ಶಿವಯೋಗಮಂದಿರ (ಬಾದಾಮಿ): ಗದಗನಲ್ಲಿ ಭಾನುವಾರ (ಡಿ. 24) ನಡೆಯುವ ವೀರಶೈವ ಲಿಂಗಾಯತ ಬೃಹತ್ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಡಾ.ಸಂಗನಬಸವ ಶ್ರೀಗಳು ಹೇಳಿದರು.
ಈ ಕುರಿತು ಶಿವಯೋಗಮಂದಿರದಲ್ಲಿ ಶುಕ್ರವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಎರಡೂ ಒಂದೇ ಆಗಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತರು ಬೇರೆ ಬೇರೆ ಎಂದು ಹೇಳುತ್ತಿದ್ದಾರೆ. ಯಾರೂ ಅದಕ್ಕೆ ಕಿವಿಗೊಡಬೇಡಿ ಎಂದರು.
ಶಿವಯೋಗ ಮಂದಿರದಲ್ಲಿ ಜರುಗಿದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಎರಡು ಒಂದೇ ಎಂದು ನಿರ್ಣಯಿಸಿದಂತೆ ಗದಗ ಸಮಾವೇಶದಲ್ಲಿಯೂ ಅದೇ ನಿರ್ಣಯವನ್ನು ಕೈಗೊಳ್ಳಲಾಗುವುದು. ಸಮಾವೇಶಕ್ಕೆ ಅಂದಾಜು ಎರಡು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ ಎಂದರು.
ಮೀಸಲಾತಿ ಸಲುವಾಗಿ ಧರ್ಮವನ್ನು ಒಡೆಯುವುದು ಬೇಡ. ವೀರಶೈವ ಲಿಂಗಾಯತರು ಸೇರಿಕೊಂಡು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಾಯ ತರೋಣ ಎಂದರು. ಸಮಾವೇಶಕ್ಕೆ ಹೋಗಲು ಕೆರೂರ, ಬಾದಾಮಿ, ಗುಳೇದಗುಡ್ಡ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ವಾಹನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಭಕ್ತರು ಸಭೆಯಲ್ಲಿ ತಿಳಿಸಿದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಎಂ.ಬಿ. ಹಂಗರಗಿ, ಎನ್.ಎಸ್. ಮೊಮ್ಮನಗೌಡರ, ಬಸಲಿಂಗಪ್ಪ ಮೆಣಸಿನಕಾಯಿ, ಗುಂಡಪ್ಪ ಗುಡದಾರಿ, ವಿರೂಪಾಕ್ಷಪ್ಪ ಹುಲ್ಲೂರ, ಕುಮಾರಗೌಡ ಜನಾಲಿ, ಬಸವಂತಗೌಡ ಗೌಡರ, ಯಲ್ಲನಗೌಡ ಗೌಡರ, ಬಸಯ್ಯ ಹಿರೇಮಠ, ಬಾಬು ಅಂಗಡಿ, ದ್ಯಾವಪ್ಪ ಗಚ್ಚನ್ನವರ, ಹನುಮಂತ ಮಮದಿ, ಬಿ.ಪಿ. ಹಳ್ಳೂರ, ರಾಮನಗೌಡ ಗೌಡರ, ಶಿವಕುಮಾರ ಹಿರೇಮಠ, ಬಸಲಿಂಗಪ್ಪ ಬೂದಿಹಾಳ, ಸೋಮಲಿಂಗಪ್ಪ ತೋಟಗೇರ, ಸಿದ್ದಪ್ಪ ಬೇನಾಳ, ಶಿವಪ್ಪ ಹುಲ್ಲಿಕೇರಿ, ಕಳಕಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.