ADVERTISEMENT

ಎಡಿಸಿ ಭರವಸೆ: ಸತ್ಯಾಗ್ರಹ ಕೈಬಿಟ್ಟ ರೈತರು

ಶುಕ್ರವಾರ ಸಂಜೆ ಸ್ಪಷ್ಟ ನಿರ್ಧಾರ: ಎಡಿಸಿ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 6:14 IST
Last Updated 6 ಏಪ್ರಿಲ್ 2018, 6:14 IST

ಬಳ್ಳಾರಿ: ‘ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ.15ರವರೆಗೆ ನೀರು ಹರಿಸಬೇಕು ಎಂಬ ಕೋರಿಕೆಯ ಕುರಿತು ಏ.6ರ ಸಂಜೆಯೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ಕುಮಾರ್‌ ಅವರು ನೀಡಿದ ಭರವಸೆ ಮೇರೆಗೆ ರೈತರು ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವನ್ನು ಗುರುವಾರ ಸಂಜೆ ಕೊನೆಗೊಳಿಸಿದರು.ಬುಧವಾರ ಸತ್ಯಾಗ್ರಹ ಆರಂಭಿಸಿದ್ದ ರೈತ ಮುಖಂಡರಲ್ಲಿ ಕೆಲವರು ಗುರುವಾರ ಮಧ್ಯಾಹ್ನದ ಹೊತ್ತಿಗೆ ಅಸ್ವಸ್ಥರಾದಂತೆ ಕಂಡುಬಂದ ಕಾರಣ, ಜಿಲ್ಲಾ ಆಸ್ಪತ್ರೆಯ ವೈದ್ಯರು ಬಂದು ಆರೋಗ್ಯ ತಪಾಸಣೆ ನಡೆಸಿದರು. ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಆರ್.ಮಾಧವರೆಡ್ಡಿ, ಬಸವನಗೌಡ ಮತ್ತು ತಿಮ್ಮನಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು.

ಅದಕ್ಕೂ ಮುನ್ನ ಮುಷ್ಕರದ ಸ್ಥಳಕ್ಕೆ ಬಂದ ಸತೀಶ್‌ಕುಮಾರ್‌, ‘ಕಲಬುರ್ಗಿ ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚಿಸಿ ರೈತ ಪರವಾಗಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ವಾಟ್ಸ್‌ ಆ್ಯಪ್‌ ಮನವಿ: ‘ಮುಷ್ಕರದ ಕುರಿತು ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರಿಗೆ ವಾಟ್ಸ್‌ ಆ್ಯಪ್‌ ಮೂಲಕ ಮಾಹಿತಿ ನೀಡಿ, ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದ್ದೆವು. ಅದೇ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೂ ಸಲ್ಲಿಸಿದೆವು. ಶುಕ್ರವಾರ ಸಂಜೆ ಹೊರಬೀಳುವ ತೀರ್ಮಾನಕ್ಕಾಗಿ ಎದುರು ನೋಡುತ್ತಿದ್ದೇವೆ. ರೈತರ ಪರವಾಗಿ ಇಲ್ಲದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಮಲ್ಲಿಕಾರ್ಜುನ
ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.