ಬಾಗಲಕೋಟೆ: ‘ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ಮಂಗಳವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಇಲ್ಲಿನ ಬಸವೇಶ್ವರ ವೃತ್ತಕ್ಕೆ ಬಂದ ಎಬಿವಿಪಿ ಕಾರ್ಯಕರ್ತರು, ವಿಶ್ವವಿದ್ಯಾಲಯವು ಫಲಿತಾಂಶ, ಮೌಲ್ಯಮಾಪನ, ಮರು ಮೌಲ್ಯಮಾಪನ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೇ ತನ್ನ ನಿಲುವು ಬದಲಾಯಿಸುತ್ತಾ ಅವೈಜ್ಞಾನಿಕತೆ ಮೆರೆಯುತ್ತಿದೆ. ಆಡಳಿತ ಮಂಡಳಿ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ರಾಜ್ಯಕಾರ್ಯದರ್ಶಿ ರಾಜೇಶ ಗುರಾಣಿ ಮಾತನಾಡಿ, ‘ಹೈಕೋರ್ಟ್ ಆದೇಶದಂತೆ ಕ್ರಾಶ್ ಕೋರ್ಸ್ ಪದ್ಧತಿಯನ್ನು ಜನವರಿ–2017ರಲ್ಲಿ ಪ್ರಾರಂಭಿಸಿ, ಫೆಬ್ರುವರಿಯಲ್ಲಿ ಪರೀಕ್ಷೆ ನಡೆಸಬೇಕಾಗಿತ್ತು. ಮೇ ನಲ್ಲಿ ಪರೀಕ್ಷೆ ನಡೆಸುವ ಮೂಲಕ ವಿವಿಯು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದೆ’ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಲ್ಲಿ ಕ್ರಾಶ್ ಕೋರ್ಸ್ ಬಗ್ಗೆ ಇರುವ ಗೊಂದಲ ಪರಿಹರಿಸಬೇಕು. 2010 ಹಾಗೂ 2015 ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಆಗಿರುವ ತೊಂದರೆ ಸರಿಪಡಿಸಬೇಕು. ಪರೀಕ್ಷೆ ಮುಗಿದ ಒಂದು ತಿಂಗಳ ಒಳಗಾಗಿ ಫಲಿತಾಂಶ ಪ್ರಕಟವಾಗುವಂತೆ ನೋಡಿಕೊಳ್ಳಬೇಕು. ನುರಿತ ಅಧ್ಯಾಪಕರಿಂದ ಮೌಲ್ಯಮಾಪನ ನಡೆಸಬೇಕು.
ಮರುಮೌಲ್ಯ ಮಾಪನ ದಲ್ಲಿರುವ ಗೊಂದಲ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ಪ್ರಕಾಶ ಪೂಜಾರ, ಕುಮಾರಸ್ವಾಮಿ ಹಿರೇಮಠ, ಪ್ರಶಾಂತ ಮುತ್ತಕ್ಕನವರ, ನೀಲಪ್ಪ, ರಮೇಶ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.