ADVERTISEMENT

‘ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 6:31 IST
Last Updated 22 ಡಿಸೆಂಬರ್ 2017, 6:31 IST
ವಿಜಯಪುರದ ಶಾಲಾ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಬರ್ಬರ ಕೊಲೆ ಘಟನೆಯ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಗುರುವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಿದರು
ವಿಜಯಪುರದ ಶಾಲಾ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಬರ್ಬರ ಕೊಲೆ ಘಟನೆಯ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಗುರುವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಿದರು   

ಬಳ್ಳಾರಿ: ‘ವಿಜಯಪುರದ ಶಾಲಾ ಬಾಲಕಿಯ ಮೇಲೆ ನಡೆದ ಗುಂಪು ಅತ್ಯಾಚಾರ ಮತ್ತು ಬರ್ಬರ ಕೊಲೆ ಘಟನೆಯ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೂರಾರು ಮಂದಿ ನಗರದಲ್ಲಿ ಗುರುವಾರ ಪ್ರತ್ಯೇಕವಾಗಿ ಧರಣಿ, ಮೆರವಣಿಗೆ ನಡೆಸಿದರು.

ಎಐಎಂಎಸ್‌ಎಸ್‌: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಗುರುವಾರ ನಡೆದ ಧರಣಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಎಂ.ಎನ್‌.ಮಂಜುಳಾ, ‘‘ಈ ಘಟನೆಯಿಂದ ಸಮಾಜವೇ ತಲ್ಲಣಗೊಂಡಿದೆ. ಇದು ನವದೆಹಲಿಯಲ್ಲಿ ನಡೆದ ನಿರ್ಭಯಾ ಘಟನೆಯನ್ನು ನೆನಪಿಸುವಂತಿದೆ. ವೃದ್ಧೆ, ಮಹಿಳೆ, ಹಸುಗೂಸು, ಬಾಲಕಿ ಹೀಗೆ ಎಲ್ಲ ವಯೋಮಾನದ ಮಹಿಳೆಯರ ಮೇಲೂ ಅತ್ಯಾಚಾರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಬೇಟಿ ಬಚಾವೋ ಬೇಟಿ ಪಢಾವೊ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಅವರು ಇಲ್ಲಿವರೆಗೂ ಮಹಿಳೆಯರ ರಕ್ಷಣೆಗಾಗಿ ತೆಗೆದುಕೊಂದು ಕ್ರಮಗಳು ಏನು? ಜನರಿಗೆ ಭರವಸೆಯನ್ನು ನೀಡಿದರೆ ಸಾಲದು. ಅವುಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ಶಾಂತಾ, ಕೆ.ಎಂ. ಈಶ್ವರಿ, ಗೋವಿಂದ್, ಅಹಲ್ಯ, ಭಾರ್ಗವಿ, ರೇಖಾ, ರವಿಕಿರಣ್, ಜಗದೀಶ್, ಗಿರಿಜಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಕದಸಂಸ: ಕರ್ನಾಟಕ ದಲಿತ ಸಂಘರ್ಷ (ಭೀಮವಾದ) ಸಮಿತಿಯ ಜಿಲ್ಲಾ ಘಟಕದ ಸದಸ್ಯರು ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಜೆ. ಸೋಮಶೇಖರ ಅವರಿಗೆ ಮನವಿ ಸಲ್ಲಿಸಿದರು. ‘ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದೇ ಅಲ್ಲದೆ ಆಕೆಯನ್ನು ಕೊಲೆ ಮಾಡಿರುವುದು ಅಮಾನವೀಯ ಘಟನೆ. ಇಡೀ ಸಮಾಜವೇ ತಲೆ ತಗ್ಗಿಸುವಂಂಥದ್ದು’ ಎಂದು ಜಿಲ್ಲಾ ಸಂಚಾಲಕ ಓಂಕಾರಪ್ಪ ಕಪ್ಪಗಲ್ಲು ಆತಂಕ ವ್ಯಕ್ತಪಡಿಸಿದರು. ಶಿವುಕುಮಾರ, ಹುಲಿಯಪ್ಪ, ಸಿ. ಮಧುರಾಜು ಗೋನಾಳ್‌, ಹನುಮಂತ, ಮಲ್ಲಿಕಾರ್ಜುನ, ಲಿಂಗಪ್ಪ, ಶರಣಬಸವ, ಚಂದ್ರ, ನಾಗೇಂದ್ರ ಇದ್ದರು.

ಪ್ರಜಾಸೇನೆ ಆಗ್ರಹ: ‘ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿ ಭಾರತೀಯ ಪ್ರಜಾ ಸೇನೆ (ಅಂಬೇಡ್ಕರ ವಾದ) ಜಿಲ್ಲಾ ಸಮಿತಿಯ ಸದಸ್ಯರು ಧರಣಿ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪೋರ್ಟ್‌ ಪಂಪಾ, ಮುಖಂಡರಾದ ನರೇಂದ್ರ ಕುಮಾರ, ಪೋರ್ಟ್ ಭಾಸ್ಕರ್‌, ಪೋರ್ಟ್‌ ಮಂಜುನಾಥ, ಶ್ರೀರಾಮುಲು, ಪ್ರದೀಪ್‌, ಸಾಯಿ, ರುದ್ರಮುನಿ, ಮೇಟಿ ಉಮಣ್ಣ, ಅಭಿ, ಮಂಜು, ಶ್ರೀನಿವಾಸ ಇದ್ದರು.

* * 

ಸರ್ಕಾರಗಳಿಗೆ, ಜನಪ್ರತಿನಿಧಿ ಗಳಿಗೆ ಜವಾಬ್ದಾರಿ ಇಲ್ಲ. ಇಂಥ ನೀಚ ಕೃತ್ಯಗಳನ್ನು ತಡೆದು, ಆರೋಪಿಗಳಿಗೆ ಶಿಕ್ಷೆ ನೀಡದಿದ್ದರೆ ಹೋರಾಟ ರೂಪಿಸಲಾಗುವುದು
ಎಂ.ಎನ್‌.ಮಂಜುಳಾ ರಾಜ್ಯ ಘಟಕದ ಉಪಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.