ಮುಧೋಳ: ಮುಧೋಳದಲ್ಲಿ ಜ. 4 ಹಾಗೂ 5 ರಂದು ನಡೆಯುವ ರನ್ನ ವೈಭವವನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸೋಣ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ ಹೇಳಿದರು.
ಪಟ್ಟಣ ರನ್ನ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರನ್ನ ವೈಭವಕ್ಕೆ ಯಾವುದೇ ತರಹದ ತಾರತಮ್ಯವಿಲ್ಲದೆ ಎಲ್ಲ ರೀತಿಯ ಕಾರ್ಯಗಳು ನಡೆಯುತ್ತಿದ್ದು ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು. ಸಭೆಯಲ್ಲಿ ಕೇಳಿದ ರನ್ನ ರಥಯಾತ್ರೆಯ ಕುರಿತ ಪ್ರಶ್ನೆಗೆ ಉತ್ತರ ನೀಡಿ ರಥಯಾತ್ರೆಗೆ ಸಮಯ ಬೇಕು ಈ ರಥಯಾತ್ರೆಯ ಕುರಿತು ಮೇಲಧಿಕಾರಿಗಳೊಂದಿಗೆ ಮಾತನಾಡುವುದಾಗಿ ಹೇಳಿದರು.
ಸಭೆಯಲ್ಲಿ ನಾಡಗೀತೆ, ರೈತಗೀತೆಯನ್ನು ಶಾಲೆಯ ಮಕ್ಕಳ ತಂಡಗಳು ಪ್ರಸ್ತುತ ಪಡಿಸುತ್ತವೆ. ರನ್ನ ವೈಭವ ಅಂಗವಾಗಿ ಕುಸ್ತಿ ಟೂರ್ನಿಗಳು ಸಹ ನಡೆಯುತ್ತವೆ ಎಂದು ಹೇಳಿದರು.
ಎಡಿಸಿ ಜಿ.ರುದ್ರಗೌಡ, ಉಪವಿಭಾಗಾಧಿಕಾರಿ ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಜಿಲ್ಲಾ ಯೋಜನಾ ನಿರ್ದೇಶಕ ಶಂಕರಗೌಡ ಸೋಮನಾಳ, ತಹಶೀಲ್ದಾರ್ ತುಕಾರಾಮ ದಾಸರ, ತಾಲ್ಲೂಕ ಪಂಚಾಯ್ತಿ ಇಒ ಚಂದ್ರಯ್ಯ ಚೌಕಿಮಠ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನೀಲ ಪೂಜಾರಿ, ಸಿದ್ದಣ್ಣ ಬಾಡಗಿ ,ಬಿ.ಪಿ ಹಿರೇಸೋಮಣ್ಣವರ, ಡಾ.ಸಂಗಮೇಶ ಕಲ್ಯಾಣಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ಪ್ರಚಾರ ಸಮಿತಿ ರದ್ದು: ಈ ಬಾರಿ ಜರುಗಲಿರುವ ರನ್ನ ಉತ್ಸವ- 14 ಕ್ಕೆ ಪ್ರಚಾರ ಸಮಿತಿಯನ್ನು ರದ್ದು ಪಡಿಸಲಾಗಿದೆ ಎಂದು ಉಪ-ವಿಭಾಗಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದ್ದಾರೆ.
ಹೆಚ್ಚಿನ ಹಣ ನೀಡಲು ಮನವಿ: ರನ್ನ ಉತ್ಸವ -2014 ಕ್ಕೆ ಸರ್ಕಾರ ಇನ್ನೂ ₨ 50 ಲಕ್ಷ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಮಾಜಿಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.