ADVERTISEMENT

ಮುರ್ತುಜಾ ಖಾದ್ರಿ ದರ್ಗಾಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 5:24 IST
Last Updated 3 ಡಿಸೆಂಬರ್ 2017, 5:24 IST
ಇಳಕಲ್‌ನ ಮುರ್ತುಜಾ ಖಾದ್ರಿ ದರ್ಗಾಕ್ಕೆ ಬೀಗ ಹಾಕಿದ್ದ ಕಾರಣ ತಟಗಾರ್‌ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು
ಇಳಕಲ್‌ನ ಮುರ್ತುಜಾ ಖಾದ್ರಿ ದರ್ಗಾಕ್ಕೆ ಬೀಗ ಹಾಕಿದ್ದ ಕಾರಣ ತಟಗಾರ್‌ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು   

ಇಳಕಲ್: ಈದ್ ಮಿಲಾದ್‌ ದಿನ ನಗರದ ಮುಸ್ಲಿಂ ಸಮುದಾಯದ ಎರಡು ಬಣಗಳ ನಡುವೆ ಮೆರವಣಿಗೆ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿ, ಒಂದು ಬಣ ಸೈಯ್ಯದ್ ಷಾ ಮುರ್ತುಜಾ ಖಾದ್ರಿ ದರ್ಗಾಕ್ಕೆ ಬೀಗ ಹಾಕಿತು. ಇನ್ನೊಂದು ಬಣ ದರ್ಗಾ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕು ಹಾಗೂ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿತು.

ಕೆಲವು ದಿನಗಳ ಹಿಂದೆ ನಗರದ ಮುಸ್ಲಿಂ ಸಮುದಾಯ ಎ.ಐ.ಎಂ.ಐ.ಎಂ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಹಾಗೂ ಲಿಮ್ರಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ರಜಾಕ್ ತಟಗಾರ ನೇತೃತ್ವದಲ್ಲಿ ಎರಡು ಬಣಗಳಾಗಿ ಒಡೆದಿತ್ತು.

ಟಿಪ್ಪು ಜಯಂತಿ ಆಚರಣೆಯ ವಿವಾದದ ನಂತರ ಉಭಯ ಬಣಗಳ ನಡುವಿನ ವೈಮನಸ್ಸು ಇನ್ನಷ್ಟು ಹೆಚ್ಚಾಗಿತ್ತು. ಶನಿವಾರ ಬೆಳಿಗ್ಗೆ ಉಭಯ ಬಣದವರೂ ಪ್ರತ್ಯೇಕವಾಗಿ ನಗರದ ಮದೀನಾ ಶಾದಿ ಮಹಲ್‌ನಿಂದ ಮೆರವಣಿಗೆ ಹೊರಟು ಕಂಠಿ ವೃತ್ತ, ಗೊರಬಾಳ ನಾಕಾ ಮಾರ್ಗವಾಗಿ ದರ್ಗಾ ತಲುಪಿದರು.

ADVERTISEMENT

ಅಬ್ದುಲ್‌ ರಜಾಕ್ ತಟಗಾರ ನೇತೃತ್ವದ ಮೆರವಣಿಗೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಪಾಲ್ಗೊಂಡಿದ್ದರು. ಈ ಬಣದ ಮೆರವಣಿಗೆ ದರ್ಗಾದ ಆವರಣ ತಲುಪಿದಾಗ ದರ್ಗಾದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ಉಸ್ಮಾನ್‌ಗಣಿ ಹುಮನಾಬಾದ ನೇತೃತ್ವದ ಬಣವು ದರ್ಗಾದ ಆವರಣ ಪ್ರವೇಶಿಸಿ, ಬೀಗ ತಗೆಯಲು ಮುಂದಾದಾಗ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಉಂಟಾಗಿತ್ತು. ಪರಸ್ಪರ ವಾಗ್ವಾದಗಳು ನಡೆದವು. ಇಬ್ಬರ ಅಭಿಮಾನಿಗಳು ಜಯಕಾರ ಕೂಗಲಾರಂಭಿಸಿದರು.

ಬೀಗ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಬ್ದುಲ್‌ ರಜಾಕ್‌ ತಟಗಾರ ಬೆಂಬಲಿಗರು, ದರ್ಗಾದ ಆಡಳಿತ ಮಂಡಳಿ ಕಡೆಯವರು ಬೀಗ ಹಾಕಿದ್ದಾರೆ. ಕಾರಣ ಆಡಳಿತ ಮಂಡಳಿ ವಜಾ ಮಾಡಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸಂಜೆಯವರೆಗೂ ಪ್ರತಿಭಟನೆ ಮುಂದುವರೆದಿತ್ತು. ಸ್ಥಳಕ್ಕೆ ಬಂದ ವಿಶೇಷ ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಮನವಿ ಸ್ವೀಕರಿಸಿ, ದರ್ಗಾಕ್ಕೆ ಹಾಕಲಾಗಿದ್ದ ಬೀಗ ತೆರವುಗೊಳಿಸಿದರು.

ಸಿಪಿಐ ಜೆ.ಕುರುಣೇಶಗೌಡ, ಪಿಎಸ್ಐಗಳಾದ ನಾಗರಾಜ ಕಿಲಾರಿ, ಎಸ್.ಎಂ. ಶಿರಗುಪ್ಪಿ ಸ್ಥಳದಲ್ಲಿದ್ದು, ಬಂದೋಬಸ್ತ್ ಒದಗಿಸಿದ್ದರು.

**

ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ

ದರ್ಗಾಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಒತ್ತಾಯಿಸಿ ದಾದಾ ಹವಾಲ್ದಾರ್, ವಕ್ಫ್ ಕಮಿಟಿ ಸದಸ್ಯ ಸುಲೇಮಾನ್ ಚೋಪದಾರ್‌, ಹಾಸೀಂ ಬಿಳೇಕುದರಿ, ಆಲ್ತಾಫ್ ಫಣಿಬಂದ, ರಫೀಕ್ ಕೋಡಿಹಾಳ, ದಾವಲ್‌ ಕೊಡಗಲಿ, ಇಕ್ಬಾಲ್ ತಟಗಾರ್‌, ಫೈಸಲ್, ವಾಸೀಂ ಜಹಾಗೀರದಾರ್, ಜೀಲಾನಿ ಚೋಪದಾರ, ನಜಿಮುದ್ಧಿನ್ ಸುರಪುರ ವಿಶೇಷ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.