೇಕೆ ಮರಳು ತರುತ್ತಿದ್ದೀರಿ ಎನ್ನುತ್ತಿದ್ದಾರೆ. ಹಣಕ್ಕೆ ಬೇಡಿಕೆ ಸಲ್ಲಿಸಿ, ಹಣ ನೀಡದ ಸಂದರ್ಭದಲ್ಲಿ ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ನ್ಯಾಯಯುತವಾಗಿ ಪರ್ಮಿಟ್ ಪಡೆದು ಗಂಗಾವತಿ ತಾಲ್ಲೂಕಿನ ನಂದಿಹಳ್ಳಿ ಸ್ಟಾಕ್ ಯಾರ್ಡ್ ನಿಂದ ನೇರವಾಗಿ ನವನಗರಕ್ಕೆ ಸಾಗಾಟ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿ ದಂತೆ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಅವರು ಪ್ರಕರಣ ದಾಖಲಿಸಿಕೊಳ್ಳದೆ ಜಿಲ್ಲಾಧಿಕಾ ರಿಗಳ ಬಳಿ ತೆರಳುವಂತೆ ಸೂಚಿಸುತ್ತಾರೆ. ಜಿಲ್ಲಾಧಿಕಾರಿಗಳನ್ನು ನೇರವಾಗಿ ಭೇಟಿ ಯಾಗಿ ತಿಳಿಸಿದರೂ ಅವರಿಂದ ಕೂಡಾ ಸರಿಯಾದ ಸ್ಪಂದನೆ ವ್ಯಕ್ತವಾಗಿಲ್ಲ. ಜಿಲ್ಲಾಡಳಿತ ಕೂಡಾ ನಮ್ಮ ಕಷ್ಟಗಳಿಗೆ ಕಿವಿಗೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಆರ್ಟಿಓ ಅಧಿಕಾರಿಗಳು ಪರ್ಮಿಟ್ ಇದ್ದರೂ ನಮ್ಮ ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಲೀಗಲ್ ಆಗಿ ಮರಳು ಸಾಗಾಟ ಮಾಡು ತ್ತಿದ್ದರೂ ಅಧಿಕಾರಿಗಳಿಂದ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ನಮ್ಮ ಎಲ್ಲ ದಾಖಲಾತಿಗಳು ಸರಿಯಾಗಿವೆ ಎಂದು ತಿಳಿಸಿದರೂ ಸಹಿತ ವರ್ಕ್ಆರ್ಡರ್ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ಜಿಲ್ಲಾಡಳಿತ ಮಾಡುವ ಕೆಲಸವನ್ನು ಆರ್ಟಿಓ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ವಾಸುದೇವನ್, ಸಚಿನ್ ಪುಟ್ಟಿ ಹಾಗೂ ರಾಜು ರಾಠೋಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.