ADVERTISEMENT

ಬನಶಂಕರಿದೇವಿ ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 7:09 IST
Last Updated 2 ಜನವರಿ 2018, 7:09 IST
ಜಾತ್ರೆಯ ನಿಮಿತ್ತ ಪಲ್ಲೇದ ಹಬ್ಬದ ಅಂಗವಾಗಿ ಬನಶಂಕರಿ ದೇವಾಲಯದಲ್ಲಿ ಭಕ್ತರು ದೇವಿಯ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು
ಜಾತ್ರೆಯ ನಿಮಿತ್ತ ಪಲ್ಲೇದ ಹಬ್ಬದ ಅಂಗವಾಗಿ ಬನಶಂಕರಿ ದೇವಾಲಯದಲ್ಲಿ ಭಕ್ತರು ದೇವಿಯ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು   

ಬನಶಂಕರಿ (ಬಾದಾಮಿ): ಜಾತ್ರೆಯ ನಿಮಿತ್ತ ಜಾತ್ರೆಯ ಮುನ್ನಾ ದಿನ ಪಲ್ಲೇದ ಹಬ್ಬದ ಅಂಗವಾಗಿ ಸೋಮವಾರ ಬನಶಂಕರಿ ದೇವಿ ಮೂರ್ತಿಗೆ ಉಡುಗೊರೆಯಾಗಿ ಅರ್ಚಕರು ತಹರೇವಾರಿ ತರಕಾರಿ ಮಾಲೆಯನ್ನು ಅರ್ಪಿಸಿ ಆರಾಧಿಸಿದರು.

ಮಳೆ ಹೋಗಿ ಜನತೆ ಮತ್ತು ಪ್ರಾಣಿಗಳು ತತ್ತರಿಸಿದಾಗ ದೇವಿಯು ತನ್ನ ತನುವಿನಿಂದ ತರಕಾರಿಯನ್ನು ಸೃಷ್ಟಿಸಿ ಲೋಕವನ್ನು ರಕ್ಷಿಸಿದ್ದಾಳೆ ಎಂಬ ಪೌರಾಣಿಕ ಹಿನ್ನೆಲೆಯಲ್ಲಿ ಪ್ರತಿ ವರ್ಷ ರಥೋತ್ಸವದ ಹಿಂದಿನ ದಿನ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಪಲ್ಲೇದ ಹಬ್ಬ ಆಚರಿಸುತ್ತಾರೆ.

ಮಹಿಳೆಯರು ಮನೆಯಲ್ಲಿ ವೈವಿಧ್ಯಮಯ ತರಕಾರಿ ಮಲ್ಲೆಯನ್ನು ಮಾಡಿ ಮನೆ ಮನೆಗೆ ತೆರಳಿ ರೊಟ್ಟಿ ಪಲ್ಲೆಯನ್ನು ವಿನಿಮಯ ಮಾಡುವ ಮೂಲಕ ಪಲ್ಲೇದ ಹಬ್ಬ ಆಚರಿಸುವರು. ಉತ್ತರ ಕರ್ನಾಟಕದ ಆರಾಧ್ಯ ಶಕ್ತಿದೇವತೆಯ ದರ್ಶನ ಪಡೆಯಲು ಕೆಲವು ಭಕ್ತರು ಪಾದಯಾತ್ರೆಯಿಂದ ದೇವಾಲಯಕ್ಕೆ ಆಗಮಿಸಿದರು.

ADVERTISEMENT

ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಮುಗಿದಿವೆ. ಬನದ ಹುಣ್ಣಿಮೆ ದಿನ ಜ. 2ರಂದು ಸಂಜೆ 5 ಗಂಟೆಗೆ ಸಡಗರ ಸಂಭ್ರಮದಿಂದ ಜರುಗಲಿದೆ. ಶಕ್ತಿದೇವತೆಯ ರಥೋತ್ಸವಕ್ಕೆ ನಾಡಿವ ವಿವಿಧ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.

ವಿಶೇಷ ಪೊಲೀಸ್‌ ಬಂದೋಬಸ್ತ್: ಬನಶಂಕರಿದೇವಿ ಜಾತ್ರೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗಾಗಿ ವಿಶೇಷ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ ಎಂದು ಪಿಎಸ್‌ಐ ಎಚ್‌.ಎಸ್‌. ನಡಗಡ್ಡಿ ಹೇಳಿದರು.

ಬಂದೋಬಸ್ತ್‌ಗಾಗಿ ಡಿಎಸ್‌ಪಿ, ನಾಲ್ಕು ಜನ ಸಿಪಿಐ, 21 ಪಿಎಸ್‌ಐ, 31 ಎಎಸ್‌ಐ, 275 ಪೊಲೀಸ್‌ ಸಿಬ್ಬಂದಿ, 250 ಹೋಮ್‌ಗಾರ್ಡ್‌ ಮತ್ತು ಎರಡು ಐಆರ್‌ಬಿ, ಕಾಯ್ದಿಟ್ಟ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಜಾತ್ರೆಯಲ್ಲಿ ಕಿಸೆಗಳ್ಳರು, ಮೊಬೈಲ್‌ ಕಳ್ಳರು ಮತ್ತು ಸರಗಳ್ಳರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಇವರ ಪತ್ತೆ ಕಾರ್ಯಕ್ಕೆ ಇಂಟರ್‌ಸ್ಪೆಕ್ಟರ್‌ ಸಿಸಿಟಿವಿ ಕ್ಯಾಮೆರಾ ವಾಹನ ಬರಲಿದೆ. ದೇವಾಲಯ ಮತ್ತು ಜಾತ್ರೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಮಹಿಳೆಯರು ಚಿನ್ನದ ಒಡವೆಗಳ ಬಗ್ಗೆ ಮತ್ತು ಜಾತ್ರೆಗೆ ಅಧಿಕ ಹಣವನ್ನು ತರಬೇಡಿ. ತಂದರೂ ಸಹ ನಿಮ್ಮ ಹಣದ ಬಗ್ಗೆ ಕಾಳಜಿ ಇರಲಿ. ಯಾರಾದರೂ ಕಳ್ಳರು ಬಗ್ಗೆ ಸಂದೇಹ ಕಂಡು ಬಂದರೆ ಠಾಣೆಯಲ್ಲಿ ತಿಳಿಸಿ, ಸಹಕರಿಸಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.