ಜಮಖಂಡಿ: ಸಸಾಲಟ್ಟಿ ಏತ ನೀರಾವರಿ ಯೋಜನೆಯ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ನಗರದ ಎಸಿ ಕಚೇರಿ ಎದುರು ಬುಧವಾರ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ಬ್ಯಾನರ್ ಮತ್ತು ಭಿತ್ತಿ ಫಲಕಗಳನ್ನು ಹಿಡಿದುಕೊಂಡು ರೈತರು ಜಮಾಯಿಸಿದ್ದರು. ನಂತರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯ ಕೊನೆಯಲ್ಲಿ ಎಸಿ ಕಚೇರಿ ಎದುರು ಇಡೀ ದಿನ ಧರಣಿ ನಡೆಸಿದರು.
ಸಸಾಲಟ್ಟಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಒಂದು ತಿಂಗಳಿನಲ್ಲಿ ಆರಂಭಿಸುವುದಾಗಿ ಎರಡು ತಿಂಗಳ ಹಿಂದೆ ಜಲಸಂಪನ್ಮೂಲ ಸಚಿವರು ಭರವಸೆ ನೀಡಿದ್ದರು.ಆದರೆ, ಈ ವರೆಗೆ ಕಾಮಗಾರಿ ಆರಂಭಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ರೈತರ ಸಾಲಮನ್ನಾ ಮಾಡಬೇಕು. ಜಿಎಲ್ಬಿಸಿ ಕಾಲುವೆಗೆ ನೀರು ಹರಿಸಬೇಕು. ನಗರದಲ್ಲಿ ಗೋಶಾಲೆಗೆ ಮುಂದುವರಿಸಲು ಬೇರೆಡೆ ಸ್ಥಳಾವಕಾಶ ಮಾಡಿ ಕೊಡಬೇಕು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಒತ್ತಾಯಿಸಿದರು.ಗಂಗಾಧರ ಮೇಟಿ, ಬಾಬು ಹಸರಡ್ಡಿ, ತುಕಾರಾಮ ಮ್ಯಾಗಿನಮನಿ, ಶೇಖರ ಬೂದಿ, ರಮೇಶ ಬೀಳಗಿ, ಅಣ್ಣವ್ವ ನಿಂಗಸಾನಿ, ಪದ್ದವ್ವ ಜೀರಗಾಳ, ಶಿವಪ್ಪ ಕಡಪಟ್ಟಿ, ಗುರುಪಾದ ಮ್ಯಾಗಿನಮನಿ ಇತರರು ಧರಣಿಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.